ದಾವಣಗೆರೆ :ಜಿಲ್ಲೆಯಲ್ಲಿಂದು ಗೃಹಲಕ್ಷ್ಮಿ ಯೋಜನೆಗೆ ಗಣಿ ಮತ್ತು ಭೂವಿಜ್ಞಾನ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಚಾಲನೆ ನೀಡಿದರು. ಕಾರ್ಯಕ್ರಮಕ್ಕೆ ಸಾವಿರಾರು ಮಹಿಳೆಯರು ಆಗಮಿಸಿದ್ದರು. ಮನೆ ಯಜಮಾನಿಗೆ 2 ಸಾವಿರ ರೂ. ಹಣ ನೀಡುತ್ತಿರುವ ಸರ್ಕಾರಕ್ಕೆ ಮಹಿಳೆಯರು ಧನ್ಯವಾದ ತಿಳಿಸಿದರು. ಇನ್ನು ಕೆಲವರು, ನಮ್ಮ ಖಾತೆಗೆ ಹಣ ಬಂದಿಲ್ಲ ಎಂದು ಗೊಂದಲಕ್ಕೀಡಾದರು.
ಫಲಾನುಭವಿ ಶ್ವೇತಾ ಮಾತನಾಡಿ, "ನಾನು ಹೂ ಖರೀದಿಸಿ ತಂದು ಮನೆಯಲ್ಲಿ ಹಾರ ತಯಾರಿಸುತ್ತಿದ್ದೇನೆ. ಅದಕ್ಕೆ ಬಂಡವಾಳ ಹಾಕಲು ಬಡ್ಡಿಗೆ ಹಣ ಪಡೆದು ಸಾಲ ಮಾಡುತ್ತಿದ್ದೆ. ಹೀಗೆ ಮಾಡುತ್ತಿದ್ದರಿಂದ ನಮಗೆ ಮನೆ ನಡೆಸಲು ಆಗುತ್ತಿರಲ್ಲಿಲ್ಲ. ಇದೀಗ ಎರಡು ಸಾವಿರ ರೂಪಾಯಿ ಬರುವುದರಿಂದ ಆ ಸಮಸ್ಯೆ ದೂರವಾಗಲಿದ್ದು, ಮನೆ ನಡೆಸಬಹುದು. ಮಕ್ಕಳ ಶಾಲೆಯ ಫೀಸ್ ಕಟ್ಟಬಹುದು. ಗಂಡಂದಿರು ಹಣ ಕೊಡುವತನಕ ಕಾಯುವ ಪರಿಸ್ಥಿತಿ ಇತ್ತು. ಇದೀಗ ಈ ಸಮಸ್ಯೆ ದೂರವಾಗಲಿದೆ" ಎಂದರು.
ವಂದನ ಎಂಬವರು ಮಾತನಾಡಿ, "ತಿಂಗಳ ಕೊನೆಯಲ್ಲಿ ನಮ್ಮ ಬಳಿ ಹಣ ಇರುತ್ತಿರಲಿಲ್ಲ. ಮನೆ ಖರ್ಚಿಗೆ ತೊಂದರೆಯಾಗುತ್ತಿತ್ತು. ಇದೀಗ ಸರ್ಕಾರದವರು ಎರಡು ಸಾವಿರ ರೂಪಾಯಿ ಹಣ ನೀಡುತ್ತಿರುವುದರಿಂದ ಈ ಸಮಸ್ಯೆ ದೂರವಾಗಲಿದೆ. ಮನೆ ಖರ್ಚಿಗೆ ಸಹಾಯವಾಗಲಿದೆ. ಯಾವುದೇ ಸರ್ಕಾರ ಕೂಡ ಈ ರೀತಿಯ ಯೋಜನೆ ಕೊಟ್ಟಿರಲಿಲ್ಲ. ಉಳಿದ ಗ್ಯಾರಂಟಿಗಳಿಂದ ಮಹಿಳೆಯರಿಗೆ ಸಾಕಷ್ಟು ಒಳ್ಳೆಯದಾಗುತ್ತಿದೆ" ಎಂದು ಹೇಳಿದರು.