ಧಾರವಾಡ: ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮತ್ತೆ ಕಿಂಗ್ ಮೇಕರ್ ಆಗಲಿದ್ದಾರೆ ಎಂದು ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಭವಿಷ್ಯ ನುಡಿದಿದ್ದಾರೆ.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಮತ್ತೆ ನಮ್ಮ ಸರ್ಕಾರ ಅಂತಾ ಯಾವ ಅರ್ಥದಲ್ಲಿ ಹೇಳುತ್ತಿದ್ದಾರೋ ಗೊತ್ತಿಲ್ಲ, ನಮ್ಮದೇ ಸರ್ಕಾರ ಎನ್ನುವುದು ಬಹಳ ಕಷ್ಟ. ರಾಜಕೀಯವಾಗಿ ಏನಾದರೂ ಹೆಚ್ಚು ಕಮ್ಮಿಯಾದರೆ ಎನ್ನುವ ವಿಚಾರ ಇರಬಹುದು. ಬಿಜೆಪಿಯಲ್ಲಿ 120 ಶಾಸಕರು ಇದ್ದಾರೆ, ಆದರೆ ಅತೃಪ್ತರ ಗುಂಪು ಸಹ ಜಾಸ್ತಿ ಆಗಿದೆ ಎಂದರು.
ಬಿಜೆಪಿಯ ಹೈಕಮಾಂಡ್ ಗಟ್ಟಿಯಾಗಿ ಇದೆ ಅಂತಿದ್ದಾರೆ. ಆದರೆ, ಒಳಗಿಂದೊಳಗೆ ಒರಿಜನಲ್ ಬಿಜೆಪಿಯವರಿಗೆ ಬಹಳ ನೋವುಗಳಿವೆ. ಯತ್ನಾಳ ಅಂತಹವರಿಗೆ ಯಾವ ಸ್ಥಾನವೂ ಇಲ್ಲ ಎಂದರೆ ಮನಸ್ಸಿಗೆ ನೋವಾಗುತ್ತೆ. ನನಗೆ ಅನಿಸಿದಂತೆ ಸರ್ಕಾರದಲ್ಲಿ ಅತೃಪ್ತಿಯ ಹೊಗೆ ಶುರುವಾದರೆ ಅದು ಬಹಳ ಕಷ್ಟ, ಆಗ ಕೆಲ ಶಾಸಕರು ಹೆಚ್ಚು ಕಮ್ಮಿ ಮಾಡಿದ್ರೆ ಆಪರೇಷನ್ ಕಮಲ ಹೋಗಿ ಬೇರೇನೇ ಆಗುತ್ತೆ ಎಂದು ಹೊರಟ್ಟಿ ಹೇಳಿದರು.
ಸಹಜವಾಗಿ ಕುಮಾರಸ್ವಾಮಿ ಕಿಂಗ್ ಮೇಕರ್ ಮೇಕರ್ ಆಗುವ ಸ್ಥಾನದಲ್ಲಿದ್ದಾರೆ, ಆದ್ದರಿಂದ ಮತ್ತೊಮ್ಮೆ ಕಿಂಗ್ ಮೇಕರ್ ಆಗುವ ಸಾಧ್ಯತೆ ಇದೆ ಎಂದು ಹೊರಟ್ಟಿ ಹೇಳಿದ್ದಾರೆ.