ಹುಬ್ಬಳ್ಳಿ: ಸರಕು-ಸರಂಜಾಮು ಪೂರೈಕೆಯಲ್ಲಿ ಹಗಳಿರುಳೆನ್ನದೆ ನಿರಂತರವಾಗಿ ಶ್ರಮಿಸುತ್ತಿರುವ ರೈಲ್ವೆ ಇಲಾಖಾ ಸಿಬ್ಬಂದಿಯ ಆರೋಗ್ಯ ರಕ್ಷಣೆ ಹಾಗೂ ಕೋವಿಡ್ ಎದುರಿಸಲು ಮೂರೂ ವಿಭಾಗಗಳೊಂದಿಗೆ ನೈಋತ್ಯ ರೈಲ್ವೆ ಸನ್ನದ್ಧವಾಗಿದೆ.
ಹುಬ್ಬಳ್ಳಿ, ಬೆಂಗಳೂರು ಹಾಗೂ ಮೈಸೂರಿನಲ್ಲಿ ಕೋವಿಡ್ ಶುಶ್ರೂಷಾ ಕೇಂದ್ರಗಳನ್ನು ತೆರೆಯಲಾಗಿದ್ದು, ಹುಬ್ಬಳ್ಳಿಯ ಕೇಂದ್ರೀಯ ರೈಲ್ವೆ ಆಸ್ಪತ್ರೆ, ಬೆಂಗಳೂರು ಹಾಗೂ ಮೈಸೂರು ವಿಭಾಗೀಯ ರೈಲ್ವೆ ಆಸ್ಪತ್ರೆಗಳಲ್ಲಿ ಕ್ರಮವಾಗಿ 100, 149 ಹಾಗೂ 74 ಹಾಸಿಗೆಗಳನ್ನು ಕೋವಿಡ್ ರೋಗಿಗಳ ಚಿಕಿತ್ಸೆಗಾಗಿ ಮೀಸಲಿಡಲಾಗಿದೆ. ಈ ಮೂರೂ ಆಸ್ಪತ್ರೆಗಳಲ್ಲಿ 'ಫೀವರ್ ಕ್ಲಿನಿಕ್' ಗಳು ದಿನದ 24 ಗಂಟೆಯೂ ಕೆಲಸ ಮಾಡುತ್ತಿದ್ದು, ಶಂಕಿತ ಪ್ರಕರಣಗಳಲ್ಲಿ ಆರ್ಎಟಿ ಹಾಗೂ ಆರ್ಟಿ-ಪಿ ಸಿಆರ್ ಪರೀಕ್ಷೆಗಳನ್ನು ಮಾಡಲಾಗುತ್ತಿದೆ.
ಆಸ್ಪತ್ರೆ ದಾಖಲಾತಿಯ ಅವಶ್ಯಕತೆಯಿಲ್ಲದ ರೋಗಿಗಳಿಗೆ ಫೀವರ್ ಕ್ಲಿನಿಕ್ಗಳಲ್ಲಿ ಅಗತ್ಯವಾದ ಔಷಧಿಗಳನ್ನು ವಿತರಿಸಲಾಗುತ್ತಿದೆ. ಎಲ್ಲಾ ತೀವ್ರ ಶುಶ್ರೂಷಾ ಘಟಕ (ಇಂಟೆನ್ಸಿವ್ ಕೇರ್ ಯೂನಿಟ್) ಗಳಿಗೆ ವೆಂಟಿಲೇಟರ್ ವ್ಯವಸ್ಥೆ ಒದಗಿಸಲಾಗಿದೆ. ಪ್ರಸ್ತುತ ನೈಋತ್ಯ ರೈಲ್ವೆಯಲ್ಲಿ 300 ಸಕ್ರಿಯ ಪ್ರಕರಣಗಳಿದ್ದು, ಇವುಗಳಲ್ಲಿ ರೈಲ್ವೆ ಸಿಬ್ಬಂದಿ, ಅವರ ಕುಟುಂಬದ ಅರ್ಹ ಸದಸ್ಯರು, ನಿವೃತ್ತ ಉದ್ಯೋಗಿಗಳು ಹಾಗೂ ಅವರ ಕುಟುಂಬದ ಸದಸ್ಯರು ಸೇರಿರುತ್ತಾರೆ.
ಮೂರೂ ಆಸ್ಪತ್ರೆಗಳಲ್ಲಿ ಆಮ್ಲಜನಕದ ವ್ಯವಸ್ಥೆ ಮಾಡಲಾಗಿದೆ. ಈ ಮೂರೂ ಆಸ್ಪತ್ರೆಗಳಲ್ಲಿ 500 ಎಲ್ಪಿಎಂಪಿಎಸ್ಎ ಆಮ್ಲಜನಕ ಉತ್ಪಾದನಾ ಘಟಕಗಳು ಲಭ್ಯವಿದ್ದು, ಹಾಸಿಗೆಗಳಿಗೆ ಕೊಳವೆಯ ಮೂಲಕ ಆಕ್ಸಿಜನ್ ಸರಬರಾಜಿನ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಬೆಂಗಳೂರಿನ ವಿಭಾಗೀಯ ರೈಲ್ವೆ ಆಸ್ಪತ್ರೆಯಲ್ಲಿ 1ಕಿ.ಲೀ.ಸಾಮರ್ಥ್ಯದ 2 ಆಮ್ಲಜನಕದ ಟ್ಯಾಂಕ್ಗಳನ್ನು ಸ್ಥಾಪಿಸಲಾಗಿದ್ದು, ಹುಬ್ಬಳ್ಳಿಯ ಕೇಂದ್ರೀಯ ರೈಲ್ವೆ ಆಸ್ಪತ್ರೆಯಲ್ಲಿ ಜನವರಿ 2022 ರ ಅಂತ್ಯದ ವೇಳೆಗೆ 5 ಕಿ.ಲೀ. ಸಾಮರ್ಥ್ಯದ ಒಂದು ಆಮ್ಲಜನಕದ ಟ್ಯಾಂಕ್ ಅನ್ನು ಸ್ಥಾಪಿಸಲಾಗುವುದು. ಆಮ್ಲಜನಕದ ಸಿಲಿಂಡರ್ ಗಳ ಮರು ಭರ್ತಿ ಮಾಡುವಿಕೆಯ ಪೂರೈಕೆ ಒಪ್ಪಂದಗಳು ಜಾರಿಯಲ್ಲಿದ್ದು, ಸಾಕಷ್ಟು ಸಂಖ್ಯೆಯಲ್ಲಿ ಆಮ್ಲಜನಕ ಸಾಂಧ್ರಕಗಳು ಈ ಆಸ್ಪತ್ರೆಗಳಲ್ಲಿ ಸಿದ್ಧವಿವೆ.
ಇವುಗಳ ಜೊತೆಗೆ, ಹೆಚ್ಚುವರಿ ಅವಶ್ಯಕತೆಗೆ ಅನುಗುಣವಾಗಿ ಗುತ್ತಿಗೆ ಆಧಾರದ ಮೇಲೆ ರೇಡಿಯೋಗ್ರಾಫರ್ಗಳು, ಪ್ರಯೋಗಾಲಯ ತಾಂತ್ರಿಕ ಸಿಬ್ಬಂದಿ (ಲ್ಯಾಬ್ ಟೆಕ್ನಿಷಿಯನ್ಗಳು) ಮತ್ತು ವೈದ್ಯಕೀಯ ಸಿಬ್ಬಂದಿಯನ್ನು ಸೇವೆಯಲ್ಲಿ ತೊಡಗಿಸಿಕೊಳ್ಳಲಾಗುತ್ತಿದೆ.
ವೆಂಟಿಲೇಟರ್ಗಳ ಕಾರ್ಯವಿಧಾನ, ಪಿಎಸ್ಎ ಜನಕ ಘಟಕಗಳು, ಆಮ್ಲಜನಕ ಹಾಗೂ ದ್ರವೀಯ ಔಷಧೀಯ ಆಮ್ಲಜನಕ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಕಾರ್ಯ ವಿಧಾನಗಳನ್ನು ಕುರಿತು ಸಿಬ್ಬಂದಿಗೆ ಸರಿಯಾದ ತರಬೇತಿ ನೀಡಲಾಗಿದೆ. ನೈಋತ್ಯ ರೈಲ್ವೆಯ ಶೇ. 99.5 9% ಸಿಬ್ಬಂದಿಗೆ ಮೊದಲನೆ ಡೋಸ್ ಹಾಗೂ ಶೇ. 97.04 ಸಿಬ್ಬಂದಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ. ಮುಂಚೂಣಿಯಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗೆ ಮುನ್ನೆಚ್ಚರಿಕಾ ಡೋಸ್ ಅನ್ನು ನೀಡುವ ಕಾರ್ಯ ಪ್ರಗತಿಯಲ್ಲಿದೆ. ಮುಂಚೂಣಿಯಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿ, ಚಾಲನಾ ಸಿಬ್ಬಂದಿ ಹಾಗೂ ಗಾರ್ಡ್ಗಳು, ನಿರ್ವಹಣಾ ಸಿಬ್ಬಂದಿಗೆ ಲಸಿಕೆಯನ್ನು ನೀಡಿ ಅವರ ಆರೋಗ್ಯವನ್ನು ಕುರಿತಾಗಿ ಆಡಳಿತವರ್ಗವು ವಿಶೇಷವಾದ ಕಾಳಜಿಯನ್ನು ವಹಿಸುತ್ತಿದೆ ಎಂದು ನೈಋತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಇ.ವಿಜಯ್ ತಿಳಿಸಿದ್ದಾರೆ.
ಇದನ್ನೂ ಓದಿ : ವೈದ್ಯರು, ಸಿಬ್ಬಂದಿಗೇ ಕೊರೊನಾ ಸಂಕಷ್ಟ.. ಕಾಡಲಿದೆಯಾ ವೈದ್ಯಕೀಯ ಸೌಲಭ್ಯ ಕೊರತೆ?