ಹುಬ್ಬಳ್ಳಿ:ಅನೈತಿಕ ಸಂಬಂಧ ಬೆಳೆಸಲು ಪ್ರಯತ್ನಿಸಿದ್ದ ಎಂಬ ಕಾರಣಕ್ಕೆ ಹೊಂಚು ಹಾಕಿ ಕೊಲೆ ಮಾಡಿದ್ದ ಇಬ್ಬರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ 60 ಸಾವಿರ ರೂ. ದಂಡ ವಿಧಿಸಿ ನಾಯ್ಯಾಲಯ ಆದೇಶ ಹೊರಡಿಸಿದೆ.
ಬೆಂಡಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ಯಲ್ಲಾಪುರ ಓಣಿಯ ಕರಿಗಣ್ಣವರ ಹಕ್ಕಲದ ಗಣೇಶ ಎಂಟರ್ಪ್ರೈಸೆಸ್ ಹಾಲಿನ ಡೈರಿ ಮಾಲೀಕ ರವಿಚಂದ್ರ ಕುಂದಗೋಳ ಎಂಬಾತ ಕೊಲೆಯಾದವ. ಈತ ರಾಘವೇಂದ್ರ ಮಾಳಗಿ ತಂಗಿ ಹಾಗೂ ಮಂಜುನಾಥ ಜೈನಗೌಡ ಹೆಂಡತಿಯೊಂದಿಗೆ ಅನೈತಿಕ ಸಂಬಂಧ ಬೆಳೆಸಲು ಪ್ರಯತ್ನಿಸಿದ್ದ ಎನ್ನಲಾಗಿತ್ತು. ಈ ಹಿನ್ನೆಲೆ ದ್ವೇಷದಿಂದ 2014 ರ ಮೇ. 20 ರಂದು ರಾತ್ರಿ 3.30ಕ್ಕೆ ಡೈರಿಯಲ್ಲಿರುವಾಗ ಕಣ್ಣಿಗೆ ಕಾರದ ಪುಡಿ ಎರಚಿ, ನಂತರ ಬಡಗಿಯಿಂದ ಹೊಡೆದು ಪ್ರಜ್ಞೆ ತಪ್ಪಿಸಿ ಅವನ ಕೈಕಾಲು ಕಟ್ಟಿ, ಬಾಯಿಗೆ ಬಟ್ಟೆ ತುರುಕಿ ಕಿಡ್ಯ್ನಾಪ್ ಮಾಡಿದ್ದರು. ಟಾಟಾ ಏಸ್ನಲ್ಲಿ ಅಪಹರಿಸಿಕೊಂಡು ದಾಂಡೇಲಿಯ ಜೋಯಿಡಾ ರಸ್ತೆಯಲ್ಲಿ ಕಾಳಿ ನದಿಯ ದಂಡೆ ಮೇಲೆ ರವಿಚಂದ್ರನ ಕುತ್ತಿಗೆ ಹಗ್ಗ ಬಿಗಿದು ಕೊಲೆ ಮಾಡಿದ್ದರು.
ನಂತರ ಮೃತದೇಹವನ್ನು ವಿರ್ನೋಲಿ ಅರಣ್ಯ ವಲಯದ ತಗ್ಗಿನ ಪ್ರದೇಶದಲ್ಲಿ ಮಣ್ಣಲ್ಲಿ ಹೂತಿದ್ದರು. ಕೊಲೆ ಮಾಡಲು ಬಳಸಿದ ಬಡಗೆ, ಮೊಬೈಲ್ ಮತ್ತು ಸಲಕರಣೆಗಳನ್ನು ಹರಿಯುವ ನೀರಿನಲ್ಲಿ ಎಸೆದು ಸಾಕ್ಷಿ ಇಲ್ಲದ ಹಾಗೆ ಮಾಡಿದ್ದರು. ಆದರೆ ಕೊಲೆ ಮಾಡಲು ಬಳಸಿದ ಟಾಟಾಯೇಸ್ನ್ನು ಧಾರವಾಡದಲ್ಲಿ ಬಿಟ್ಟು ಬಂದಿದ್ದರು.