ಹುಬ್ಬಳ್ಳಿ: ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾದ್ಯಂತ ಹೆಚ್ಚಿನ ಹಾಸಿಗೆಗಳನ್ನು ಕೋವಿಡ್ ರೋಗಿಗಳಿಗಾಗಿ ಸಿದ್ಧಪಡಿಸಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಹೇಳಿದರು. ಅಶೋಕ್ ಹಾಸ್ಪಿಟಲ್ ವತಿಯಿಂದ ಪ್ರಾರಂಭಿಸಲಾಗಿರುವ 50 ಹಾಸಿಗೆಗಳ ಕೋವಿಡ್ ಹಾಸ್ಪಿಟಲ್ ಹಾಗೂ ದೇಶಪಾಂಡೆ ಫೌಂಡೇಶನ್ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ನಲ್ಲಿ ಆರಂಭಿಸಲಾಗಿರುವ 800 ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್ ಉದ್ಘಾಟಿಸಿ ಮಾತನಾಡಿದರು.
ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿದ ಬಳಿಕ ಕೋವಿಡ್ ರೋಗಿಗಳಿಗೆ ಹಾಸಿಗೆಗಳನ್ನು ನೀಡಲು ಹಲವು ಆಸ್ಪತ್ರೆಗಳು ಮುಂದೆ ಬಂದಿವೆ. ಹುಬ್ಬಳ್ಳಿಯ ಡಾಕ್ಟರ್ ಅಶೋಕ್ ಬಂಗಾರಶೆಟ್ಟರ್ ಅವರು ತಮ್ಮ ಆರ್ಥೋಪಿಡಿಕ್ ಆಸ್ಪತ್ರೆಯನ್ನು ಸಂಪೂರ್ಣವಾಗಿ ಕೋವಿಡ್ ರೋಗಿಗಳ ಚಿಕಿತ್ಸೆಗಾಗಿ ಜಿಲ್ಲಾಡಳಿತಕ್ಕೆ ನೀಡಿದ್ದಾರೆ. ಡಾಕ್ಟರ್ ಕ್ರಾಂತಿ ಕಿರಣ್ ಅವರ ಬಾಲಾಜಿ ಹಾಸ್ಪಿಟಲ್ನೊಂದಿಗೆ ಒಪ್ಪಂದ ಮಾಡಿಕೊಂಡಿರುವ ಅವರು ಸೂಕ್ತ ವೈದ್ಯರು ಹಾಗೂ ಸಿಬ್ಬಂದಿಯನ್ನು ಸಹ ಆಸ್ಪತ್ರೆಯಲ್ಲಿ ನಿಯೋಜಿಸಿದ್ದಾರೆ.
ಆಸ್ಪತ್ರೆಯನ್ನು ಸಂಪೂರ್ಣ ಕೋವಿಡ್ ಹಾಸ್ಪಿಟಲ್ ಎಂದು ಘೋಷಿಸಲಾಗಿದೆ. ಇದೇ ಮಾದರಿ ಹಲವು ಖಾಸಗಿ ಆಸ್ಪತ್ರೆಗಳು ಒಡಂಬಡಿಕೆ ಮಾಡಿಕೊಂಡು ಹಾಸಿಗೆಗಳನ್ನು ಹಾಗೂ ಸೂಕ್ತ ವೈದ್ಯಕೀಯ ಸಿಬ್ಬಂದಿಯನ್ನು ಜಿಲ್ಲಾಡಳಿತದ ನೆರವಿಗೆ ನೀಡಲು ಸಿದ್ಧವಾಗಿದೆ ಎಂದರು. ಗುರುರಾಜ ದೇಶಪಾಂಡೆಯವರು ಸ್ಥಾಪಿಸಿರುವ ದೇಶಪಾಂಡೆ ಫೌಂಡೇಶನ್ ಸಹಕಾರದೊಂದಿಗೆ ಸಂಸ್ಥೆಯ ಸ್ಕಿಲ್ ಡೆವಲಪ್ ಮೆಂಟ್ ಸೆಂಟರ್ನಲ್ಲಿ ಲಕ್ಷಣ ರಹಿತ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು 800 ಹಾಸಿಗೆಗಳ ಕೇರ್ ಸೆಂಟರ್ ಆರಂಭಿಸಲಾಗಿದೆ.