ಹುಬ್ಬಳ್ಳಿ:ಭೂಮಿಯ ಮೇಲಿನ ಸಂಪನ್ಮೂಲಗಳನ್ನು ಸರಿಯಾಗಿ ಸದ್ಬಳಿಕೆ ಮಾಡಿಕೊಂಡು ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುವತ್ತ ಸರ್ಕಾರ ಒಂದು ಹೆಜ್ಜೆ ಮುಂದಿಟ್ಟಿದ್ದು, ಪವನ ಶಕ್ತಿಯನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಂಡು ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆಗೆ ಪರಿಹಾರ ಕಂಡುಕೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ.
ರಾಜ್ಯದ ನಾಲ್ಕು ಜಿಲ್ಲೆಗಳಾದ ಬಳ್ಳಾರಿ, ಗದಗ, ಧಾರವಾಡ, ದಾವಣಗೆರೆ ಜಿಲ್ಲೆಗಳಲ್ಲಿ ಎರಡು ಪವನ ಶಕ್ತಿ ವಿದ್ಯುತ್ ಯೋಜನೆ ಆರಂಭಿಸಲು ರಾಜ್ಯ ಸರ್ಕಾರ ಮುಂಬೈ ಮೂಲದ ಜೆ.ಎಸ್.ಡಬ್ಲ್ಯೂ ಎನರ್ಜಿ ಲಿ. ಕಂಪನಿಗೆ ಅನುಮತಿ ನೀಡಿದೆ. ಯೋಜನೆ ಸ್ಥಾಪನೆಗೆ ಅನುಮತಿ ಪಡೆದ ಕಂಪನಿ 8,860 ಕೋಟಿ ಬಂಡವಾಳ ಹೂಡಿಕೆ ಮಾಡಲಿದ್ದು, ಈ ಹಿಂದೆ ಹುಬ್ಬಳ್ಳಿಯಲ್ಲಿ ನಡೆದ ಕರ್ನಾಟಕ ಇನ್ವೆಸ್ಟ್ ಮೀಟ್ನಲ್ಲಿ ಈ ಕುರಿತು ಒಪ್ಪಂದ ಏರ್ಪಟ್ಟಿತ್ತು.