ಕರ್ನಾಟಕ

karnataka

ಫ್ಲೈಓವರ್ ನಿರ್ಮಾಣಕ್ಕೆ ಮಹಾನಗರ ಪಾಲಿಕೆ ಆಸ್ತಿ ಮಾರಾಟ.. HDMC ವಿರುದ್ಧ ಸಾರ್ವಜನಿಕರ ಕಿಡಿ..

By

Published : Jan 29, 2021, 4:03 PM IST

ಪಾಲಿಕೆ ಮೊದಲೇ ಆರ್ಥಿಕ ಸಂಕಷ್ಟದಲ್ಲಿದೆ. ಈ ಸಂದರ್ಭದಲ್ಲಿ ತನ್ನ ಒಡೆತನದ ಆಸ್ತಿ ಮಾರಾಟ ಮಾಡುವುದು ಸರಿಯಲ್ಲ. 50 ಕೋಟಿ ರೂಪಾಯಿಗಾಗಿ ಪಾಲಿಕೆ ತನ್ನ ಆಸ್ತಿ ಮಾರಾಟ ಪ್ರಕ್ರಿಯೆಯನ್ನು ಕೂಡಲೇ ಕೈಬಿಡಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರದ ಅನುದಾನದಲ್ಲಿ ಫ್ಲೈಓವರ್ ಆಗಬೇಕು..

Hubli
ಹುಬ್ಬಳ್ಳಿ

ಹುಬ್ಬಳ್ಳಿ :ರಾಜ್ಯದ 2ನೇ ಅತಿದೊಡ್ಡ ಮಹಾನಗರ ಪಾಲಿಕೆ ಹೊಂದಿರುವ ಜಿಲ್ಲೆ ಧಾರವಾಡ. ಹುಬ್ಬಳ್ಳಿ-ಧಾರವಾಡ ಅವಳಿ ನಗರಿ ಬೆಳೆದಂತೆ ಜಿಲ್ಲೆಯಲ್ಲಿ ಟ್ರಾಫಿಕ್ ಸಮಸ್ಯೆ ತಲೆದೋರಿದೆ.

ಈ ಸಮಸ್ಯೆ ನೀಗಿಸುವ ನಿಟ್ಟಿನಲ್ಲಿ ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಲ್ಲಿ ಕೇಂದ್ರ ಸರ್ಕಾರ 300 ಕೋಟಿ ರೂಪಾಯಿ ವ್ಯಯಿಸಿ ಫ್ಲೈಓವರ್ ನಿರ್ಮಾಣಕ್ಕೆ ಮುಂದಾಗಿದೆ. ಈಗಾಗಲೇ ಯೋಜನೆಯ ಶಂಕು ಸ್ಥಾಪನೆ ಕೂಡ ನೆರವೇರಿಸಲಾಗಿದೆ. ಆದರೆ, ಈ ಫ್ಲೈಓವರ್ ನಿರ್ಮಾಣ ಕಾಮಗಾರಿಗಾಗಿ ಮಹಾನಗರ ಪಾಲಿಕೆ ತನ್ನ ಆಸ್ತಿ ಹರಾಜಿಗೆ ಮುಂದಾಗಿರೋದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಫ್ಲೈಓವರ್ ನಿರ್ಮಾಣಕ್ಕೆ ಆಸ್ತಿ ಮಾರಾಟ‌ ಮಾಡಲು ಮುಂದಾದ ಪಾಲಿಕೆ..

ಮೊನ್ನೆಯಷ್ಟೇ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ವಿಡಿಯೋ ಕಾನ್ಫೆರನ್ಸ್ ಮೂಲಕ ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಲ್ಲಿ ನಿರ್ಮಾಣ ಆಗುತ್ತಿರುವ ಫ್ಲೈಓವರ್ ಯೋಜನೆಗೆ ಚಾಲನೆ ನೀಡಿದ್ದಾರೆ. ಅಲ್ಲದೇ ಯೋಜನೆಯ ಅನುಷ್ಠಾನಕ್ಕೆ 300 ಕೋಟಿಗೂ ಅಧಿಕ ಅನುದಾನ ಬಿಡುಗಡೆಗೊಳಿಸಿದ್ದರು. ಕಾಮಗಾರಿಯ ನೀಲನಕ್ಷೆ ನೋಡಿ ಜಿಲ್ಲೆಯ ಸಂಸದ ಹಾಗೂ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರನ್ನ ಹಾಡಿ ಹೊಗಳಿದ್ದರು.

ಆದರೆ, ಇಂದು ಅದೇ ಯೋಜನೆಯ ಫ್ಲೈಓವರ್ ವಿಸ್ತರಣೆಗೆ ಅಗತ್ಯ ಬೀಳುವ ಹಣಕಾಸು ಕೊರತೆ ನೀಗಿಸಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ತನ್ನ ಒಡೆತನದ ಆಸ್ತಿ ಹರಾಜು ಮಾಡಲು ಸಿದ್ಧತೆ ನಡೆಸಿದೆ. ಯೋಜನೆಗೆ ಹಣಕಾಸು ಕೊರತೆ ಎದುರಾಗಿದ್ದು ಆರಂಭದಲ್ಲೇ ಈಗ ವಿಘ್ನ ಎದುರಾಗಿದೆ.

ಕೇಂದ್ರ ಸರ್ಕಾರದ ಸಿಆರ್​​ಎಫ್ ಅನುದಾನದಡಿ ಫ್ಲೈಓವರ್ ಕಾಮಗಾರಿ ಈಗಾಗಲೇ ಆರಂಭವಾಗಿದೆ. ಚೆನ್ನಮ್ಮ ವೃತ್ತದಿಂದ ಸ್ಟೇಷನ್ ರಸ್ತೆಯ ಅಂಬೇಡ್ಕರ್ ಸರ್ಕಲ್, ದೇಸಾಯಿ ವೃತ್ತ ಹಾಗೂ ಗೋಕುಲ್ ರಸ್ತೆಯ ಕ್ಲಾರ್ಕ್​ ಇನ್​ ಹೋಟೆಲ್‌ವರೆಗೆ ಫ್ಲೈಓವರ್ ನಿರ್ಮಾಣ ಮಾಡಲಾಗುತ್ತಿದೆ. ಆದರೆ, ಬಂಕಾಪುರ ಚೌಕ್‌ದಿಂದ ಕಿತ್ತೂರು ಚೆನ್ನಮ್ಮ ವೃತ್ತ ಸಂಪರ್ಕಿಸುವ ಪಿ.ಬಿ ರಸ್ತೆಯಲ್ಲಿ ಫ್ಲೈಓವರ್ ನಿರ್ಮಾಣ ಕಾರ್ಯ ಬಿಡಲಾಗಿದೆ.

ಇದರಿಂದ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಹಾಗೂ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪಿ.ಬಿ ರಸ್ತೆಯಲ್ಲಿ ಫ್ಲೈಓವರ್​ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಹೀಗಾಗಿ, ಇದಕ್ಕೆ ಅಗತ್ಯ ಬೀಳುವ ಹಣವನ್ನ ಮಹಾನಗರ ಪಾಲಿಕೆಯಿಂದ ವಂತಿಗೆ ಪಡೆಯಲು ನಿರ್ಧರಿಸಲಾಗಿದೆ. ಪಾಲಿಕೆ ತನ್ನ ಒಡೆತನದಲ್ಲಿರುವ ನವನಗರದಲ್ಲಿನ ನಿವೇಶನಗಳ ಮಾರಾಟಕ್ಕೆ ಮುಂದಾಗಿದೆ. ಇದಕ್ಕೆ ಸಾರ್ವಜನಿಕ ವಲಯದಲ್ಲಿ ಭಾರೀ ವಿರೋಧ ವ್ಯಕ್ತವಾಗುತ್ತಿದೆ.

ಮಹಾನಗರ ಪಾಲಿಕೆ ಮೊದಲೇ ಆರ್ಥಿಕ ಸಂಕಷ್ಟದಲ್ಲಿದೆ. ಈ ಸಂದರ್ಭದಲ್ಲಿ ತನ್ನ ಒಡೆತನದ ಆಸ್ತಿ ಮಾರಾಟ ಮಾಡುವುದು ಸರಿಯಲ್ಲ ಅನ್ನೋದು ಸಾರ್ವಜನಿಕರ ಅಭಿಪ್ರಾಯ. 50 ಕೋಟಿ ರೂಪಾಯಿಗಾಗಿ ಪಾಲಿಕೆ ತನ್ನ ಆಸ್ತಿ ಮಾರಾಟ ಪ್ರಕ್ರಿಯೆಯನ್ನು ಕೂಡಲೇ ಕೈಬಿಡಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರದ ಅನುದಾನದಲ್ಲಿ ಫ್ಲೈಓವರ್ ಆಗಬೇಕು ಅನ್ನೋದು ಸಾರ್ವಜನಿಕರ ಒತ್ತಾಯ.

ABOUT THE AUTHOR

...view details