ಧಾರವಾಡ :ದೈನಂದಿನ ವ್ಯವಹಾರದಲ್ಲಿ ಕನ್ನಡ ಭಾಷೆಯನ್ನು ನಿರ್ಲಕ್ಷ್ಯ ಮಾಡಲಾಗುತ್ತಿದ್ದು, ತಮ್ಮ ಈ ನಡೆಯನ್ನು ಬದಲಾಯಿಸಿಕೊಳ್ಳಬೇಕು ಎಂದು ಕರ್ನಾಟಕ ನವ ನಿರ್ಮಾಣ ಸೇನೆ ಕಾರ್ಯಕರ್ತರು ನಗರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖಾ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.
ಬ್ಯಾಂಕ್ ಚಲನ್, ಪಾಸ್ಬುಕ್ ಹಿಂದಿಮಯ: ಕನ್ನಡ ಬಳಸುವಂತೆ ನವ ನಿರ್ಮಾಣ ಸೇನೆ ಮನವಿ - Appeal to SBI from Karnataka Nava Nirman Sena
ಬ್ಯಾಂಕ್ ವ್ಯವಹಾರಗಳಲ್ಲಿ ಕನ್ನಡಕ್ಕಿಂತ ಹಿಂದಿ, ಇಂಗ್ಲಿಷ್ ಭಾಷೆಯನ್ನು ಹೆಚ್ಚಾಗಿ ಬಳಸಲಾಗುತ್ತಿದೆ. ಆದ್ದರಿಂದ ಈ ಕ್ರಮವನ್ನು ಬದಲಾಯಿಸಿಕೊಂಡು ಕನ್ನಡ ಭಾಷೆಗೆ ಮೊದಲ ಸ್ಥಾನ ನೀಡಬೇಕು ಎಂದು ಕರ್ನಾಟಕ ನವ ನಿರ್ಮಾಣ ಸೇನೆ ಕಾರ್ಯಕರ್ತರು ಧಾರವಾಡ ನಗರದ ಎಲ್.ಐ.ಸಿ. ಕಚೇರಿ ಬಳಿಯ ಎಸ್ಬಿಐ ಶಾಖೆಗೆ ಭೇಟಿ ನೀಡಿ ಮನವಿ ಸಲ್ಲಿಸಿದರು.
ನಗರದ ಎಲ್.ಐ.ಸಿ. ಕಚೇರಿ ಬಳಿಯ ಎಸ್ಬಿಐ ಶಾಖೆಗೆ ಆಗಮಿಸಿದ ಸಂಘಟನೆಯ ಕಾರ್ಯಕರ್ತರು, ಪಾಸ್ ಬುಕ್, ಚಲನ್, ಚೆಕ್ ಬುಕ್ ಸೇರಿದಂತೆ ಬ್ಯಾಂಕ್ ವ್ಯವಹಾರಗಳಲ್ಲಿ ಸ್ಥಳೀಯ ಭಾಷೆಯನ್ನು ಕಡೆಗಣಿಸಿ ರಾಷ್ಟ್ರ ಭಾಷೆ ಹೆಸರಿನಲ್ಲಿ ಬಲವಂತವಾಗಿ ಹಿಂದಿ ಹೇರಲಾಗುತ್ತಿದೆ. ಬ್ಯಾಂಕಿನ ದೈನಂದಿನ ವ್ಯವಹಾರದಲ್ಲಿ ಇಂಗ್ಲಿಷ್, ಹಿಂದಿ ಭಾಷೆಯಲ್ಲಿ ದಾಖಲೆಗಳನ್ನು ಮುದ್ರಿಸಿ, ಕನ್ನಡಕ್ಕೆ ಅವಮಾನ ಮಾಡಲಾಗುತ್ತಿದೆ. ಆದ್ದರಿಂದ ತ್ರಿಭಾಷಾ ನಿಯಮದನ್ವಯ ಸ್ಥಳೀಯ ಭಾಷೆಗೆ ಮೊದಲ ಸ್ಥಾನಮಾನ ನೀಡಬೇಕು ಎಂದು ಆಗ್ರಹಿಸಿದರು.
ಮುಂದಿನ 15 ದಿನದೊಳಗೆ ಪಾಸ್ ಬುಕ್, ಚಲನ್, ಚೆಕ್ ಬುಕ್ಗಳಲ್ಲಿ ಪ್ರಥಮ ಭಾಷೆಯಾಗಿ ಕನ್ನಡ ಮುದ್ರಿಸಿ ತಮ್ಮ ವ್ಯವಹಾರ ನಡೆಸಬೇಕು. ಕನ್ನಡ ಮುದ್ರಿಸದೆ ಹೋದ್ರೆ ಬ್ಯಾಂಕ್ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.