ಕರ್ನಾಟಕ

karnataka

ಹು-ಧಾ ಪಾಲಿಕೆ ಚುನಾವಣೆ: ಒಂದು ಆಟೋ, ಒಂದು ಬ್ಯಾನರ್.. ಅಭ್ಯರ್ಥಿ ಸೇರಿ ಗರಿಷ್ಠ 5 ಜನರಿಂದ ಪ್ರಚಾರಕ್ಕೆ ಅನುಮತಿ

By

Published : Aug 28, 2021, 5:09 PM IST

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆಗೆ ಸ್ವರ್ಧಿಸಿರುವ ಪ್ರತಿ ಅಭ್ಯರ್ಥಿಗೆ ಅನುಮತಿ ಪಡೆದ ಒಂದು ಆಟೋ ವಾಹನ ಬಳಸಲು ಅವಕಾಶ ನೀಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.

Dharwad DC meeting with political party leaders
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆ

ಧಾರವಾಡ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಗೆ ಸಂಬಂಧಿಸಿದಂತೆ ರಾಜ್ಯ ಚುನಾವಣಾ ಆಯೋಗವು ಅಭ್ಯರ್ಥಿಗಳ ಪ್ರಚಾರಕ್ಕೆ ನಿರ್ದಿಷ್ಟ ನಿಯಮಗಳನ್ನು ಸೂಚಿಸಿ ಆ. 18 ರಂದು ಆದೇಶಿಸಿತ್ತು.

ಇದಕ್ಕೆ ಪೂರಕವಾಗಿ ಆ. 27 ರ ಆದೇಶದಲ್ಲಿ ಅಭ್ಯರ್ಥಿಗಳು ಪ್ರಚಾರ ಮಾಡುವ ಸಂದರ್ಭದಲ್ಲಿ ಆಟೋ ವಾಹನದಲ್ಲಿ ಧ್ವನಿವರ್ಧಕ ಉಪಯೋಗಿಸಿ ಪ್ರಚಾರ ಮಾಡಲು ಅನುಮತಿ ನೀಡಿದ್ದು, ಅದರಂತೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆಗೆ ಸ್ವರ್ಧಿಸಿರುವ ಪ್ರತಿ ಅಭ್ಯರ್ಥಿಗೆ ಅಂದರೆ ಪ್ರತಿ ವಾರ್ಡ್‍ಗೆ ಒಬ್ಬ ಅಭ್ಯರ್ಥಿಗೆ ಅನುಮತಿ ಪಡೆದ ಒಂದು ಆಟೋ ವಾಹನ ಬಳಸಲು ಅವಕಾಶ ನೀಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.

ರಾಜಕೀಯ ಪಕ್ಷಗಳ ಮುಖಂಡರ ಸಭೆ:

ಇಂದು ಮಧ್ಯಾಹ್ನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಗೆ ಸಂಬಂಧಿಸಿದಂತೆ ರಾಜಕೀಯ ಪಕ್ಷಗಳ ಮುಖಂಡರ ಸಭೆ ನಡೆಸಿದರು. ಅಭ್ಯರ್ಥಿಯು ಪ್ರಚಾರಕ್ಕಾಗಿ ಒಂದು ಆಟೋ ಬಳಸಲು ಅನುಮತಿಸಲಾಗಿದ್ದು, ಆಟೋದಲ್ಲಿ ಒಬ್ಬ ವ್ಯಕ್ತಿ ಕುಳಿತು ಶಬ್ದ ಮಾಲಿನ್ಯ ಉಂಟಾಗದಂತೆ ಧ್ವನಿವರ್ಧಕದ ಮೂಲಕ ಪ್ರಚಾರ ಕೈಗೊಳ್ಳಬಹುದು ಎಂದಿದ್ದಾರೆ.

ರಾಜಕೀಯ ಪಕ್ಷಗಳ ಮುಖಂಡರ ಸಭೆ

ಒಂದು ಆಟೋ, ಒಂದು ಬ್ಯಾನರ್:

ಬಳಸುವ ಆಟೋಗೆ ಒಂದು ಬ್ಯಾನರ್, ಒಂದು ಧ್ವಜ ಕಟ್ಟಲು ಅನುಮತಿಸಲಾಗಿದೆ. ಆದರೆ ಇವುಗಳಿಗೆ ಪರವಾನಗಿ ಪಡೆಯಲು ಏಕಗವಾಕ್ಷಿ ಕೇಂದ್ರದಲ್ಲಿ ಅರ್ಜಿ ಸಲ್ಲಿಸಿ ಸಕ್ಷಮ ಅಧಿಕಾರಿಗಳಿಂದ ಅನುಮತಿ ಪಡೆದುಕೊಳ್ಳುವುದು ಕಡ್ಡಾಯವಾಗಿದೆ ಎಂದು ಹೇಳಿದ್ದಾರೆ.

ಅನುಮತಿಸಲಾದ ಆಟೋ ವಾಹನವನ್ನು ಪ್ರಚಾರಕ್ಕಾಗಿ ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಬಳಸಲು ಅನುಮತಿಸಿದೆ. ಒಂದಕ್ಕಿಂತ ಹೆಚ್ಚು ಆಟೋ ಬಳಕೆ ಅಥವಾ ಅನುಮತಿ ಪಡೆಯದೆ ನಿಯಮಗಳನ್ನು ಉಲ್ಲಂಘಿಸಿದಲ್ಲಿ ವಾಹನ ಜಪ್ತಿ ಮಾಡಿ ಪ್ರಕರಣ ದಾಖಲಿಸಲಾಗುವುದು. ಎಲ್ಲ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ತಮ್ಮ ಅಭ್ಯರ್ಥಿಗಳಿಗೆ ಈ ಕುರಿತು ಸರಿಯಾದ ಮಾಹಿತಿ, ತಿಳುವಳಿಕೆ ನೀಡಿ ಚುನಾವಣಾ ನಿಯಮಗಳನ್ನು ಉಲ್ಲಂಘಿಸದಂತೆ ಎಚ್ಚರಿಕೆ ವಹಿಸಬೇಕು. ಪಾರದರ್ಶಕವಾಗಿ ಚುನಾವಣೆಯನ್ನು ಜರುಗಿಸಲು ರಾಜಕೀಯ ಪಕ್ಷಗಳು ಸಹಕಾರ ನೀಡಬೇಕೆಂದು ಕೋರಿದ್ದಾರೆ.

ಅಭ್ಯರ್ಥಿಯು ಸೇರಿ ಗರಿಷ್ಠ 5 ಜನರಿಂದ ಪ್ರಚಾರಕ್ಕೆ ಅನುಮತಿ:

ರಾಜ್ಯ ಚುನಾವಣಾ ಆಯೋಗವು ಅಭ್ಯರ್ಥಿಯು ಸೇರಿ ಗರಿಷ್ಠ 5 ಜನ ಬೆಂಬಲಿಗರೊಂದಿಗೆ ಮಾಸ್ಕ್​ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಮನೆ-ಮನೆಗೆ ಭೇಟಿ ನೀಡಿ ಪ್ರಚಾರ ಮಾಡಲು ಅನುಮತಿ ನೀಡಿದೆ. ಗುಂಪಾಗಿ ಪ್ರಚಾರ ಮಾಡುವುದನ್ನು ನಿಷೇಧಿಸಿದೆ. ಅಭ್ಯರ್ಥಿಗಳು ಪ್ರಚಾರ ಸಂದರ್ಭದಲ್ಲಿ ಕಡ್ಡಾಯವಾಗಿ ಫೇಸ್ ಮಾಸ್ಕ್ ಧರಿಸಬೇಕು. ವಿದ್ಯುನ್ಮಾನ, ಮುದ್ರಣ ಹಾಗೂ ಸಾಮಾಜಿಕ ಜಾಲತಾನದ ಮೂಲಕ ಪ್ರಚಾರ ಕೈಗೊಳ್ಳಬಹುದು. ಅವುಗಳ ವೆಚ್ಚದ ವಿವರಗಳನ್ನು ಕಡ್ಡಾಯವಾಗಿ ಸಲ್ಲಿಸತಕ್ಕದ್ದು. ಪ್ರಚಾರಕ್ಕಾಗಿ ನಿಯಮಾನುಸಾರ ಮುದ್ರಿಸಿದ ಕರಪತ್ರಗಳನ್ನು ಹಂಚಬಹುದು ಎಂದು ತಿಳಿಸಿದ್ದಾರೆ.

ಬ್ಯಾನರ್, ಬಂಡಿಂಗ್ಸ್ ಅಳವಡಿಕೆಗೆ ನಿರ್ಬಂಧ:

ಚುನಾವಣಾ ಪ್ರಚಾರಕ್ಕಾಗಿ ಮೆರವಣಿಗೆ, ಸಭೆ, ಇತರೆ ವಾಹನ ಬಳಕೆ, ಬ್ಯಾನರ್, ಬಂಡಿಂಗ್ಸ್ ಅಳವಡಿಕೆಯನ್ನು ನಿರ್ಬಂಧಿಸಲಾಗಿದೆ. ಚುನಾವಾಣಾ ನಿಯಮಗಳನ್ನು ಪಾಲಿಸದೆ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡುವವರ ವಿರುದ್ಧ ಮೊದಲ ಉಲ್ಲಂಘನೆಗೆ ನೋಟಿಸ್ ನೀಡಲಾಗುವುದು ಮತ್ತು ಉಲ್ಲಂಘನೆ ಮರುಕಳಿಸಿದಲ್ಲಿ ಪ್ರಕರಣ ದಾಖಲಿಸಲಾಗುತ್ತದೆ ಎಂದು ಹೇಳಿದ್ದಾರೆ.

ಓದಿ:ಹು-ಧಾ ಮಹಾನಗರ ಪಾಲಿಕೆ ಚುನಾವಣೆ; 23 ಅಂಶಗಳನ್ನೊಳಗೊಂಡ ಕಾಂಗ್ರೆಸ್ ಪ್ರಣಾಳಿಕೆ ರಿಲೀಸ್​

For All Latest Updates

TAGGED:

ABOUT THE AUTHOR

...view details