ದಾವಣಗೆರೆ: ಪಾದಯಾತ್ರೆ ಮಾಡಿ ಮೀಸಲಾತಿಗಾಗಿ ನಿರಂತರ ಹೋರಾಟ ಮಾಡುತ್ತಿದ್ದರೂ ಕೂಡ ಸರ್ಕಾರ ಇಂದು-ನಾಳೆ ಎಂದು ದಿನಗಳನ್ನು ದೂಡುತ್ತಿರುವುದರಿಂದ ಬೇಸತ್ತ ವಾಲ್ಮೀಕಿ ಪೀಠದ ಪ್ರಸನ್ನಾನಂದ ಪುರಿ ಶ್ರೀಗಳು (Prasannananda Puri Sri) ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ತಯಾರಿ ನಡೆಸಿದ್ದಾರೆ.
ಮೀಸಲಾತಿ ಹೆಚ್ಚಳ ಘೋಷಿಸಲು ವಾಲ್ಮೀಕಿ ಶ್ರೀ ಪಟ್ಟು: ಸಿಎಂ ಇಕ್ಕಟ್ಟಿಗೆ ಸಿಲುಕಿಸುತ್ತಾ ಶ್ರೀಗಳ ನಡೆ?
ಪರಿಶಿಷ್ಟ ಪಂಗಡಕ್ಕೆ ಇರುವ ಮೀಸಲಾತಿಯನ್ನು ಶೇ 7.5ಕ್ಕೆ ಹೆಚ್ಚಿಸಲು ತೀರ್ಮಾನ ಕೈಗೊಂಡು ಸರ್ಕಾರ ವಾಲ್ಮೀಕಿ ಜಾತ್ರೆಯಲ್ಲಿಯೇ ಘೋಷಿಸಬೇಕು ಎಂದು ವಾಲ್ಮೀಕಿ ಶ್ರೀಗಳು ಪಟ್ಟು ಹಿಡಿದಿದ್ದು, ಇದು ಸಿಎಂ ಬೊಮ್ಮಾಯಿ (CM Bommai) ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದೆ.
ಪರಿಶಿಷ್ಟ ಪಂಗಡಕ್ಕೆ ಇರುವ ಮೀಸಲಾತಿಯನ್ನು ಶೇ. 7.5ಕ್ಕೆ ಹೆಚ್ಚಿಸಲು ತೀರ್ಮಾನ ಕೈಗೊಂಡು ಸರ್ಕಾರ ವಾಲ್ಮೀಕಿ ಜಾತ್ರೆಯಲ್ಲಿಯೇ ಘೋಷಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ. ಈಗಾಗಲೇ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪನವರ ವಿರುದ್ಧ ಗುಡುಗಿರುವ ಪ್ರಸನ್ನಾನಂದ ಪುರಿ ಶ್ರೀಯವರು ನಮ್ಮ ಮೂಗಿಗೆ ಯಡಿಯೂರಪ್ಪನವರು ತುಪ್ಪ ಸವರಿದ್ದಾರೆಂದು ವಾಗ್ದಾಳಿ ನಡೆಸಿದ್ದಾರೆ. ಮೀಸಲಾತಿ ನೀಡಲು ವರದಿ ಆಯಿತು, ಸಬ್ ಕಮಿಟಿ ಕೂಡ ಆಯಿತು, ಇವಾಗ ಉನ್ನತ ಕಮಿಟಿ ಮಾಡಲಾಗಿದೆಯಂತೆ, ಇನ್ನು ಮೀಸಲಾತಿ ಎಂಬ ಫುಟ್ಬಾಲ್ ಅನ್ನು ಗೋಲಿಗೆ ಹಾಕ್ಬೇಕು. ಆದ್ರೆ ಬಿಜೆಪಿ ಸರ್ಕಾರ ಮೀಸಲಾತಿ ವರದಿಯನ್ನು ಸಬ್ ಕಮಿಟಿ, ಸಬ್ ಕಮಿಟಿಯಿಂದ ಉನ್ನತ ಕಮಿಟಿ ಎಂದು ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದೆ ಎಂದು ಪ್ರಸನ್ನಾನಂದ ಪುರಿ ಶ್ರೀ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.
ಇನ್ನು ಮುಂದಿನ ವರ್ಷ 2022 ಫೆ 8-9 ಕ್ಕೆ ಹರಿಹರದ ರಾಜನಹಳ್ಳಿ ಮಠದಲ್ಲಿ ವಾಲ್ಮೀಕಿ ಜಾತ್ರೆ ಹಮ್ಮಿಕೊಳ್ಳಲಾಗಿದೆ. ಜಾತ್ರೆಗೆ ರಾಜ್ಯಾದಂತ ಜನರು ಮಠಕ್ಕೆ ಆಗಮಿಸುವವರಿದ್ದಾರೆ. ಇದೇ ಸಂದರ್ಭದಲ್ಲಿ ಸಾಕಷ್ಟು ಭಕ್ತರ ಮುಂದೆಯೇ ಸಿಎಂ ಬೊಮ್ಮಾಯಿಯವರು ವೇದಿಕೆಯಲ್ಲಿ 7.5 ಮೀಸಲಾತಿ ಘೋಷಣೆ ಮಾಡ್ಬೇಕೆಂಬ ಬೇಡಿಕೆಯನ್ನು ಶ್ರೀಯವರು ಹಾಗು ಚಳ್ಳಕೆರೆ ಕಾಂಗ್ರೆಸ್ ಶಾಸಕ ಟಿ. ರಘುಮೂರ್ತಿ ಆಶಯ ವ್ಯಕ್ತಪಡಿಸಿದ್ದಾರೆ.