ಕರ್ನಾಟಕ

karnataka

By

Published : May 5, 2023, 6:50 AM IST

Updated : May 5, 2023, 9:55 AM IST

ETV Bharat / state

ನಾವು ನಮ್ಮ 5 ಗ್ಯಾರಂಟಿಯ ಚಾಲೀಸ್ ಮಾಡುತ್ತೇವೆ: ಡಿ.ಕೆ.ಶಿವಕುಮಾರ್

ನುಡಿದಂತೆ ನಡೆಯುವುದೇ ಕಾಂಗ್ರೆಸ್ ಪಕ್ಷದ ಬದ್ಧತೆ ಎಂದು ಡಿ.ಕೆ.ಶಿವಕುಮಾರ್ ಧಾರವಾಡದಲ್ಲಿ​ ಹೇಳಿದರು.

ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್

ಐಟಿ ದಾಳಿ ಬಗ್ಗೆ ಡಿಕೆಶಿ ಪ್ರತಿಕ್ರಿಯೆ

ಧಾರವಾಡ:ಬಜರಂಗದಳದವರು ಹನುಮಾನ್ ಚಾಲೀಸ್ ಮಾಡಲಿ. ನಾವು ನಮ್ಮ ಐದು ಗ್ಯಾರಂಟಿಯ ಚಾಲೀಸ್ ಮಾಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು. ಧಾರವಾಡ ತಾಲೂಕಿನ ಹುಬ್ಬಳ್ಳಿಯಲ್ಲಿ ಗುರುವಾರ ನಡೆದ ಕಾಂಗ್ರೆಸ್ ಬಹಿರಂಗ ಸಭೆಯ ಬಳಿಕ ಅವರು ಮಾತನಾಡಿದರು.

ನಾನು ಧಾರವಾಡ ಕ್ಷೇತ್ರಕ್ಕೆ ದುಃಖದಿಂದ ಬಂದು ಚುನಾವಣಾ ಪ್ರಚಾರ ಮಾಡುತ್ತಿದ್ದೇನೆ. ರಾಜ್ಯದ ಇತಿಹಾಸದಲ್ಲಿಯೇ ಯಾವತ್ತೂ ಇಂತಹ ನೀಚ ರಾಜಕಾರಣ ನಡೆದಿಲ್ಲ ಎಂದು ಇದೇ ವೇಳೆ ಆಕ್ರೋಶ ವ್ಯಕ್ತಪಡಿಸಿದರು. ಪ್ರಜಾಪ್ರಭುತ್ವದಲ್ಲಿ ತೀರ್ಪು ಬರುವವರೆಗೂ ಮತಯಾಚನೆಗೆ ಅವಕಾಶ ಇದೆ. ಆದರೆ ವಿನಯ ಕುಲಕರ್ಣಿಗೆ ಬಿಜೆಪಿ ಶಿಕ್ಷೆ ಕೊಟ್ಟಿದೆ. ಇದಕ್ಕೆ ನಾನು, ವಿನಯ ಕುಲಕರ್ಣಿ ಉತ್ತರ ಕೊಡಬೇಕಿಲ್ಲ. ಜನರೇ‌ ಉತ್ತರ ಕೊಡಬೇಕಿದೆ. ಅವರು ಬೆಳಗಾವಿ ಜೈಲಿನಲ್ಲಿದ್ದಾಗ ನಾನು ಭೇಟಿಯಾಗಬೇಕಿತ್ತು. ಅದಕ್ಕಾಗಿ ಕೋರ್ಟ್​ಗೆ ಅರ್ಜಿ ಹಾಕಿದ್ದೆ. ನನ್ನ ಅರ್ಜಿ ತಿರಸ್ಕಾರ ಆಗಿತ್ತು. ನಾನೂ ಸಹ ತಿಹಾರ್ ಜೈಲಿನಲ್ಲಿದ್ದೆ. ಸೋನಿಯಾ ಗಾಂಧಿ ಬಂದು ಭೇಟಿಯಾಗಿ ಧೈರ್ಯ ತುಂಬಿದ್ದರು ಎಂದು ಹಳೆಯ ಘಟನೆಗಳನ್ನು ನೆನೆದರು.

ಕಳೆದ ಚುನಾವಣೆಯಲ್ಲಿ ಯಡಿಯೂರಪ್ಪ ಜೈಲಿಗೆ ಕಳುಹಿಸುವ ಬಗ್ಗೆ ಮಾತಾಡಿದ್ದರು. ಅದರಂತೆ ಅಧಿಕಾರ ದುರುಪಯೋಗ ಮಾಡಿದ್ದಾರೆ. ನೀವು ಇಂತಹ ನೂರು ಕುತಂತ್ರ ಮಾಡಿದರೂ ಏನೂ ಆಗುವುದಿಲ್ಲ. ಕುಲಕರ್ಣಿಯನ್ನು ಸಿಎಂ ವಿರುದ್ಧ ಸ್ಪರ್ಧೆ ಮಾಡಿಸಲು ಬಹಳ ಒತ್ತಡ ಇತ್ತು. ಅಲ್ಲಿ ನಾವು ಅಲ್ಪಸಂಖ್ಯಾತರಿಗೆ ಅವಕಾಶ ಕೊಟ್ಟಿದ್ದೇವೆ. ಕುಲಕರ್ಣಿ ಪ್ರಭಾವ, ಪ್ರವಾಹದ ಮುಂದೆ ಸಿಎಂ ಸಹ ಗೆಲ್ಲಲು ಆಗುವುದಿಲ್ಲ ಎಂದರು.

ಜಗದೀಶ್ ಶೆಟ್ಟರ್, ಸವದಿ, ಕುನ್ನೂರ ದಡ್ಡರಾ? ನಮ್ಮ ಪಕ್ಷ ಅಧಿಕಾರಕ್ಕೆ ಬರುತ್ತದೆ. ಹೀಗಾಗಿ ಅನೇಕರು ಕಾಂಗ್ರೆಸ್‌ಗೆ ಬಂದಿದ್ದಾರೆ. ಬಿಜೆಪಿ ಭಾವನೆಯ ಮೇಲೆ ಚುನಾವಣೆಗೆ ಹೋಗುತ್ತಿದೆ. ನಾವು ಹಿಂದು ನೀವು ಮುಂದು ಅಂತಾ ಹೋಗುತ್ತಿದ್ದಾರೆ. ನಾವು ಹಿಂದುಗಳು ಅಲ್ವಾ? ಮುಂದೆ ನಾನು ಮತ್ತು ಸಿದ್ದರಾಮಯ್ಯರ ಸರ್ಕಾರ ಇರುತ್ತದೆ ಎಂದು ಹೇಳಿದರು.

ವಿನಯ ಕುಲಕರ್ಣಿ ಆಪ್ತರ ಮೇಲೆ ಐಟಿ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ವಿನಯ ಕುಲಕರ್ಣಿ, ಡಿಕೆಶಿ ಎಲ್ಲರ ಆಪ್ತರ ಮೇಲೆ ಐಟಿ ದಾಳಿಗಳು ಆಗುತ್ತಿವೆ. ಬಿಜೆಪಿಯ ಒಬ್ಬರ ಮನೆಯ ಮೇಲೂ ದಾಳಿಯಾಗುತ್ತಿಲ್ಲ. ಬಿಜೆಪಿಯವರು ದುಡ್ಡಿನ ಹೊಳೆ ಹರಿಸುತ್ತಿದ್ದಾರೆ. ಸೋಲಿನ ಭಯದಿಂದ ಹಣದ ಹೊಳೆ ಹರಿಸುತ್ತಿದ್ದಾರೆ. ಅವರು ಎಷ್ಟೇ ದುಡ್ಡು ಕೊಟ್ಟರೂ ಜನ ಸರ್ಕಾರ ಬದಲಿಸುವ ತೀರ್ಮಾನ ಮಾಡಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ:ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯಗೆ ಭಜರಂಗಿ ಬಲ.. ಮಾಜಿ ಸಿಎಂ ಪರ ಶಿವಣ್ಣ​ ಭರ್ಜರಿ ಪ್ರಚಾರ

Last Updated : May 5, 2023, 9:55 AM IST

ABOUT THE AUTHOR

...view details