ದಾವಣಗೆರೆ:ವಂದೇ ಭಾರತ್ ಟ್ರೈನ್ಗೆ ಕಲ್ಲು ಹೊಡೆದ ಪ್ರಕರಣವನ್ನು ರೈಲ್ವೆ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು,ದಾವಣಗೆರೆಯಲ್ಲಿ ರೈಲಿಗೆ ಭದ್ರತೆ ಒದಗಿಸಲು ಪೋಲಿಸರನ್ನು ನಿಯೋಜನೆ ಮಾಡಿದೆ. ದಾವಣಗೆರೆಯಲ್ಲಿ ವಂದೇ ಭಾರತ್ಗೆ ಕಲ್ಲು ಹೊಡೆದ ಪ್ರಕರಣ ನಡೆದ ಬಳಿಕ ರೈಲ್ವೆ ಇಲಾಖೆ ಎಚ್ಚೆತ್ತುಕೊಂಡಿದೆ. ದಾವಣಗೆರೆ ರೈಲು ನಿಲ್ಧಾಣದ ಆರಂಭದ ಪಾಯಿಂಟ್ನಿಂದ ಕೊನೆಗೊಳ್ಳುವ ಪಾಯಿಂಟ್ ವರೆಗೂ ಎಂದರೆ ರೈಲು ನಿಲ್ಧಾಣ ಪಾಸ್ ಆಗುವ ತನಕ ವಂದೇ ಭಾರತ್ ಟ್ರೈನ್ ಗೆ ಆರ್ಪಿಎಫ್ ತಂಡ ಹಾಗೂ ರೈಲ್ವೆ ಪೊಲೀಸರು ಪ್ರತಿದಿನ ಭದ್ರತೆ ಒದಗಿಸುತ್ತಿದ್ದಾರೆ.
ವಂದೇ ಭಾರತ್ಗೆ ಪೊಲೀಸ್ ಭದ್ರತೆ ವಂದೇ ಭಾರತ್ ರೈಲು ಸಂಚಾರದ ವೇಳೆ ಪ್ರತಿ 500 ಮೀಟರ್ ವ್ಯಾಪ್ತಿಗೊಬ್ಬರು ಪೊಲೀಸ್ ಸಿಬ್ಬಂದಿ ನಿಯುಕ್ತಿಗೊಳಿಸಿ ಭದ್ರತೆ ನೀಡಲಾಗುತ್ತಿದೆ. ನಿತ್ಯ ಬೆಳಗ್ಗೆ 9.45ಕ್ಕೆ ಹಾಗೂ ಮಧ್ಯಾಹ್ನ 3.30ಕ್ಕೆ ಎರಡು ಪಾಳೆಯಲ್ಲಿ ಪೊಲೀಸರು ಭದ್ರತೆ ಕಲ್ಪಿಸುತ್ತಿದ್ದಾರೆ. ಇನ್ನು ರೈಲು ಪಾಸ್ ಆಗುವ ವೇಳೆ ಭದ್ರತೆ ಒದಗಿಸಿದ್ದಾರೋ ಇಲ್ವೊ ಎನ್ನುವುದನ್ನು ಖಾತ್ರಿ ಪಡಿಸಿಕೊಳ್ಳಲು ಪೋಲಿಸ್ ಸಿಬ್ಬಂದಿ ಡ್ಯೂಟಿ ಮಾಡಿದ ಸ್ಥಳದಿಂದ ರೈಲು ಸಚರಿಸುವ ವೇಳೆ ಸೆಲ್ಫಿ ಹೊಡೆದು ಕಳಿಸುವ ನಿಯಮವನ್ನು ಮಾಡಲಾಗಿದೆ. ಇದರಿಂದ ವಂದೇ ಭಾರತ್ ರೈಲಿಗೆ ಪೊಲೀಸರು ಎರಡು ಪಾಳೆಯದಲ್ಲಿ ಭದ್ರತೆ ನೀಡುತ್ತಿದ್ದಾರೆ. ಮತ್ತೊಮ್ಮೆ ಕಲ್ಲು ಹೊಡೆದ ಪ್ರಕರಣ ಮರುಕಳಿಸದಂತೆ ರೈಲ್ವೆ ಇಲಾಖೆ ಬಹಳಷ್ಟು ಎಚ್ಚರ ವಹಿಸುತ್ತಿದೆ.
ಕಲ್ಲು ಹೊಡೆದ ಬಾಲಾಪರಾಧಿ ವಶಕ್ಕೆ:ದಾವಣಗೆರೆಯಲ್ಲಿ ವಂದೇ ಭಾರತ್ ರೈಲಿಗೆ ಕಲ್ಲು ಹೊಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ
ಒಬ್ಬನನ್ನು ರೈಲ್ವೆ ಪೋಲಿಸರು ವಶಕ್ಕೆ ಪಡೆದಿರುವ ಕುರಿತು ಎಸ್ಪಿ ಡಾ ಅರುಣ್ ಕುಮಾರ್ ಅವರು ಮೀಡಿಯಾ ಪೋಲಿಸ್ ವಾಟ್ಸ್ಆ್ಯಪ್ ಗುಂಪಿನಲ್ಲಿ ಮಾಹಿತಿ ನೀಡಿದ್ದಾರೆ.
ವಂದೇ ಭಾರತ್ ಘಟನೆಗೆ ಸಂಬಂಧಿಸಿದಂತೆ, ದಾವಣಗೆರೆಯ ವಿಜಯನಗರ ಬಡಾವಣೆಯ ಒಬ್ಬ ಬಾಲಾಪರಾಧಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಆದರೆ , ಕೆಲ ಮಾಧ್ಯಮಗಳಲ್ಲಿ ಇಬ್ಬರು ಬಾಲಪರಾಧಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂಬ ಸುದ್ದಿ ಬಿತ್ತರಿಸಲಾಗಿತ್ತು. ಇದೊಂದು ಸುಳ್ಳು ಸುದ್ದಿ. ಇಬ್ಬರ ಬದಲಿಗೆ ಒಬ್ಬನನ್ನು ಮಾತ್ರ ವಶಕ್ಕೆ ಪಡೆದಿದ್ದೇವೆ. ಈ ಸದ್ಯ ವಿಚಾರಣೆ ನಡೆಸುತ್ತಿದೆ ಎಂದು ಆರ್ಪಿಎಫ್ ದಾವಣಗೆರೆ ಅವರು ಕೂಡ ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದೆ.
ಇನ್ನು ರೈಲಿಗೆ ಕಲ್ಲು ಹೊಡೆದ ಘಟನೆ ಕಳೆದ ಶನಿವಾರ ಮಧ್ಯಾಹ್ನ 3.30 ಕ್ಕೆ ನಡೆದಿದೆ. ಪ್ರಧಾನಿ ನರೇಂದ್ರ ಮೋದಿ ಜೂನ್ 26ಕ್ಕೆ ವಂದೇ ಭಾರತ್ ಟ್ರೈನ್ ನ್ನು ಲೋಕಾರ್ಪಣೆ ಮಾಡಿದ್ದರು. ದಾವಣಗೆರೆ ರೈಲ್ವೆ ಪೊಲೀಸರು ಹಾಗೂ ಆರ್ಪಿಎಫ್ ಪೊಲೀಸರ ನೇತೃತ್ವದಲ್ಲಿ ಬಾಲಕನನ್ನು ವಶಕ್ಕೆ ಪಡೆದು ಬಾಲ ಮಂದಿರಕ್ಕೆ ಕಳುಹಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರೈಲ್ವೆ ಪೊಲೀಸರು ದೂರು ದಾಖಲಿಸಿ ಕೊಂಡಿದ್ದಾರೆ.
ವಂದೇ ಭಾರತ್ಗೆ ಮತ್ತೆ ಕಲ್ಲೆಸದ ಕಿಡಿಗೇಡಿಗಳು: ವಂದೇ ಭಾರತ್ ರೈಲಿಗೆ ಕಲ್ಲು ಹೊಡೆದ ದಾವಣಗೆರೆ ಪ್ರಕರಣ ಮಾಸುವ ಮುನ್ನವೇ ಬೆಂಗಳೂರು-ಧಾರವಾಡ ನಡುವಿನ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಲ್ಲು ಹೊಡೆದಿರುವ ಘಟನೆ ಇಂದು ಬೆಳಗ್ಗೆ ಜರುಗಿದೆ. ಬೆಳಗ್ಗೆ 8.45 ರ ಸುಮಾರಿಗೆ ಚಿಕ್ಕಮಗಳೂರು ಜಿಲ್ಲೆಯ ಬೀರೂರು ಅರಸೀಕರೆ ನಡುವೆ ಸಂಚರಿಸುತ್ತಿದ್ದ ವೇಳೆ ಕಿಡಿಗೇಡಿಗಳು ವಂದೇ ಭಾರತ್ ಎಕ್ಸ್ ಪ್ರೆಸ್ ಗೆ ಕಲ್ಲು ಹೊಡೆದಿದ್ದಾರೆ ಎನ್ನಲಾಗಿದೆ. ರೈಲ್ವೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂಓದಿ:Legislative council Session: ಕಂದಾಯ ಭೂಮಿ ಒತ್ತುವರಿ ತೆರವಿಗೆ ಕ್ರಮ ಹಾಗು ಬಿಗಿ ವ್ಯವಸ್ಥೆ ಮಾಡಲಿದ್ದೇವೆ.. ಸಚಿವ ಕೃಷ್ಣ ಬೈರೇಗೌಡ