ಹುಬ್ಬಳ್ಳಿ: ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಪಾಲಿಕೆಯಿಂದ ಅಪಘಾತ ತಡೆಗೆ ವೈಜ್ಞಾನಿಕ ರೋಡ್ ಹಂಪ್ಸ್ ಹಾಕಲು ನಿರ್ಧಾರವಾಗಿದೆ. ಕಳೆದ ಒಂದು ವರ್ಷದಿಂದ ಕಾಯುತ್ತಿದ್ದರೂ ಕೂಡ ಹು-ಧಾ ಮಹಾನಗರ ಪೊಲೀಸ್ ಕಮಿಷನರೇಟ್ ಮಾತ್ರ ವೈಜ್ಞಾನಿಕ ರೋಡ್ ಹಂಪ್ಸ್ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್ ನೀಡಿಲ್ಲ ಎನ್ನಲಾಗಿದೆ.
ವೈಜ್ಞಾನಿಕ ರೋಡ್ ಹಂಪ್ಸ್ ನಿರ್ಮಾಣ ಕುರಿತು ಮಾಹಿತಿ ಇಂಡಿಯನ್ ರೋಡ್ ಕಾಂಗ್ರೆಸ್ (ಐಆರ್ಸಿ) ಸೂಚಿಸಿರುವ ಮಾನದಂಡದಂತೆ ಅವಳಿ ನಗರದ ರಸ್ತೆಗಳಲ್ಲಿ ವೈಜ್ಞಾನಿಕ ಹಂಪ್ಸ್ ನಿರ್ಮಾಣಕ್ಕೆ ಟೆಂಡರ್ ಕರೆದು ಗುತ್ತಿಗೆದಾರರನ್ನು ಪಾಲಿಕೆ ಅಂತಿಮಗೊಳಿಸಿದೆ. ಪಾಲಿಕೆಯು ಹಂಪ್ಸ್ ನಿರ್ವಿುಸಬೇಕಾದ ಸ್ಥಳ ಸೂಚಿಸುವಂತೆ ಪೊಲೀಸ್ ಕಮಿಷನರೇಟ್ನ ಸಂಚಾರ ವಿಭಾಗದ ಎಲ್ಲಾ ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ)ರಿಗೆ ಕಳೆದ ಒಂದು ವರ್ಷದ ಅವಧಿಯಲ್ಲಿ ಎರಡು ಬಾರಿ ಪತ್ರ ಬರೆದಿದೆ. ಅದರೆ ಈವರೆಗೂ ಪೊಲೀಸ್ ಇಲಾಖೆಯಿಂದ ಉತ್ತರ ಬಂದಿಲ್ಲ.
ಅವಳಿ ನಗರದಲ್ಲಿ ಅಪಘಾತ ವಲಯಗಳು ಎಲ್ಲಿವೆ ಎಂಬ ಮಾಹಿತಿ ಪೊಲೀಸ್ ಕಮಿಷನರೇಟ್ಗೆ ತಿಳಿದಿರುವ ವಿಚಾರ. ಇದಕ್ಕನುಗುಣವಾಗಿ ಹಂಪ್ಸ್ ನಿರ್ಮಾಣಕ್ಕೆ ನಿರ್ದಿಷ್ಟ ಸ್ಥಳ ಗುರುತಿಸಿಕೊಡಬೇಕಿತ್ತು. ಕಂಡ ಕಂಡಲ್ಲಿ ಹಂಪ್ಸ್ ನಿರ್ಮಾಣ ಮಾಡಿ ಮುಂದೆ ಸುಗಮ ಸಂಚಾರಕ್ಕೆ ತೊಂದರೆಯಾದರೆ ಅಥವಾ ಹೆಚ್ಚಿನ ಅಪಘಾತಗಳಿಗೆ ಕಾರಣವಾದರೆ ತಮ್ಮನ್ನೇ ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂಬುದು ಪಾಲಿಕೆ ಅಧಿಕಾರಿಗಳಿಗೆ ತಲೆನೋವಾಗಿದೆ.
96.48 ಲಕ್ಷ ರೂ. ವೆಚ್ಚದಲ್ಲಿ 137 ವೈಜ್ಞಾನಿಕ ಹಂಪ್ಸ್:
ಪಾಲಿಕೆಯು ಅವಳಿ ನಗರದಲ್ಲಿ 96.48 ಲಕ್ಷ ರೂ. ವೆಚ್ಚದಲ್ಲಿ 137 ವೈಜ್ಞಾನಿಕ ಹಂಪ್ಸ್ಗಳನ್ನು ನಿರ್ವಿುಸುವ ಗುರಿ ಇಟ್ಟುಕೊಂಡಿದೆ. ಪೊಲೀಸ್ ಅಧಿಕಾರಿಗಳ ನಿರ್ಧಾರ ಮೇರೆಗೆ ಈ ಸಂಖ್ಯೆಯಲ್ಲಿ ಹೆಚ್ಚು-ಕಡಿಮೆ ಆಗಬಹುದು. ಪಾಲಿಕೆ ವ್ಯಾಪ್ತಿಯ 3 ವಿಭಾಗಗಳಿಗೆ (ಹುಬ್ಬಳ್ಳಿ ಉತ್ತರ, ಹುಬ್ಬಳ್ಳಿ ದಕ್ಷಿಣ ಹಾಗೂ ಧಾರವಾಡ) ಪ್ರತ್ಯೇಕವಾಗಿ ಟೆಂಡರ್ ಕರೆಯಲಾಗಿತ್ತು. ಹುಬ್ಬಳ್ಳಿ ಉತ್ತರ ವಿಭಾಗಕ್ಕೆ ಜೆ.ಬಿ. ವ್ಯಾಲಿ, ಹುಬ್ಬಳ್ಳಿ ದಕ್ಷಿಣ ವಿಭಾಗಕ್ಕೆ ರವಿ ಜಿ. ತಾಳಿಕೋಟಿ ಹಾಗೂ ಧಾರವಾಡ ವಿಭಾಗಕ್ಕೆ ವಿ.ಹೆಚ್. ಜಾಧವ ಅವರಿಗೆ ಕಾಮಗಾರಿ ಗುತ್ತಿಗೆ ಕಾರ್ಯಾದೇಶ ನೀಡಲಾಗಿದೆ.
ಹಿನ್ನೆಲೆ:
ಅವಳಿ ನಗರದಲ್ಲಿನ ರಸ್ತೆ ಉಬ್ಬುಗಳು ಅವೈಜ್ಞಾನಿಕವಾಗಿದ್ದು, ವಾಹನಗಳಿಗೆ ಹಾಗೂ ಸವಾರರಿಗೆ ತೊಂದರೆಯಾಗುತ್ತಿದೆ. ವೈಜ್ಞಾನಿಕವಾಗಿ ಹಂಪ್ಸ್ ನಿರ್ವಿುಸುವಂತೆ ಪಾಲಿಕೆಗೆ ನಿರ್ದೇಶನ ನೀಡಬೇಕು ಎಂದು 2016ರಲ್ಲಿ ಸ್ಥಳೀಯರಾದ ಡಾ. ಕೆ.ಹೆಚ್.ಜಿತೂರಿ ಎಂಬುವವರು ಹುಬ್ಬಳ್ಳಿ 3ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ನ್ಯಾಯಾಲಯವು 2017ರಲ್ಲಿ ಅವಳಿ ನಗರದಲ್ಲಿನ ಅವೈಜ್ಞಾನಿಕ ಹಂಪ್ಸ್ ತೆರೆವುಗೊಳಿಸುವಂತೆ ಹಾಗೂ ವೈಜ್ಞಾನಿಕವಾಗಿ ಹಂಪ್ಸ್ ಹಾಕುವಂತೆ ತೀರ್ಪು ನೀಡಿತ್ತು. ತೀರ್ಪಿನ ಬಳಿಕ ಹು-ಧಾ ಮಹಾನಗರ ಪಾಲಿಕೆ ಜೆಸಿಬಿ ಬಳಸಿ 192 ಅವೈಜ್ಞಾನಿಕ ಹಂಪ್ಸ್ ಕಿತ್ತು ಹಾಕಿತ್ತು. ಬಳಿಕ 2019ರಲ್ಲಿ ವೈಜ್ಞಾನಿಕ ಹಂಪ್ಸ್ ನಿರ್ಮಾಣಕ್ಕೆ ಟೆಂಡರ್ ಕರೆದಿತ್ತು.
ಈ ಸುದ್ದಿಯನ್ನೂ ಓದಿ:ನಾಡಿಗೆ ಬಂದ ಜಿಂಕೆಯನ್ನು ಬೆನ್ನಟ್ಟಿ ಕೊಂದ ನಾಯಿಗಳು... ವಿಡಿಯೋ ವೈರಲ್
ಅವಳಿ ನಗರದಲ್ಲಿನ ಅವೈಜ್ಞಾನಿಕ ಹಂಪ್ಸ್ನಿಂದಾಗಿ ಈ ಹಿಂದೆ ಹಲವಾರು ಸಾವು-ನೋವುಗಳು ಸಂಭವಿಸಿವೆ. ವಿದ್ಯಾನಗರದ ಹುಬ್ಬಳ್ಳಿ-ಧಾರವಾರ ರಸ್ತೆಯಲ್ಲೇ ಎರಡ್ಮೂರು ಕಡೆಗಳಲ್ಲಿ ದೊಡ್ಡ ಹಂಪ್ಸ್ಗಳಿದ್ದವು (ಇತ್ತೀಚಿನ ವರ್ಷಗಳಲ್ಲಿ ಇವುಗಳನ್ನು ತೆಗೆದುಹಾಕಲಾಗಿದೆ). ಇವುಗಳು ಸವಾರರಿಗೆ ತಕ್ಷಣವೇ ಕಾಣಿಸುತ್ತಿರಲಿಲ್ಲ. ಈ ಹಂಪ್ಸ್ನಿಂದಾಗಿ ದ್ವಿಚಕ್ರ ವಾಹನಗಳು ಬಿದ್ದು ಅಪಘಾತ ಸಂಭವಿಸಿವೆ. ಇದಕ್ಕೆ ಕಡಿವಾಣ ಹಾಕಲು ಪಾಲಿಕೆ ಮುಂದಾಗಿದೆ.