ಕರ್ನಾಟಕ

karnataka

ETV Bharat / state

ಇಂದಿನ ಜನತಾ ದರ್ಶನದಲ್ಲಿ 405ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆ : ಸಾವಿರಕ್ಕೂ ಹೆಚ್ಚು ಜನರ ಅಹವಾಲು ಆಲಿಕೆ

ಧಾರವಾಡದಲ್ಲಿ ಜಿಲ್ಲಾಮಟ್ಟದ ಜನತಾ ದರ್ಶನ ಕಾರ್ಯಕ್ರಮ ಯಶಸ್ವಿಯಾಗಿದ್ದು, 405ಕ್ಕೂ ಹೆಚ್ಚು ಅಹವಾಲುಗಳು ಸಲ್ಲಿಕೆಯಾಗಿವೆ.

janatha-darshan-program-at-dharwad
ಧಾರವಾಡದಲ್ಲಿ ಜಿಲ್ಲಾಮಟ್ಟದ ಜನತಾ ದರ್ಶನ ಕಾರ್ಯಕ್ರಮ

By ETV Bharat Karnataka Team

Published : Sep 25, 2023, 9:15 PM IST

ಧಾರವಾಡ: ಸೋಮವಾರ ನಗರದಲ್ಲಿ ಹಮ್ಮಿಕೊಂಡಿದ್ದ ಜನತಾ ದರ್ಶನ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಜಿಲ್ಲಾಡಳಿತ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮದಲ್ಲಿ ವಿವಿಧ ಗ್ರಾಮಗಳ ನಾಗರಿಕರು ತಮ್ಮ ಅಹವಾಲನ್ನು ಸಲ್ಲಿಸಿದರು. ಮುಂದಿನ ದಿನಗಳಲ್ಲಿ ತಾಲೂಕಾ ಮಟ್ಟದಲ್ಲಿ ಜನತಾ ದರ್ಶನ ಆಯೋಜಿಸುವ ಕುರಿತು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.

ಜನತಾ ದರ್ಶನ ಕಾರ್ಯಕ್ರಮದ ಬಳಿಕ ಮಾತನಾಡಿದ ಅವರು, ಇಂದು ನಡೆದ ಜಿಲ್ಲಾಮಟ್ಟದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಸುಮಾರು 405ಕ್ಕೂ ಹೆಚ್ಚು ಅಹವಾಲುಗಳು ಸಲ್ಲಿಕೆಯಾಗಿವೆ. ಇವುಗಳಲ್ಲಿ ಶೇ.50 ರಿಂದ 60ರಷ್ಟು ಪ್ರಕರಣಗಳಲ್ಲಿ ರಾಜ್ಯಮಟ್ಟದಲ್ಲಿ ಸೂಕ್ತ ಕ್ರಮ ಕೈಗೊಳ್ಳುವ ಅಗತ್ಯವಿದೆ. ಈ ಕುರಿತು ಅಹವಾಲು ಸಲ್ಲಿಕೆದಾರರಿಗೆ ಮನವರಿಕೆ ಮಾಡಿ ಅರ್ಜಿಗಳನ್ನು ಸಂಬಂಧಪಟ್ಟ ರಾಜ್ಯಮಟ್ಟದ ಇಲಾಖಾ ಮುಖ್ಯಸ್ಥರಿಗೆ ಸೂಕ್ತ ಶಿಫಾರಸ್ಸಿನೊಂದಿಗೆ ರವಾನಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಧಾರವಾಡದಲ್ಲಿ ಜಿಲ್ಲಾಮಟ್ಟದ ಜನತಾ ದರ್ಶನ ಕಾರ್ಯಕ್ರಮ

405ಕ್ಕೂ ಹೆಚ್ಚು ಅಹವಾಲು ಸಲ್ಲಿಕೆ: ಕೆಲವು ಅಹವಾಲುಗಳು ಸ್ಥಳೀಯ ಮಟ್ಟದ್ದಾಗಿದ್ದವು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸ್ಥಳೀಯ ಮಟ್ಟದಲ್ಲಿ ಪರಿಹರಿಸಲು ನಿರ್ದೇಶನ ನೀಡಲಾಗಿದೆ. ಜಿಲ್ಲಾಧಿಕಾರಿಗಳು ಮತ್ತು ಅಹವಾಲಿಗೆ ಸಂಬಂಧಿಸಿದ ಅಧಿಕಾರಿಗಳು ದೂರುದಾರರೊಂದಿಗೆ ಸಮಾಲೋಚನಾ ಸಭೆ ನಡೆಸಿ ಸಮಸ್ಯೆ ಇತ್ಯರ್ಥಪಡಿಸಲು ಸೂಚಿಸಲಾಗಿದೆ ಎಂದರು.

ಜನತಾ ದರ್ಶನದಲ್ಲಿ ಅವಳಿನಗರದ ಜಗದೀಶ ನಗರ, ರಾಮನಗರ, ನೆಹರು ನಗರಗಳ ವ್ಯಾಪ್ತಿಯಲ್ಲಿ ಆಶ್ರಯ ಮನೆಗಳ ಹಕ್ಕುದಾರಿಕೆ ಬಗ್ಗೆ ದೂರುಗಳು ಬಂದಿದ್ದವು. ಈ ಬಗ್ಗೆ ಸಂಬಂಧಿಸಿದ ಪ್ರಾಧಿಕಾರದಿಂದ ಮನೆ ಮನೆ ಸಮೀಕ್ಷೆ ಹಾಗೂ ಅವುಗಳ ಅಗತ್ಯ ದಾಖಲಾತಿಗಳ ಪಡೆಯುವಿಕೆ ಕಾರ್ಯ ನಡೆದಿದೆ. ಮುಂದಿನ ಎರಡು ಮೂರು ತಿಂಗಳಿನಲ್ಲಿ ಆಶ್ರಯ ಮನೆಗಳ ಸಮೀಕ್ಷೆ ಪೂರ್ಣಗೊಳಿಸಿ ಎಲ್ಲಾ ಪಕ್ಷದ ಜನಪ್ರತಿನಿಧಿಗಳ, ಪಾಲಿಕೆ ಸದಸ್ಯರ ಸಭೆ ನಡೆಸುವ ಮೂಲಕ ಸರ್ಕಾರಕ್ಕೆ ಸೂಕ್ತ ಶಿಫಾರಸು ಮಾಡಲಾಗುವುದು. ಗುಳೆದಕೊಪ್ಪ ಗ್ರಾಮದಲ್ಲಿ ಭೂಸ್ವಾಧೀನ ಪ್ರಕ್ರಿಯೆ ಜಾರಿಯಲ್ಲಿದ್ದು, ಕೆಲವು ರೈತರು ಇಂದಿನ ಜನತಾ ದರ್ಶನದಲ್ಲಿ ಭೂಮಿ ದರದ ಬಗ್ಗೆ, ಭೂಮಿ ನೀಡದಿರುವ ಬಗ್ಗೆ ಅಹವಾಲು ಸಲ್ಲಿಸಿದ್ದಾರೆ. ಈ ಕುರಿತು ಪರಿಶೀಲಿಸಿ ಕಾನೂನಾತ್ಮಕವಾದ ಕ್ರಮ ವಹಿಸಲಾಗುವುದು ಸಚಿವರು ತಿಳಿಸಿದರು.

ಇಂದಿನ ಜನತಾ ದರ್ಶನದಲ್ಲಿ 405ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆ : ಸಾವಿರಕ್ಕೂ ಹೆಚ್ಚು ಜನರ ಅಹವಾಲು ಆಲಿಕೆ

ಪರಿಹಾರಕ್ಕೆ ಸಚಿವರ ಸೂಚನೆ :ಜಿಲ್ಲೆಯಲ್ಲಿ ಬರ ಘೋಷಣೆಯಾಗಿದ್ದರೂ ಕೆಲವು ಬ್ಯಾಂಕರ್ಸ್‍ಗಳು ರೈತರಿಗೆ ಸಾಲ ವಸೂಲಾತಿಗಾಗಿ ನೋಟಿಸ್​ ಜಾರಿ ಮಾಡುತ್ತಿದ್ದಾರೆ. ಈ ಕುರಿತು ರಕ್ಷಣೆ ನೀಡಬೇಕೆಂದು ರೈತರು ಅಹವಾಲು ಸಲ್ಲಿಸಿದ್ದಾರೆ. ಲೀಡ್ ಬ್ಯಾಂಕ್ ಮ್ಯಾನೇಜರ್ ಮೂಲಕ ಸಂಬಂಧಿಸಿದ ಬ್ಯಾಂಕ್‍ಗಳಿಗೆ ನಿರ್ದೇಶನ ನೀಡಿ, ಸಾಲ ವಸೂಲಾತಿಗಾಗಿ ಯಾವುದೇ ರೀತಿಯ ಒತ್ತಡ, ನೋಟಿಸ್ ನೀಡದಂತೆ ಸೂಚಿಸಲಾಗಿದೆ. ಮತ್ತು ನೀಡಿರುವ ನೋಟಿಸ್‍ಗಳನ್ನು ನಿಯಮಾನುಸಾರ ಹಿಂಪಡೆಯುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಬರ ಪರಿಹಾರ ಕಾಮಗಾರಿಗಳನ್ನು ಆರಂಭಿಸಲಾಗಿದೆ. ಬೆಳೆಹಾನಿ ಸಮೀಕ್ಷೆ ಆರಂಭಿಸಲು ಮತ್ತು ಸರ್ಕಾರಕ್ಕೆ ಸೂಕ್ತ ಪರಿಹಾರ ಪ್ರಸ್ತಾವನೆ ಸಲ್ಲಿಸಲು ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಯಾವುದೇ ರೀತಿಯ ಕುಡಿಯುವ ನೀರಿನ ಸಮಸ್ಯೆ ಉದ್ಭವವಾಗಿಲ್ಲ. ಅಗತ್ಯವಿರುವಲ್ಲಿ ಬೋರ್​ವೆಲ್ ಹಾಗೂ ಇತರ ಜಲ ಮೂಲಗಳಿಂದ ನೀರು ಸರಬರಾಜು ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ದನಕರುಗಳಿಗೆ ಮುಂದಿನ ಐದು ತಿಂಗಳಿಗೆ ಆಗುವಷ್ಟು ಮೇವು ದಾಸ್ತಾನು ಇದೆ. ಯಾವುದೇ ರೀತಿಯ ಮೇವಿನ ಕೊರತೆ ಇಲ್ಲ ಎಂದರು.

ಮುಖ್ಯಮಂತ್ರಿಗಳು ಪ್ರತಿ ಜಿಲ್ಲೆಯಲ್ಲಿ ನೀರಿನ ಲಭ್ಯತೆಗೆ ಅನುಗುಣವಾಗಿ ಪ್ರತಿ ರೈತರಿಗೆ ಉಚಿತವಾಗಿ ಮೇವಿನ ಬೀಜವನ್ನು ವಿತರಿಸುವ ಮೂಲಕ ಮೇವು ಬೆಳೆಯಲು ಪ್ರೋತ್ಸಾಹ ನೀಡಲು ನಿರ್ದೇಶಿಸಿದ್ದಾರೆ. ಮೇವಿನ ಕೊರತೆಯ ದೂರುಗಳಿದ್ದಲ್ಲಿ ತಕ್ಷಣ ತಾಲೂಕು ಆಡಳಿತ ಅಥವಾ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಭೂ ನೋಂದಣಿ ಮತ್ತು ಭೂ ಪರಿವರ್ತನೆ ಕುರಿತು ರಾಜ್ಯಸರ್ಕಾರ ಪ್ರಕಟಿಸಿರುವ ಪರಿಷ್ಕೃತ ದರವು ಸರಿಯಾಗಿಲ್ಲ. ಇದನ್ನು ಮತ್ತೊಮ್ಮೆ ಪರಿಷ್ಕರಿಸಿ ಈಗ ಘೋಷಿಸಿರುವ ದರವನ್ನು ಕಡಿಮೆ ಮಾಡುವಂತೆ ಮನವಿ ಸಲ್ಲಿಕೆಯಾಗಿದೆ. ಈ ಸಂಬಂಧ ಕಂದಾಯ ಸಚಿವರು ಈಗಾಗಲೇ ಸ್ಪಷ್ಟೀಕರಣ ನೀಡಿದ್ದಾರೆ. ಆದರೂ ಸಹ ಇಂದಿನ ಜನತಾ ದರ್ಶನದಲ್ಲಿ ಸಲ್ಲಿಕೆಯಾಗಿರುವ ಅಹವಾಲನ್ನು ಸಚಿವರಿಗೆ, ಸರ್ಕಾರಕ್ಕೆ ಸಲ್ಲಿಸಲಾಗುವುದೆಂದು ಸಚಿವ ಲಾಡ್ ಅವರು ಹೇಳಿದರು.

ಕೇಂದ್ರ ಸರ್ಕಾರ ವಿರುದ್ಧ ವಾಗ್ದಾಳಿ :ಬರ ಪರಿಹಾರ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಸಂತೋಷ್ ಲಾಡ್​, ಇವರೆಲ್ಲ ನಮ್ಮ ವಿರುದ್ಧವೇ ಬರಗಾಲ ಸಂಬಂಧ ಪ್ರತಿಭಟನೆ ಮಾಡುತ್ತಿದ್ದಾರೆ. ನಮ್ಮಲ್ಲಿ 28 ಜನ ಸಂಸದರಿದ್ದಾರೆ. ಜೊತೆಗೆ ಕೇಂದ್ರ ಸಚಿವರೂ ಇದ್ದಾರೆ. ಹಳೇ ಮಾನದಂಡ ತಿದ್ದುಪಡಿಗೆ ಸಿಎಂ ಸಹ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ಎಲ್ಲವನ್ನೂ ಕೇಂದ್ರದವರೇ ಆನ್‌ಲೈನ್ ಸರ್ವೆ ಮಾಡುತ್ತಾರೆ. ತಾಂತ್ರಿಕವಾಗಿ ಏನೇ ಅಡ್ಡಿ ಇದ್ದರೂ ಅದಕ್ಕೆ ಕೇಂದ್ರದ ಮಾನದಂಡವೇ ಕಾರಣ. ಹೀಗಾಗಿ ಅವರು ಸಹ ಕೇಂದ್ರದ ಮೇಲೆ ಒತ್ತಡ ಹಾಕಲಿ ಎಂದು ಹೇಳಿದರು.

ಇದನ್ನೂ ಓದಿ :ಜನರಿಗೆ ಸ್ಪಂದಿಸಬೇಕೆಂದು ಜನತಾ ದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ: ಸಚಿವ ಪರಮೇಶ್ವರ್​

ABOUT THE AUTHOR

...view details