ದಾವಣಗೆರೆ: ಬಾಷಾನಗರ ಹಾಗೂ ಜಾಲಿನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳ ಹಿನ್ನೆಲೆಯಲ್ಲಿ ಆರೋಗ್ಯ ತಪಾಸಣೆ ಹಾಗೂ ಗಂಟಲು ದ್ರವ ಪರೀಕ್ಷೆಗೆ ಚುರುಕುಗೊಳಿಸಲಾಗಿದೆ.
ಆರೋಗ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ದುರ್ಗಾಂಬ ಶಾಲೆಯ ಆವರಣದಲ್ಲಿ ಜಾಲಿನಗರದ ನಿವಾಸಿಗಳಿಗೆ ಆರೋಗ್ಯ ತಪಾಸಣೆ ನಡೆಸಿ, ಗಂಟಲು ದ್ರವ ಮಾದರಿಯನ್ನು ಪಡೆದುಕೊಂಡು ಪರೀಕ್ಷೆಗೆ ಕಳುಹಿಸಿದ್ದಾರೆ. ಆರ್ ಸಿ ಹೆಚ್ ಅಧಿಕಾರಿ ಡಾ.ಮೀನಾಕ್ಷಿ, ಡಾ.ನಂದಾ, ಆರೋಗ್ಯ ಸಿಬ್ಬಂದಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಜಾಲಿನಗರದಲ್ಲಿಯೂ ವ್ಯಾಪಕ ಆರೋಗ್ಯ ತಪಾಸಣೆ ಮುಂದುವರಿಸಲಾಗಿದೆ. ಪಿಪಿಇ ಕಿಟ್ ಸಮೇತ ಜಾಲಿನಗರ ಕಂಟೇನ್ಮೆಂಟ್ ಝೋನ್ಗೆ ತೆರಳಿ ಸ್ಥಳೀಯರ ಆರೋಗ್ಯ ತಪಾಸಣೆ ನಡೆಸಿದರು. ಈ ವೇಳೆ ಜಾಲಿನಗರದ ಇನ್ಸಿಡೆಂಟ್ ಕಮಾಂಡರ್ ದೂಡಾ ಆಯುಕ್ತ ಕುಮಾರಸ್ವಾಮಿ ಹಾಗೂ ಇತರ ಅಧಿಕಾರಿ, ಸಿಬ್ಬಂದಿ ನೇತೃತ್ವದಲ್ಲಿ ಗಂಟಲು ದ್ರವ ಪರೀಕ್ಷೆ ಸಂಗ್ರಹಿಸಲಾಯಿತು.
ದಾವಣಗೆರೆ ಜಿಲ್ಲೆಯ 332 ಮಾದರಿಗಳ ವರದಿ ಬರುವುದು ಬಾಕಿ ಇದೆ. ನಗರದ ಐದು ಕಂಟೇನ್ಮೆಂಟ್ ಝೋನ್ ವ್ಯಾಪ್ತಿಯ ಜನರಲ್ಲಿ ಆತಂಕ ಮನೆ ಮಾಡಿದೆ. ಝೋನ್ ವ್ಯಾಪ್ತಿಯಲ್ಲಿ ಬರುವ 10,317 ಮನೆಗಳ 50,915 ಜನರ ಆರೋಗ್ಯ ತಪಾಸಣೆಗೆ ನಿರ್ಧರಿಸಲಾಗಿದೆ.
ಆರೋಗ್ಯ ತಪಾಸಣೆ ವೇಳೆ ಕೆಲ ಜನರಿಗೆ ಜ್ವರ ಇರುವುದು ಪತ್ತೆಯಾಗಿದ್ದು, ಇವರ ಮಾದರಿ ಸಂಗ್ರಹಿಸಲಾಗಿದೆ. ಬಾಷಾನಗರ, ಜಾಲಿನಗರ, ಇಮಾಮ್ ನಗರ, ಬೇತೂರು ರಸ್ತೆ ಹಾಗೂ ಕೆಟಿಜೆ ನಗರ ಐದು ಕಂಟೇನ್ಮೆಂಟ್ ಝೋನ್ನ ಹಾಗೂ ಕ್ವಾರಂಟೈನ್ ಕೇಂದ್ರಗಳಾದ ಲಾಡ್ಜ್ ಗಳಿಗೆ ರಾಸಾಯನಿಕ ಸಿಂಪಡಣೆ ಮಾಡಲಾಗಿದೆ. ಕಂಟೇನ್ಮೆಂಟ್ ಝೋನ್ ಗಳಲ್ಲಿ ನಿರಂತರ ಸೇವೆಯನ್ನು ವೈದ್ಯರು, ಆಶಾ ಕಾರ್ಯಕರ್ತೆಯರು, ಪೌರ ಕಾರ್ಮಿಕರು ಹಾಗೂ ಪೊಲೀಸರು ಸಲ್ಲಿಸುತ್ತಿದ್ದಾರೆ.