ಕರ್ನಾಟಕ

karnataka

By ETV Bharat Karnataka Team

Published : Dec 6, 2023, 12:34 PM IST

ETV Bharat / state

ಪದೆ ಪದೇ ವಿಳಾಸ ಬದಲಿಸಿಕೊಂಡು 21 ವರ್ಷದಿಂದ ಎಸ್ಕೇಪ್​: ಕೊನೆಗೂ ಪೊಲೀಸರ ಬಲೆಗೆ ಬಿದ್ದ ಆರೋಪಿ

Absconding accused arrested: ಪದೇ ಪದೇ ತನ್ನ ವಿಳಾಸ ಬದಲಾಯಿಸಿಕೊಂಡು ಆರೋಪಿ ಕುಮಾರ ಸೂರಪ್ಪ ಶೆಟ್ಟಿ ತಲೆಮರೆಸಿಕೊಂಡು ಓಡಾಡುತ್ತಿದ್ದನು.

accused arrested in hubli who was absconding for 21 years
21 ವರ್ಷ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ: ವಿದ್ಯಾನಗರ ಪೊಲೀಸರ ಕಾರ್ಯಾಚರಣೆ

ಹುಬ್ಬಳ್ಳಿ:ಪೊಲೀಸರ ಕಣ್ಣು ತಪ್ಪಿಸಿಕೊಂಡು 21 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಗಾಂಜಾ ಸಾಗಣೆ ಮಾಡುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ವಿದ್ಯಾನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಕುಮಾರ ಸೂರಪ್ಪ ಶೆಟ್ಟಿ ಬಂಧಿತ ಆರೋಪಿ. ಈತ ಪದೇ ಪದೇ ವಿಳಾಸವನ್ನು ಬದಲಾಯಿಸುತ್ತ ತಲೆಮರೆಸಿಕೊಂಡಿದ್ದರಿಂದ ಈ ಪ್ರಕರಣವು ನ್ಯಾಯಾಲಯದಲ್ಲಿ ಎಲ್.ಪಿ.ಸಿ. ಪ್ರಕರಣವಾಗಿತ್ತು.

ಆರೋಪಿಯ ಪೂರ್ಣ ಹೆಸರು, ವಿಳಾಸ ಮತ್ತು ಭಾವಚಿತ್ರ ಇಲ್ಲದೇ ಇರುವುದರಿಂದ ಅವನನ್ನು ಪತ್ತೆ ಮಾಡುವುದು ಇಲಾಖೆಗೆ ಸವಾಲಾಗಿತ್ತು. ಆರೋಪಿಯ ವಿರುದ್ಧ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಅರೆಸ್ಟ್ ವಾರೆಂಟ್‌ನ್ನು ಹೊರಡಿಸಿದ್ದು, ಅದರಂತೆ ಕಾರ್ಯಪ್ರವೃತ್ತರಾದ ಹುಬ್ಬಳ್ಳಿ ವಿದ್ಯಾನಗರ ಪೊಲೀಸರು ಆರೋಪಿಯ ಜಾಡು ಹಿಡಿದು ಹಾಸನ ಜಿಲ್ಲೆ ಚನ್ನರಾಯಪಟ್ಟಣ ನಗರದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟ್ ಘಟಕದ ಅಂದಿನ ಕಾನೂನು ಮತ್ತು ಸುವ್ಯವಸ್ಥೆಯ ಉಪ ಪೊಲೀಸ್ ಆಯುಕ್ತ ಬಿ ಆರ್ ರವಿಕಾಂತೇಗೌಡ ಅವರು ಈ ಪ್ರಕರಣದ ತನಿಖೆ ಕೈಗೊಂಡಿದ್ದರು. ಪೊಲೀಸರು ಆರೋಪಿಯನ್ನು 2002ರ ಡಿಸೆಂಬರ್​ 9 ರಂದು ಬಂಧಿಸಿದ್ದರು. ಆ ವೇಳೆ ಆತನ ಮನೆ ಮತ್ತು ಆತನ ಬಳಿಯಿಂದ ಒಟ್ಟು 11 ಕ್ವಿಂಟಲ್​ ಗಾಂಜಾವನ್ನು ವಶಪಡಿಸಿಕೊಂಡಿದ್ದರು. ಅಷ್ಟೇ ಅಲ್ಲ, ಆರೋಪಿಯಿಂದ ಗಾಂಜಾ ಮಾರಾಟ ಮಾಡಲು ಬಳಸಿದ್ದ ಸ್ಕೂಟಿ, ಒಂದು ಬುಲೆಟ್ ಮತ್ತು ಒಂದು ಲಾರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಇದರ ಒಟ್ಟು ಮೌಲ್ಯ 24 ಲಕ್ಷ 90 ಸಾವಿರ ರೂಪಾಯಿ ಆಗಿತ್ತು. ಈ ಬಗ್ಗೆ ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

26 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ:ಕಳ್ಳತನ ಪ್ರಕರಣವೊಂದರಲ್ಲಿ ಭಾಗಿಯಾಗಿ ನಂತರ ತಲೆಮರೆಸಿಕೊಂಡಿದ್ದ ಆರೋಪಿಯೊಬ್ಬನನ್ನು ಇತ್ತೀಚೆಗೆ ಬೆಂಗಳೂರಿನ ಕಾಮಾಕ್ಷಿಪಾಳ್ಯ ಠಾಣೆಯ ಪೊಲೀಸರು ನ್ಯಾಯಾಲಯವೊಂದರ ಸಮೀಪದ ಹೋಟೆಲೊಂದರಲ್ಲಿ ಬಂಧಿಸಿದ್ದರು. ದೇವೇಗೌಡ ಎಂಬಾತನ ಬಂಧಿತ ಆರೋಪಿಯಾಗಿದ್ದಾನೆ. 1997ರಲ್ಲಿ ಈತನ ವಿರುದ್ಧ ಕಳ್ಳತನ ಪ್ರಕರಣ ದಾಖಲಾಗಿತ್ತು.

ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಈತನನ್ನು ಪತ್ತೆ ಹಚ್ಚಿ ಹಾಜರುಪಡಿಸುವಂತೆ ನ್ಯಾಯಾಲಯ ಹಲವು ಬಾರಿ ವಾರೆಂಟ್​ ಜಾರಿ ಮಾಡಿತ್ತು. ಬೆಂಗಳೂರು, ಹಾಸನದಲ್ಲಿ ಪೊಲೀಸರು ಸಾಕಷ್ಟು ಶೋಧ ನಡೆಸಿದ್ದರು, ಆದರೆ ಆರೋಪಿ ಪತ್ತೆಯಾಗಿರಲಿಲ್ಲ. ಆದರೆ ಇದೀಗ ಬೆಂಗಳೂರಿನ ನ್ಯಾಯಾಲಯವೊಂದರ ಸಮೀಪದ ಹೋಟೆಲ್​ ಒಂದರಲ್ಲಿ ಅಡುಗೆ ಭಟ್ಟನಾಗಿ ಕೆಲಸ ಮಾಡುತ್ತಿದ್ದ ಹಾಸನ ಜಿಲ್ಲೆಯ ಆಲೂರಿನ ಮೂಲದವನಾದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ:28 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ ಬೆಂಡಿಗೇರಿ ಪೊಲೀಸರು

ABOUT THE AUTHOR

...view details