ದಾವಣಗೆರೆ: ಸ್ಕಿಜೋಫ್ರೇನಿಯಾ ಅಥವಾ ಚಿತ್ತ ವಿಕಲತೆಯಿಂದ ಬಳಲುತ್ತಿರುವ ಮಾನಸಿಕ ಅಸ್ವಸ್ಥರು ಸಮಾಜದಿಂದ ದೂರ ಉಳಿದಿರುವುದು ವಿಷಾದನೀಯ.
ಸ್ಕಿಜೋಫ್ರೇನಿಯಾ ಕಾಯಿಲೆ ಯಾವುದೇ ಮಾಟ ಮಂತ್ರದಿಂದ ಬರುವಂತದ್ದಲ್ಲ. ಬದಲಾಗಿ ಇದು ಮೆದುಳಿನಲ್ಲಿರುವ ರಾಸಾಯನಿಕ ಅಂಶಗಳು ಏರುಪೇರಾಗುವುದರಿಂದ ಅಥವಾ ಅನುವಂಶೀಯತೆಯಿಂದ ಬರುವುದಾಗಿದೆ. ಇದನ್ನು ಅರಿತು ಜನಸಾಮಾನ್ಯರು ಮೂಢನಂಬಿಕೆಗೆ ಒಳಗಾಗಬಾರದು ಎಂದು ಮನೋ ವೈದ್ಯ ಡಾ. ಗಂಗಂ ಸಿದ್ದಾರೆಡ್ಡಿ ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ, ಮನೋವಿಕಾಸ ಪುನರ್ವಸತಿ, ಆಪ್ತ ಸಮಾಲೋಚನಾ ಶಿಕ್ಷಣ ಸಂಸ್ಥೆ ಮತ್ತು ಎ.ಪಿ.ಡಿ ಸಂಸ್ಥೆ ದಾವಣಗೆರೆ ಇವರ ಸಹಯೋಗದೊಂದಿಗೆ ಮಾಯಕೊಂಡ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಏರ್ಪಡಿಸಲಾಗಿದ್ದ “ವಿಶ್ವ ಸ್ಕಿಜೋಫ್ರೇನಿಯಾ ಅರಿವು ದಿನ” ಕಾರ್ಯಕ್ರಮದಲ್ಲಿ ಗ್ರಾಮಸ್ಥರಿಗೆ ಅರಿವು ಕಾರ್ಯಕ್ರಮವನ್ನು ಮಾಸ್ಕ್ ಧರಿಸುವ ಮೂಲಕ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಂಡು ನೆರವೇರಿಸಲಾಯಿತು.
“ನೀವು ಏನು ಸಹಾಯ ಮಾಡಬಹುದು” ಎಂಬ ಘೋಷವಾಕ್ಯವಿದೆ. ಇಲ್ಲಿ ಬೇಗ ಮಾನಸಿಕ ಅಸ್ವಸ್ಥರನ್ನು ಗುರುತಿಸಿ ಅವರಿಗೆ ಮನೋ ವೈದ್ಯರಿಂದ ಉತ್ತಮವಾದ ಚಿಕಿತ್ಸೆ ನೀಡಿ ಮನೋ ಸಾಮಾಜಿಕ ಆರೈಕೆ ಮತ್ತು ಪುನರ್ವಸತಿ ಕಲ್ಪಿಸುವುದಾಗಿದೆ. ಸರ್ಕಾರದಿಂದ ಬರುವಂತಹ ಸೌಲಭ್ಯಗಳನ್ನು ದೊರಕಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಈ ರೀತಿಯಾಗಿ ಮಾಡುವ ಮೂಲಕ ಮಾನಸಿಕ ಅಸ್ವಸ್ಥರನ್ನ ಮುಖ್ಯವಾಹಿನಿಗೆ ತರಬಹುದೆಂದು ತಿಳಿಸಿದರು.