ಕರ್ನಾಟಕ

karnataka

ETV Bharat / state

ಅರ್ಹ ಹೂ ಬೆಳೆಗಾರರು ಪರಿಹಾರಕ್ಕೆ ಅರ್ಜಿ ಸಲ್ಲಿಸುವಂತೆ ಸಚಿವ ಜಗದೀಶ ಶೆಟ್ಟರ್ ಮನವಿ - Minister Jagadish Shettar news

ಹೂವು ಬೆಳೆ ನಷ್ಟದಿಂದ ರೈತರಿಗೆ ತಾತ್ಕಾಲಿಕ ಪರಿಹಾರವಾಗಿ ಹಾಗೂ ಮುಂಬರುವ ದಿನಗಳಲ್ಲಿ ಹೂವು ಬೆಳೆಯನ್ನು ಉತ್ತೇಜಿಸಿ ಪ್ರೋತ್ಸಾಹಿಸುವ ಕ್ರಮವಾಗಿ ಹೆಕ್ಟೇರ್‌ಗೆ ಗರಿಷ್ಠ 25,000 ರೂ. ಪರಿಹಾರವನ್ನು ಸರ್ಕಾರ ಘೋಷಿಸಿದೆ.

Minister Jagadish Shettar
ಹೂವು ಬೆಳೆಗಾರರ ನೆರವಿಗೆ ಸರ್ಕಾರ: ಪರಿಹಾರ ಪಡೆಯಲು ಅರ್ಹ ರೈತರಿಗೆ ಸಚಿವ ಜಗದೀಶ ಶೆಟ್ಟರ್ ಮನವಿ

By

Published : May 17, 2020, 8:18 PM IST

ಹುಬ್ಬಳ್ಳಿ:ದೇಶದಲ್ಲಿ ವಿಧಿಸಿದ ಲಾಕ್​ಡೌನ್​ನಿಂದ ಹೂವಿನ ಬೆಳೆಗಾರರಿಗೆ ಆಗಿರುವ ನಷ್ಟಕ್ಕೆ ಪರಿಹಾರ ನೀಡಲು ಸರ್ಕಾರ ಮುಂದಾಗಿದೆ.

ಹೂವು ಬೆಳೆ ನಷ್ಟ ಹೊಂದಿರುವ ರೈತರಿಗೆ ತಾತ್ಕಾಲಿಕ ಪರಿಹಾರವಾಗಿ ಹಾಗೂ ಮುಂಬರುವ ದಿನಗಳಲ್ಲಿ ಹೂವು ಬೆಳೆಯನ್ನು ಉತ್ತೇಜಿಸಿ ಪ್ರೋತ್ಸಾಹಿಸುವ ಕ್ರಮವಾಗಿ ಹೆಕ್ಟೇರ್‌ಗೆ ಗರಿಷ್ಠ 25,000 ರೂ. ಪರಿಹಾರವನ್ನು ಸರ್ಕಾರ ಘೋಷಿಸಿದೆ. ಜಿಲ್ಲೆಯ ಹೂವು ಬೆಳೆಗಾರರು ಇದರ ಪ್ರಯೋಜನ ಪಡೆಯಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ಅಲ್ಪಾವಧಿ ಹೂವು ಬೆಳೆಗಳಾದ ಚೆಂಡು ಹೂವು, ಸೇವಂತಿಗೆ, ಆಸ್ಕರ್ ಮತ್ತಿತರ ಹೂಗಳು ಹಾಗೂ ಬಹು ವಾರ್ಷಿಕ ಬೆಳೆಗಳಾದ ಕನಕಾಂಬರ, ಗುಲಾಬಿ, ಮಲ್ಲಿಗೆ, ಕಾಕಡ, ಬರ್ಡ್ ಆಫ್ ಪ್ಯಾರಡೈಸ್​, ಗ್ಲಾಡಿಯೋಲಸ್ ಇತ್ಯಾದಿ ಹೂ ಬೆಳೆಗಾರರು ಇದರ ಪ್ರಯೋಜನ ಪಡೆಯಬಹುದು.

ಹೂವಿನ ಬೆಳೆಯು ಕೊಯ್ಲಿಗೆ ಬಂದ ಸಂದರ್ಭದಲ್ಲಿ ಕೋವಿಡ್ -19 ನಿಂದ ದೇಶವ್ಯಾಪ್ತಿ ಲಾಕ್‌ಡೌನ್ ಹೇರಲಾಗಿತ್ತು. ಎಲ್ಲಾ ದೇವಾಲಯಗಳು ಬಂದ್, ಹಬ್ಬ, ಮದುವೆ, ಸಭೆ ಸಮಾರಂಭಗಳು ಮತ್ತು ಮತ್ತಿತರ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಿದ್ದರಿಂದ ರೈತರು ಬೆಳೆದ ಹೂವಿಗೆ ಬೇಡಿಕೆ ಇಲ್ಲದಂತಾಗಿತ್ತು. ಮಾರುಕಟ್ಟೆಗೆ ಸಾಗಿಸಲಾಗದೆ ಹಾಗೂ ಕೂಲಿಕಾರರ ಕೊರತೆಯಿಂದ ತೋಟಗಳಲ್ಲಿ ಬೆಳೆಗಳನ್ನು ಕಟಾವು ಮಾಡದೆ ಬೆಳೆ ಹಾನಿಯಾಗಿದೆ.

ಪ್ರಸಕ್ತ ಹಂಗಾಮಿನಲ್ಲಿ ಕಟಾವಿಗೆ ಬಂದ ಹೂವಿನ ಫಸಲು ಹಾನಿಯಾಗಿರುವ ಪ್ರತಿ ರೈತ ಫಲಾನುಭವಿಗೆ ಹೆಕ್ಟೇರ್‌ಗೆ ಗರಿಷ್ಠ 25,000 ರೂ.ಗಳಂತೆ ಗರಿಷ್ಠ ಒಂದು ಹೆಕ್ಟೇರ್‌ವರೆಗೆ ಪರಿಹಾರ ನೀಡಲಾಗುವುದು.

ಹೂವಿನ ಬೆಳೆಗಾರರಿಗೆ ಮುಖ್ಯಮಂತ್ರಿ ಘೋಷಿಸಿರುವಂತೆ ಪರಿಹಾರವನ್ನು ನೀಡಲು ಅಗತ್ಯವಿರುವ ಹಣವನ್ನು ಸರ್ಕಾರ ತೋಟಗಾರಿಕೆ ಇಲಾಖೆಗೆ ಬಿಡುಗಡೆ ಮಾಡಿದೆ.

ಜಮೀನಿನ ಆರ್‌ಟಿಸಿ ತಮ್ಮ ಹೆಸರಿನಲ್ಲಿರುವ ಅರ್ಹರು ಆಧಾರ್​ಕಾರ್ಡ್, ಬ್ಯಾಂಕ್ ಖಾತೆ ಪಾಸ್ ಪುಸ್ತಕದ ಪ್ರತಿಯನ್ನು ಸಲ್ಲಿಸಬೇಕು.

ಜಂಟಿ ಖಾತೆಯಾಗಿದ್ದಲ್ಲಿ ಇತರೆ ಖಾತೆದಾರರ ಒಪ್ಪಿಗೆ ಪತ್ರ ಪಡೆದಿರಬೇಕು ( Notary ರವರಿಂದ ದೃಢೀಕರಣ ಮಾಡಿಸಬೇಕು ). ತಂದೆ ಅಥವಾ ತಾಯಿ ಹೆಸರಿನಲ್ಲಿ ಜಮೀನಿದ್ದು, ಅವರು ಮರಣ ಹೊಂದಿದ್ದರೆ ಮಾತ್ರ ಗ್ರಾಮ ಲೆಕ್ಕಿಗರಿಂದ ದೃಢೀಕರಿಸಿ, ಕುಟುಂಬದ ಇತರೆ ಸದಸ್ಯರಿಂದ ಒಪ್ಪಿಗೆ ಪಡೆದು ತಮ್ಮ ಹೆಸರಿನಲ್ಲಿ ಅರ್ಜಿ ಸಲ್ಲಿಸಬೇಕು.

ಮಹಿಳೆಯ ಹೆಸರಿನಲ್ಲಿ ಖಾತೆ ಇದ್ದು, ಕುಟುಂಬದ ಇತರೆ ಪುರುಷ ಸದಸ್ಯರ ಹೆಸರಲ್ಲಿ ಅರ್ಜಿ ಸಲ್ಲಿಸಿದ್ದರೆ ಅಂತಹ ಅರ್ಜಿಗಳನ್ನು ಪರಿಗಣಿಸದೇ, ಮಹಿಳೆಯರ ಹೆಸರಿನಲ್ಲಿಯೇ ಅರ್ಜಿ ಸಲ್ಲಿಸುವುದನ್ನು ಉತ್ತೇಜಿಸಬೇಕು.

ಹೆಚ್ಚಿನ ವಿವರಗಳಿಗೆ ಜಿಲ್ಲೆಯ ತೋಟಗಾರಿಕೆ ಉಪನಿರ್ದೇಶಕರು ಅಥವಾ ತಾಲೂಕುಗಳ ತೋಟಗಾರಿಕಾ ಹಿರಿಯ ಸಹಾಯಕ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ABOUT THE AUTHOR

...view details