ಧಾರವಾಡ : ಇತ್ತೀಚೆಗಷ್ಟೇ ಮದುವೆಯಾಗಿದ್ದ ಯುವಕ ಪತ್ನಿಯೊಂದಿಗೆ ನೆಮ್ಮದಿಯ ಜೀವನ ನಡೆಸುತ್ತಿದ್ದ. ಆದರೆ ವಿಧಿಯಾಟವೇ ಬೇರೆಯಾಗಿತ್ತು. ಒಂದು ಕಡೆ ವಿಧಿ ಆತನ ನೌಕರಿ ಕಿತ್ತುಕೊಂಡರೆ ಮತ್ತೊಂದೆಡೆ ಆತನೊಡನೆ ಓಡಾಡಿ, ಸಹಾಯ ಪಡೆದ ಗೆಳೆಯರೇ ಆತನ ಪಾಲಿಗೆ ಬದುಕಿಗೆ ಕೊಳ್ಳಿ ಇಟ್ಟರು!
ಮೂರು ತಿಂಗಳ ಹಿಂದಷ್ಟೇ ನಾಗರಾಜ ಮದುವೆಯಾಗಿದ್ದ. ಧಾರವಾಡ ನಗರದ ಟಾಟಾ ಮೋಟರ್ಸ್ನಲ್ಲಿ ಕೆಲಸ ಮಾಡುತ್ತಿದ್ದ ಆತನನ್ನು ಇತ್ತೀಚೆಗಷ್ಟೇ ಕೆಲಸದಿಂದ ತೆಗೆಯಲಾಗಿತ್ತು.
ಕೊಟ್ಟ ಹಣ ಕೇಳಿದಕ್ಕೆ ಗೆಳಯ ಪ್ರಾಣತೆಗೆದ ಗೆಳೆಯವರು ಹೀಗಾಗಿ ಕೈಯಲ್ಲಿ ಕೆಲಸವಿಲ್ಲದ್ದು ಮತ್ತು ಇತ್ತೀಚಿಗಷ್ಟೇ ಮದುವೆಯಾಗಿದ್ದರಿಂದ ಹಣದ ಅಡಚಣೆಯುಂಟಾಗಿತ್ತು. ಕೆಲ ತಿಂಗಳ ಹಿಂದೆ ತನ್ನ ಆತ್ಮೀಯ ಸ್ನೇಹಿತ ಮಲ್ಲಿಕಾರ್ಜುನ ಹಡಪದ ಎಂಬುವವರಿಗೆ ಒಂದು ಲಕ್ಷ ರೂಪಾಯಿ ಸಾಲ ಕೊಟ್ಟಿದ್ದ. ಧಾರವಾಡ ತಾಲೂಕಿನ ಮುಗದ ಗ್ರಾಮದ ಮಲ್ಲಿಕಾರ್ಜುನ ಹಣ ಮರಳಿಸುವುದು ತಡ ಮಾಡಿದ್ದ. ತನ್ನ ಆರ್ಥಿಕ ಸ್ಥಿತಿ ಹದಗೆಟ್ಟಿದ್ದಕ್ಕೆ ಗೆಳೆಯ ಮಲ್ಲಿಕಾರ್ಜುನ ಹಡಪದಗೆ ತಾನು ಕೆಲ ತಿಂಗಳ ಹಿಂದೆ ಸಾಲದ ರೂಪದಲ್ಲಿ ನೀಡಿದ್ದ ಹಣ ಮರಳಿ ನೀಡುವಂತೆ ಕೇಳಿಕೊಂಡಿದ್ದಾನೆ.
ಶುಕ್ರವಾರ ಸಂಜೆ ಮಲ್ಲಿಕಾರ್ಜುನ ತನ್ನಿಬ್ಬರು ಗೆಳೆಯರಾದ ಪೀರಜಾದೆ ಮತ್ತು ನವೀನ್ ಜೊತೆ ಕರ್ನಾಟಕ ವಿಶ್ವವಿದ್ಯಾಯದ ಬಳಿ ಇರುವ ರೈಲ್ವೆ ಹಳಿ ಬಳಿ ಬಂದಿದ್ದಾರೆ. ಅಲ್ಲಿಗೆ ನಾಗರಾಜನಿಗೆ ಬರಲು ಹೇಳಿದ್ದಾರೆ. ಹಣ ಕೊಡಲು ಕರೆದಿರೋದಾಗಿ ತಿಳಿದ ನಾಗರಾಜ ಬೈಕ್ ಮೇಲೆ ಅಲ್ಲಿಗೆ ಹೋಗಿದ್ದಾನೆ. ಅಲ್ಲಿ ಕೆಲಕಾಲ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಮಲ್ಲಿಕಾರ್ಜುನ ಅಲ್ಲೇ ಬಿದ್ದಿದ್ದ ಕಟ್ಟಿಗೆಯಿಂದ ನಾಗರಾಜನನ್ನು ಹೊಡೆದು ಕೊಂದು ಹಾಕಿದ್ದಾನೆ. ಬಳಿಕ ಅಲ್ಲಿಂದ ಮೂವರೂ ಪರಾರಿಯಾಗಿದ್ದಾರೆ.
ಯಾವಾಗ ರಾತ್ರಿಯಾದರೂ ನಾಗರಾಜ ಮನೆಗೆ ಬರಲಿಲ್ಲವೋ ಆಗ ಮನೆಯವರು ಉಪನಗರ ಠಾಣೆಗೆ ದೂರು ನೀಡಿದ್ದಾರೆ. ಕೊನೆಗೆ ಸೋಮವಾರ ಸಂಜೆ ನಾಗರಾಜದನ ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಪ್ರಕರಣದಲ್ಲಿ ಪೀರಜಾದೆ ಮತ್ತು ನವೀನ್ ಪಾತ್ರದ ಬಗ್ಗೆ ಪೊಲೀಸರು ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆದರೆ ಪ್ರಕರಣದ ಪ್ರಮುಖ ಆರೋಪಿ ಮಲ್ಲಿಕಾರ್ಜುನ ಹಡಪದ ಮಾತ್ರ ಪರಾರಿಯಾಗಿದ್ದಾನೆ.