ಕರ್ನಾಟಕ

karnataka

ETV Bharat / state

ಹುಬ್ಬಳ್ಳಿ: ವಿದ್ಯಾರ್ಥಿ ಸ್ನೇಹಿ ಸಿಎಂ ಎಂದು ಪತ್ರ ಬರೆದಿದ್ದ ವಿದ್ಯಾರ್ಥಿನಿಯನ್ನು ಭೇಟಿಯಾದ ಸಿದ್ದರಾಮಯ್ಯ

ವಿದ್ಯಾರ್ಥಿಗಳಿಗೆ ಮೊಟ್ಟೆ, ಹಾಲು ವಿತರಣೆ ಯೋಜನೆ ವಿಸ್ತರಣೆಯನ್ನು ಶ್ಲಾಘಿಸಿ ವಿದ್ಯಾರ್ಥಿಸ್ನೇಹಿ ಸಿಎಂ ಎಂದು ಪತ್ರ ಬರೆದಿದ್ದ ವಿದ್ಯಾರ್ಥಿನಿಯನ್ನು ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿದರು.

By ETV Bharat Karnataka Team

Published : Sep 9, 2023, 5:34 PM IST

Updated : Sep 9, 2023, 5:58 PM IST

cm-siddaramaiah-met-student-who-wrote-letter-apprasing-government-scheme
ಹುಬ್ಬಳ್ಳಿ: ವಿದ್ಯಾರ್ಥಿಸ್ನೇಹಿ ಸಿಎಂ ಎಂದು ಪತ್ರ ಬರೆದಿದ್ದ ವಿದ್ಯಾರ್ಥಿನಿಯನ್ನು ಭೇಟಿಯಾದ ಸಿಎಂ ಸಿದ್ದರಾಮಯ್ಯ

ವಿದ್ಯಾರ್ಥಿ ಸ್ನೇಹಿ ಸಿಎಂ ಎಂದು ಪತ್ರ ಬರೆದಿದ್ದ ವಿದ್ಯಾರ್ಥಿನಿಯನ್ನು ಭೇಟಿಯಾದ ಸಿದ್ದರಾಮಯ್ಯ

ಹುಬ್ಬಳ್ಳಿ:ರಾಜ್ಯ ಸರ್ಕಾರದ ಮೊಟ್ಟೆ, ಹಾಲು ವಿತರಣೆ ಯೋಜನೆ ಬಗ್ಗೆ ಶ್ಲಾಘಿಸಿ ವಿದ್ಯಾರ್ಥಿಸ್ನೇಹಿ ಸಿಎಂ ಎಂದು ಪತ್ರ ಬರೆದಿದ್ದ ವಿದ್ಯಾರ್ಥಿನಿಯನ್ನು ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿದ್ದಾರೆ. ಇಂದು ಧಾರವಾಡ ಜಿಲ್ಲೆಗೆ ಭೇಟಿಗಾಗಿ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಸಿಎಂ ಅವರನ್ನು ವಿದ್ಯಾರ್ಥಿನಿ ಭೇಟಿ ಮಾಡಿದರು.

ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಮಳಲಿ ಗ್ರಾಮದ ಪ್ರೌಢಶಾಲೆಯ 9ನೇ ತರಗತಿ ಆಶಾ ನೆಹರು ಪಾಟೀಲ್ ಎಂಬ ವಿದ್ಯಾರ್ಥಿನಿ, 8ನೇ ತರಗತಿ ಮಕ್ಕಳವರೆಗೆ ಮಾತ್ರ ಮೊಟ್ಟೆ, ಬಾಳೆಹಣ್ಣು, ಚಿಕ್ಕಿ ನೀಡುವ ಯೋಜನೆಯನ್ನು ಸಿಎಂ ಸಿದ್ದರಾಮಯ್ಯ ಅವರು 9 ಹಾಗೂ 10ನೇ ತರಗತಿ ವಿದ್ಯಾರ್ಥಿಗಳಿಗೂ ವಿಸ್ತರಣೆ ಮಾಡಿದ್ದಕ್ಕೆ ಸಂತೋಷಗೊಂಡು ಸಿಎಂ ಅವರಿಗೆ ಪತ್ರ ಬರೆದು ಧನ್ಯವಾದ ತಿಳಿಸಿದ್ದರು. ಜೊತೆಗೆ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಎಂದು ಸಿಎಂಗೆ ಮನವಿ ಮಾಡಿದ್ದರು. ಆಶಾಳ ಪತ್ರವನ್ನು ಎಕ್ಸ್​ ಜಾಲತಾಣದಲ್ಲಿ ಹಂಚಿಕೊಂಡು ಸಿಎಂ ಅಭಿನಂದನೆ ತಿಳಿಸಿದ್ದರು.

ಸದ್ಯ ಇಂದು ಧಾರವಾಡದಲ್ಲಿ ನಡೆಯುತ್ತಿರುವ ಕೃಷಿ ಮೇಳ ಉದ್ಘಾಟನೆಗೆ ತೆರಳಲು ಸಿಎಂ ಸಿದ್ದರಾಮಯ್ಯ ಹುಬ್ಬಳ್ಳಿಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ವೇಳೆ ವಿದ್ಯಾರ್ಥಿನಿ ಆಶಾ ತನ್ನ ತಂದೆ ಹಾಗೂ ಶಿಕ್ಷಕರ ಜೊತೆಗೆ ಬಂದಿದ್ದರು. ಅಧಿಕಾರಿಗಳ ಮೂಲಕ ವಿದ್ಯಾರ್ಥಿನಿ ಆಶಾ ಬಂದಿರುವ ವಿಷಯ ತಿಳಿದ್ದ ಸಿಎಂ ವಿದ್ಯಾರ್ಥಿನಿಯನ್ನು ಭೇಟಿ ಮಾಡಿ ಕೈ ಕುಲಕಿ‌ ಅಭಿನಂದಿಸಿದರು.

ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ವಿದ್ಯಾರ್ಥಿನಿ ಆಶಾ ನೆಹರು ಪಾಟೀಲ್​, ಹಿಂದೆ 1ರಿಂದ 8 ತರಗತಿ ವರೆಗಿನ ಮಕ್ಕಳಿಗೆ ಮಾತ್ರ ಮೊಟ್ಟೆ, ಬಾಳೆಹಣ್ಣು, ಚೆಕ್ಕಿ ಕೊಡುತ್ತಿದ್ದರು. ಈಗ ಯೋಜನೆಯನ್ನು ಸಿಎಂ ಸಿದ್ದರಾಮಯ್ಯ ಅವರು 9 ಹಾಗೂ 10ನೇ ತರಗತಿ ವಿದ್ಯಾರ್ಥಿಗಳಿಗೂ ವಿಸ್ತರಣೆ ಮಾಡಿದ್ದಾರೆ. ಹೀಗಾಗಿ ನಾನು ಅವರಿಗೆ ಪತ್ರ ಬರೆದಿದ್ದೆ. ನಂತರ ಸಿಎಂ ಅವರು ಪತ್ರ ಬರೆದಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದರು. ಶ್ರೀ ಜಗದ್ಗುರು ಫಕೀರೇಶ್ವರ ಮಳಲಿ ಪ್ರೌಢಶಾಲೆ ನಾನು 9ನೇ ತರಗತಿ ಓದುತ್ತಿದ್ದೇನೆ ಎಂದು ತಿಳಿಸಿದರು.

ವಿದ್ಯಾರ್ಥಿನಿಯ ತಂದೆ ನೆಹರು ಪಾಟೀಲ್ ಮಾತನಾಡಿ, 1ರಿಂದ 8 ತರಗತಿ ವರೆಗಿನ ಮಕ್ಕಳಿಗೆ ಮಾತ್ರ ಮೊಟ್ಟೆ, ಬಾಳೆಹಣ್ಣು, ಚಿಕ್ಕಿ ಕೊಡುತ್ತಿದ್ದಾರೆ. ಇದರಿಂದ ಒಂದೇ ಶಾಲೆಯಲ್ಲಿರುವ 9 ಮತ್ತು 10ನೇ ತರಗತಿ ಮಕ್ಕಳಿಗೆ ಅನ್ಯಾಯವಾದಂತಾಗುತ್ತದೆ ಎಂದು ನನ್ನ ಮಗಳು ಹೇಳಿದ್ದಳು. ನಂತರ ಈ ಯೋಜನೆ 9 ಮತ್ತು 10ನೇ ತರಗತಿ ಮಕ್ಕಳಿಗೂ ವಿಸ್ತರಣೆ ಮಾಡಿರುವ ಬಗ್ಗೆ ಹೇಳಿದೆ. ಇದರಿಂದ ಖುಷಿಯಾದ ಮಗಳು ಸಿಎಂ ಅವರಿಗೆ ಪತ್ರ ಬರೆಯುತ್ತೇನೆ ಎಂದಳು, ಅದಕ್ಕೆ ನಾನು ಅವರ ವಿಳಾಸವನ್ನು ಕೊಟ್ಟಿದೆ. ನಂತರ ನನ್ನ ಮಗಳು ಸರ್ಕಾರಿ ಶಾಲೆಗೆ ಹೆಚ್ಚು ಹೊತ್ತು ಕೊಡಬೇಕು ಮತ್ತು ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಸಿಎಂ ಅವರಿಗೆ ಪತ್ರ ಬರೆದಿದ್ದಳು. ನಿನ್ನೆ ಸಿಎಂ ಸಿದ್ದರಾಮಯ್ಯ ಅವರು ನನ್ನ ಮಗಳ ಪತ್ರವನ್ನು ಎಕ್ಸ್​ ಜಾಲತಾಣದಲ್ಲಿ ಹಂಚಿಕೊಂಡಿದ್ದರು ಎಂದರು.

ಇದನ್ನೂ ಓದಿ:ಇಂದಿನಿಂದ ನಾಲ್ಕು ದಿನಗಳ ಕಾಲ ರೈತ ಜಾತ್ರೆ.. ಧಾರವಾಡ ಕೃಷಿ ಮೇಳ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ

Last Updated : Sep 9, 2023, 5:58 PM IST

ABOUT THE AUTHOR

...view details