ದಾವಣಗೆರೆ: ರೈಸ್ಮಿಲ್ ಮಾಲೀಕರು ರೈತರ ಸಂಕಷ್ಟಕ್ಕೆ ಸ್ಪಂದಿಸಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಭತ್ತ ಖರೀದಿಸುವಂತೆ ಡಿಸಿ ಮಹಾಂತೇಶ್ ಬೀಳಗಿ ಸೂಚನೆ ನೀಡಿದ್ದಾರೆ.
ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ರೈಸ್ಮಿಲ್ ಮಾಲೀಕರಿಗಾಗಿ ಹಮ್ಮಿಕೊಳ್ಳಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರೈಸ್ಮಿಲ್ ಮಾಲೀಕರೊಂದಿಗೆ ಜಿಲ್ಲಾಡಳಿತವಿದೆ. ನಿಮಗೆ ಯಾವುದೇ ರೀತಿಯ ನಷ್ಟ ಆಗದಂತೆ ನಾವು ನೋಡಿಕೊಳ್ಳುತ್ತೇವೆ. ನಿಮ್ಮ ಬಗ್ಗೆ ಮುತುವರ್ಜಿ ವಹಿಸುತ್ತೇವೆ. ಈ ಹಿನ್ನೆಲೆ ರೈತರಿಗೆ ನೆರವಾಗಲು ಮುಂದೆ ಬರಬೇಕು ಎಂದರು.
ಜಿಲ್ಲೆಯಲ್ಲಿ ರೈತರು ಸಾಕಷ್ಟು ಭತ್ತ ಬೆಳೆದಿದ್ದಾರೆ. ಜಿಲ್ಲೆಯ ನಾಲ್ಕೈದು ಜನ ರೈಸ್ ಮಿಲ್ಲರ್ಸ್ ರೈತರಿಂದ ಭತ್ತ ಖರೀದಿಗೆ ಮುಂದಾಗಬೇಕು. ಉತ್ತಮವಾದ ನಂಬರ್ ಒನ್ ಭತ್ತವನ್ನೇ ರೈತರಿಂದ ಖರೀದಿ ಮಾಡಿಕೊಳ್ಳಿ. ಕನಿಷ್ಠ ಬೆಂಬಲ ಬೆಲೆ ಯೋಜನೆಯು ರೈತರ ಪರವಾಗಿ ಇರುವ ಯೋಜನೆಯಾಗಿದ್ದು, ನೀವು ಇದರಡಿ ಯಾವುದೇ ರೀತಿಯಲ್ಲಿ ನಷ್ಟ ಮಾಡಿಕೊಂಡು ಭತ್ತ ಖರೀದಿಸುವ ಅವಶ್ಯಕತೆಯಿಲ್ಲ. ಬದಲಾಗಿ ರೈತರು ಬೆಳೆದಿರುವ ಉತ್ತಮ ಗುಣಮಟ್ಟದ ಭತ್ತವನ್ನೇ ಖರೀದಿಸಿ ಎಂದರು.
ನಂತರ ಮಾತು ಮುಂದುವರೆಸಿ, ಈ ರೀತಿಯ ಸಂಕಷ್ಟದ ಸಂದರ್ಭದಲ್ಲಿ ರೈಸ್ ಮಿಲ್ಲರ್ಸ್ಗಳಲ್ಲೇ ಯಾರಾದರೂ ಭತ್ತ ಖರೀದಿಗೆ ಮುಂದಾದರೆ ಎಲ್ಲ ರೀತಿಯ ಸಹಕಾರ ನಾವು ನೀಡುತ್ತೇವೆ ಎಂದು ಭರವಸೆ ನೀಡಿದರು.