ದಾವಣಗೆರೆ: ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಬಳಲುತ್ತಿದ್ದ ವ್ಯಕ್ತಿಯನ್ನು ಆ್ಯಂಬುಲೆನ್ಸ್ನಲ್ಲಿ ಕರೆದುಕೊಂಡು ಬಂದು ಸಹಾಯಹಸ್ತ ಚಾಚಿದ ಕುಟುಂಬಕ್ಕೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಸ್ಪಂದಿಸಿದ್ದಾರೆ.
ಹೊನ್ನಾಳಿ ತಾಲೂಕಿನ ಕುಂಕುವ ಗ್ರಾಮದ ತಿಪ್ಪೇಸ್ವಾಮಿ ಎರಗುಂಟೆ ಗ್ರಾಮದಲ್ಲಿ ಕೆಪಿಟಿಸಿಎಲ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾಗ ಅಪಘಾತಕ್ಕೀಡಾಗಿದ್ದರು. ಆತನನ್ನು ಆ್ಯಂಬುಲೆನ್ಸ್ ಮೂಲಕ ನೇರವಾಗಿ ರೇಣುಕಾಚಾರ್ಯರ ಮನೆಗೆ ಕುಟುಂಬ ಸದಸ್ಯರು ಕರೆತಂದರು.
ಸಂಕಷ್ಟದಲ್ಲಿದ್ದ ಕುಟುಂಬಕ್ಕೆ ಸಹಾಯ ಹಸ್ತ ಚಾಚಿದ ರೇಣುಕಾಚಾರ್ಯ ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕರ ಜೊತೆ ದೂರವಾಣಿಯಲ್ಲಿ ಮಾತನಾಡಿ, ಆರ್ಥಿಕ ಸಮಸ್ಯೆಯಿಂದ ಬಳಲುತ್ತಿರುವ ತಿಪ್ಪೇಸ್ವಾಮಿಗೆ ಸಂಬಳ ಕೊಡಿಸುವ ಭರವಸೆ ನೀಡಿದರು. ಅಲ್ಲದೆ, ರೇಣುಕಾಚಾರ್ಯ ವೈಯಕ್ತಿಕವಾಗಿ ಧನ ಸಹಾಯ ಮಾಡಿದರು. ಕುಟುಂಬಸ್ಥರಿಗೆ ಪುಡ್ ಕಿಟ್ ವಿತರಿಸಿ, ಆತ್ಮ ಸ್ಥೈರ್ಯ ತುಂಬಿದರು.
ಅಪಘಾತದಲ್ಲಿ ಕಾಲಿಗೆ ಪೆಟ್ಟಾಗಿ ಓಡಾಡಲು ಆಗದ ಪರಿಸ್ಥಿತಿಯಲ್ಲಿದ್ದಾರೆ. ಅಲ್ಲದೆ, ನಾಲ್ಕೂವರೆ ವರ್ಷದಿಂದ ವೇತನವಾಗದೆ ಕಾರಣ ಇಡೀ ಕುಟುಂಬವೇ ಸಂಕಷ್ಟಕ್ಕೆ ಒಳಗಾಗಿತ್ತು. ತಿಪ್ಪೇಸ್ಚಾಮಿ ಅವರಿಗೆ ಮೂವರು ಮಕ್ಕಳಿದ್ದಾರೆ.