ಹುಬ್ಬಳ್ಳಿ: ಭ್ರಷ್ಟಾಚಾರಕ್ಕೆ ಇನ್ನೊಂದು ಹೆಸರೇ ಕಾಂಗ್ರೆಸ್ ಪಕ್ಷ. ಐಟಿ ರೈಡ್ನಲ್ಲಿ ಗುತ್ತಿಗೆದಾರರ ಮನೆಯಲ್ಲಿ ಸಿಕ್ಕಿರುವ ಹಣ ಕಾಂಗ್ರೆಸ್ ಪಕ್ಷದ ಮುಖಂಡರ ಹಣವಾಗಿದೆ. ಈ ಬಗ್ಗೆ ಇಡಿ ಹಾಗೂ ಸಿಬಿಐನಂತಹ ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಒತ್ತಾಯಿಸಿದ್ದಾರೆ.
ನಗರದಲ್ಲಿ ಇಂದು ಮಾತನಾಡಿದ ಅವರು, ಕಾಂಗ್ರೆಸ್ ಇತ್ತೀಚೆಗೆ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡುತ್ತೇವೆ ಎಂದಿತ್ತು. ಅದರಂತೆ ಹಣ ಬಿಡುಗಡೆ ಮಾಡಿ, ತನ್ನ ಕಮಿಷನ್ ಹಣ ವಸೂಲಿ ಮಾಡಿಕೊಂಡಿದೆ. ಈ ಪ್ರಕರಣದಲ್ಲಿ ಅನೇಕ ಕಾನೂನುಬಾಹಿರ ವ್ಯಕ್ತಿಗಳಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ ಕರಾಳಮುಖ ಬಯಲು:ಕಾಂಗ್ರೆಸ್ ಅಧಿಕಾರಕ್ಕೆ ಬಂದು ನಾಲ್ಕೈದು ತಿಂಗಳಲ್ಲೇ ಕರಾಳಮುಖ ಬಯಲಾಗಿದೆ. ಇಷ್ಟು ದಿನ ಮೇಕಪ್ ಮಾಡಿಕೊಂಡು ಸತ್ಯ ಹರಿಶ್ಚಂದ್ರರ ರೀತಿಯಲ್ಲಿ ಪೋಸ್ ಕೊಟ್ಟಿದ್ದಾರೆ. ಇದೀಗ ಸಿಕ್ಕ ಹಣದ ಹಿಂದೆ ಕಾಂಗ್ರೆಸ್ ಇದೆ. ಕಾಂಗ್ರೆಸ್ ನೈತಿಕ ಅಧಃಪತನಕ್ಕಿಳಿದಿದೆ. ಇದೊಂದು ಕಮಿಷನ್ ಸರ್ಕಾರ. ಇವರಿಗೆ ಯಾವುದೇ ರೀತಿಯ ಜನರ ಕಲ್ಯಾಣದ ಬಗ್ಗೆ ಅರಿವು, ಕಾಳಜಿವಿಲ್ಲ ಎಂದರು.
ಮತಬ್ಯಾಂಕ್ಗೆ ಬೋಗಸ್ ಆಶ್ವಾಸನೆ:ಚುನಾವಣಾಪೂರ್ವದಲ್ಲಿ ಕಾಂಗ್ರೆಸ್ ಗ್ಯಾರಂಟಿ ಘೋಷಣೆ ಮಾಡಿ, ಇದೀಗ ರಾಜ್ಯದ ಜನರನ್ನು ಕತ್ತಲೆಯಲ್ಲಿ ಇಡುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ತನ್ನ ಮತಬ್ಯಾಂಕ್ಗಾಗಿ ಉಚಿತ ಭಾಗ್ಯ ನೀಡಿದೆ. ಆದರೆ ಯಾವುದೇ ಮುಂಜಾಗ್ರತಾ ಯೋಜನೆ ಬಗ್ಗೆ ವಿಚಾರ ಮಾಡದೇ ಇರುವ ಕಾರಣ ವಿದ್ಯುತ್ ವ್ಯತ್ಯಯ ಉಂಟಾಗುತ್ತಿದೆ.