ಕರ್ನಾಟಕ

karnataka

By

Published : May 29, 2023, 1:29 PM IST

ETV Bharat / state

ಹುಬ್ಬಳ್ಳಿ- ಧಾರವಾಡದಲ್ಲಿ ಕುಡಿಯುವ ನೀರಿಗೆ ಹಾಹಾಕಾರ

ಹುಬ್ಬಳ್ಳಿ- ಧಾರವಾಡದ ಜನರು ಕುಡಿಯುವ ನೀರಿಲ್ಲದೆ ಪರದಾಡುವಂತಾಗಿದೆ.

ಹುಬ್ಬಳ್ಳಿಯಲ್ಲಿ ನೀರಿಗಾಗಿ ಹೋರಾಟ ನಡೆಸುತ್ತಿರುವುದು
ಹುಬ್ಬಳ್ಳಿಯಲ್ಲಿ ನೀರಿಗಾಗಿ ಹೋರಾಟ ನಡೆಸುತ್ತಿರುವುದು

ಪಾಲಿಕೆ ಆಯುಕ್ತ ಗೋಪಾಲಕೃಷ್ಣ ಅವರು ಮಾತನಾಡಿದರು

ಹುಬ್ಬಳ್ಳಿ:ಹುಬ್ಬಳ್ಳಿ- ಧಾರವಾಡ ಅವಳಿ ನಗರದಲ್ಲಿ ಕುಡಿಯುವ ನೀರಿಗಾಗಿ ದಿನವೂ ಜನರು ಸರ್ಕಸ್ ಮಾಡುತ್ತಿದ್ದಾರೆ. ಅದೆಷ್ಟೇ ಮನವಿ ಮಾಡಿದರೂ ಜೀವ ಜಲ ಪಡೆಯಲು ಜನರಿಗೆ ಸಾಧ್ಯವಾಗುತ್ತಿಲ್ಲ. ಜಲಮಂಡಳಿಯ ಜವಾಬ್ದಾರಿ ಖಾಸಗೀಕರಣದ ಮೂಲಕ ಎಲ್ ಆ್ಯಂಡ್ ಟಿಗೆ ನೀಡಿದ್ದು, ಜನರ ಬವಣೆ ಮಾತ್ರ ಕಡಿಮೆಯಾಗಿಲ್ಲ. ಸಮಸ್ಯೆ ಬಗೆಹರಿಸುವ ಭರವಸೆ ಮಾತನ್ನು ಮಾತ್ರ ಪಾಲಿಕೆ ಕೈ ಬಿಟ್ಟಿಲ್ಲ.

ಹೆಚ್ಚಿದ ತಾಪಮಾನದಿಂದ ಜನರು ಕಂಗಾಲಾಗಿದ್ದು, ಕುಡಿಯುವ ನೀರಿಗಾಗಿ ಹೈರಾಣಾಗಿದ್ದಾರೆ. ಹನಿ ಹನಿ ನೀರಿಗೂ ಹುಬ್ಬಳ್ಳಿ-ಧಾರವಾಡದಲ್ಲಿ ಹಾಹಾಕಾರ ಉಂಟಾಗಿದೆ. ಎಲ್ ಆ್ಯಂಡ್ ಟಿ ಅವ್ಯವಸ್ಥೆಯಿಂದ ಜನರು ಸಾಕಷ್ಟು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ನೀರು ಬರುತ್ತಿಲ್ಲ ಎಂಬಂತ ಸಮಸ್ಯೆ ಒಂದು ಕಡೆಯಾದರೆ, ಪಾಲಿಕೆಯ ಬೇಜವಾಬ್ದಾರಿಯಿಂದ ಜನರು ಸಂಕಷ್ಟಕ್ಕೊಳಗಾಗಿದ್ದಾರೆ.

ಹದಿನೈದು ದಿನ ಕಳೆದರೂ ಅವಳಿನಗರದ ಬಹುತೇಕ ಕಡೆಯಲ್ಲಿ ಕುಡಿಯುವ ನೀರು ಬರುತ್ತಿಲ್ಲ. ಅಲ್ಲದೇ ನವನಗರದ ಕಡೆಯ ಕಾರ್ಮಿಕ ಕಾಲೋನಿ ಹಾಗೂ ಎಪಿಎಂಸಿಯಲ್ಲಿರುವ ಬಸವ ಕಾಲೋನಿಯಲ್ಲಿ ಕುಡಿಯಲು ನೀರು ಸಿಗುತ್ತಿಲ್ಲ. ಇದರಿಂದ ಜನರು ಬೀದಿಗೆ ಇಳಿದು ಹೋರಾಟ ಮಾಡುತ್ತಿದ್ದಾರೆ.

ಅಶುದ್ಧ ನೀರು ಕುಡಿಯುವಂತಾಗಿದೆ: ಹುಬ್ಬಳ್ಳಿಯ ನವ ಅಯೋಧ್ಯಾ ಸೇರಿದಂತೆ ಬಹುತೇಕ ಕಡೆಗಳಲ್ಲಿ ಕುಡಿಯಲು ಯೋಗ್ಯವಲ್ಲದ ಕಲುಷಿತ ನೀರು ಬರುತ್ತಿದ್ದು, ಜನರು ಅನಿವಾರ್ಯತೆಯಿಂದ ಇದೇ ನೀರನ್ನು ಕುಡಿಯುತ್ತಿದ್ದಾರೆ. ನೀರು ಸರಬರಾಜಿನಲ್ಲಿ ವಿಳಂಬವಾಗುತ್ತಿದೆ. ವಿಳಂಬವಾದರೂ ಕೂಡ ಕುಡಿಯಲು ಯೋಗ್ಯವಾದ ನೀರು ಜನರಿಗೆ ಲಭ್ಯವಾಗುತ್ತಿಲ್ಲ. ಚರಂಡಿ ನೀರಿನಿಂದ ಮಿಶ್ರಣಗೊಂಡ ಅಶುದ್ಧ ನೀರನ್ನು ಜನರು ಕುಡಿಯುತ್ತಿದ್ದಾರೆ. ಈ ಬಗ್ಗೆ ಸ್ಥಳೀಯರು ತಮ್ಮ ಸಮಸ್ಯೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಕುಡಿಯುವ ನೀರನ್ನು ಕೊಡಲು ಆಗದ ಪಾಲಿಕೆ ವಿರುದ್ಧ ಸಾರ್ವಜನಿಕರು ಹಿಡಿಶಾಪ ಹಾಕಿದ್ದಾರೆ. ಪಾಲಿಕೆ ಆಯುಕ್ತರು ಮಾತ್ರ ಕೂಡಲೇ ಸಮಸ್ಯೆ ಬಗೆಹರಿಸುವ ಭರವಸೆ ಮಾತನ್ನು ಮಾತ್ರ ಕೈ ಬಿಟ್ಟಿಲ್ಲ.

ಈ ಬಗ್ಗೆ ಪಾಲಿಕೆ ಆಯುಕ್ತ ಗೋಪಾಲಕೃಷ್ಣ ಪ್ರತಿಕ್ರಿಯಿಸಿದ್ದು, "ಕೆಲವೊಂದು ವಾರ್ಡ್​ಗಳಲ್ಲಿ ನೀರಿನ ಸರಬರಾಜಿನ ವ್ಯತ್ಯಾಸ ಆಗಿದೆ. ಮುಖ್ಯವಾಗಿ ನಮಗೆ ಬರುತ್ತಿರುವ ಔಟ್​ಪುಟ್​ನಲ್ಲಿ 5 ಎಂಎಲ್​ ನೀರಿನ ಪ್ರಮಾಣ ಕಡಿಮೆಯಾಗಿ ಬರುತ್ತಿದೆ. ಎಲ್ಲಿ ಸಮಸ್ಯೆ ಇದೆಯೋ ಅಲ್ಲಿ ಬೋರ್​ವೆಲ್ ವ್ಯವಸ್ಥೆ ಹಾಗೂ ಟ್ಯಾಂಕರ್ ವ್ಯವಸ್ಥೆ ಮಾಡುವ ಕೆಲಸವನ್ನು ಮಾಡುತ್ತೇವೆ. ಇನ್ನು ಒಂದು ಅಥವಾ ಎರಡು ದಿನದಲ್ಲಿ ಸಮಸ್ಯೆ ಬಗೆಹರಿಸುವ ಕೆಲಸ ಮಾಡುತ್ತೇವೆ" ಎಂದಿದ್ದಾರೆ.

ನೀರಿಗಾಗಿ ಜಗಳ : ದುರ್ಗಪ್ಪ ಎಂಬವರು ಪ್ರತಿಕ್ರಿಯಿಸಿ, "ಎಪಿಎಂಸಿಯಲ್ಲಿರುವ ಬಸವ ಕಾಲೋನಿಯಲ್ಲಿ ನಾವು 25 ವರ್ಷದಿಂದ ವಾಸವಾಗಿದ್ದೇವೆ. ಇಲ್ಲಿಗೆ ಇದುವರೆಗೂ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಚುನಾವಣೆಯ ಸಮಯದಲ್ಲಿ ಜನಪ್ರತಿನಿಧಿಗಳು ನೀರು ಕೊಡುತ್ತೇವೆ ಎನ್ನುತ್ತಾರೆ. ನಮಗೆ ದುಡಿಯುವುದರೊಳಗೆ ಸಮಯ ಇರುವುದಿಲ್ಲ. ಹಾಗಾಗಿ ನಾವು ಜನಪ್ರತಿನಿಧಿಗಳನ್ನು ನಂಬಿ ವೋಟ್​ ಹಾಕಿರುತ್ತೇವೆ. ಮತ್ತೂ ನಾವು ನೀರಿಗಾಗಿ ಜಗಳ ಮಾಡುವಂತಹ ಪರಿಸ್ಥಿತಿ ಇದೆ" ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ:ವಿಶ್ವ ಜಲದಿನ 2023 : 40 ವರ್ಷಗಳಲ್ಲಿ ಜಾಗತಿಕವಾಗಿ ನೀರಿನ ಬಳಕೆಯು ಪ್ರತಿವರ್ಷ 1 ಪ್ರತಿಶತದಷ್ಟು ಹೆಚ್ಚಳ

ABOUT THE AUTHOR

...view details