ದಾವಣಗೆರೆ:ಜಿಲ್ಲೆಯಲ್ಲಿ ಸ್ಮಾರ್ಟ್ ಸಿಟಿಯ ಕಾಮಗಾರಿಯಿಂದ ಕಿರಿಕಿರಿ, ಇನ್ನೂ ಆಗಿಲ್ವಲ್ಲಾ ಎಂಬ ಮಾತು, ಕಳಪೆ ಕಾಮಗಾರಿ ಸೇರಿದಂತೆ ಹತ್ತು ಹಲವು ಆರೋಪಗಳು ಕೇಳಿ ಬರುತ್ತಿದ್ದವು. ಐದೂವರೆ ವರ್ಷವಾದರೂ ಕಾಮಗಾರಿಗಳು ಮುಗಿದಿಲ್ಲ. ಆದ್ರೆ ಇದೀಗ ಕೊನೆಗೂ ಜನರ ಒತ್ತಡಕ್ಕೆ ಮಣಿದ ಲೋಕಸಭಾ ಸದಸ್ಯ ಜಿ. ಎಂ. ಸಿದ್ದೇಶ್ವರ್ ಎಂಟ್ರಿ ಕೊಟ್ಟಿದ್ದಾರೆ.
ನಗರದ ವಿವಿಧೆಡೆ ನಡೆಯುತ್ತಿದ್ದ ಕಾಮಗಾರಿಗಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಹಾನಗರ ಪಾಲಿಕೆ ಮೇಯರ್, ಸ್ಮಾರ್ಟ್ ಸಿಟಿ ಲಿಮಿಟೆಡ್ನ ಅಧಿಕಾರಿಗಳನ್ನು ಸ್ಥಳಕ್ಕೆ ಕರೆದುಕೊಂಡು ಹೋಗಿ ಕೆಲಸದ ಪ್ರಗತಿಯ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಯಾವುದೇ ಕಾರಣಕ್ಕೂ ಕೆಲಸ ಮಂದಗತಿಯಲ್ಲಿ ಸಾಗಬಾರದು, ಕಳಪೆ ಕಾಮಗಾರಿ ಆಗದಂತೆ ತಡೆಯಬೇಕು ಎಂಬ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಲೋಕಸಭಾ ಸದಸ್ಯ ಜಿ. ಎಂ. ಸಿದ್ದೇಶ್ವರ್ ಸಿದ್ದೇಶ್ವರ್ ಎಚ್ಚರಿಕೆ ನೀಡಿದ ಬಳಿಕ ಸ್ಮಾರ್ಟ್ ಸಿಟಿ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದು, ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಕೇಂದ್ರ ಸರ್ಕಾರದಿಂದ 196 ಕೋಟಿ, ರಾಜ್ಯ ಸರ್ಕಾರದಿಂದ 200 ಕೋಟಿ ರೂಪಾಯಿ ಈಗಾಗಲೇ ಬಿಡುಗಡೆ ಆಗಿದೆ. 68 ಕೋಟಿ ರೂಪಾಯಿ ಬಡ್ಡಿ ರೂಪದಲ್ಲಿ ಇದುವರೆಗೆ ಹಣ ಬಂದಿದೆ. ಈಗಾಗಲೇ 147 ಕೋಟಿ ರೂಪಾಯಿಯ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಆದಷ್ಟು ಬೇಗ ಉಳಿದ ಕೆಲಸಗಳನ್ನು ಮುಗಿಸುತ್ತೇವೆ ಎನ್ನುತ್ತಾರೆ ಸ್ಮಾರ್ಟ್ ಸಿಟಿ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ.
ಶೇಕಡಾ 70 ರಷ್ಟು ಕಾಮಗಾರಿ ಮುಗಿದ ಬಳಿಕ ಮತ್ತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಣ ಬಿಡುಗಡೆ ಮಾಡಲಿವೆ. ಮಳೆಗಾಲ ಬಂದ ಕಾರಣ ಕೆಲಸ ತಡವಾಗಿದೆ. ಡಿಸೆಂಬರ್ ತಿಂಗಳಿನಿಂದ ಈಚೆಗೆ ಕೆಲಸಗಳು ವೇಗವಾಗಿ ನಡೆಯುತ್ತಿವೆ. ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸುತ್ತೇವೆ ಎಂದಿದ್ದಾರೆ. ಒಟ್ಟಿನಲ್ಲಿ ದಾವಣಗೆರೆ ಸ್ಮಾರ್ಟ್ ಆದ್ರೆ ಸಾಕು ಅನ್ನೋದು ಜನರ ಅಭಿಲಾಷೆಲಾಗಿದೆ.