ಕರ್ನಾಟಕ

karnataka

ನೀರಿಗಾಗಿ ಮಹಿಳೆಯರ ಜಗಳ.. ಜೀವಜಲವಿರದ ಊರಿಗೆ ಹುಡುಗಿ ಕೊಡಲ್ಲವೆಂದು ಕುಟುಂಬಸ್ಥರು ವಾಪಸ್​!

By

Published : Oct 23, 2021, 7:38 AM IST

ಹುಡುಗನ ಊರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಕಣ್ಣಾರೆ ಕಂಡ ಹುಡುಗಿ ಕಡೆಯವರು ಈ ಮದುವೆ ಬೇಡ ಎಂದು ತಿರಸ್ಕರಿಸಿದ್ದಾರೆ. ಕುಡಿಯುವ ನೀರಿಗಾಗಿ ಮಹಿಳೆಯರ ಜಗಳ ಕಂಡು ಈ ಊರಿಗೆ ಮಗಳನ್ನು ಕೊಡುವುದಿಲ್ಲ ಅಂತ ತಮ್ಮೂರಿಗೆ ವಾಪಸಾಗಿದ್ದಾರೆ. ದಾವಣಗೆರೆ ಜಿಲ್ಲೆಯಲ್ಲಿ ಈ ವಿಚಿತ್ರ ಘಟನೆ ನಡೆದಿದೆ.

marriage-proposal-cancelled-by-family-for-water-problem-in-village
ನೀರಿಗಾಗಿ ನಡುರಸ್ತೆಯಲ್ಲಿ ಮಹಿಳೆಯರ ಜಗಳ

ದಾವಣಗೆರೆ:ರಾಜ್ಯದಲ್ಲಿ ಅತೀ ಹೆಚ್ಚು ನೀರಾವರಿ ಪ್ರದೇಶ ಹೊಂದಿರುವ 2ನೇ ತಾಲೂಕು ಅಂದ್ರೇ ಅದು ಹರಿಹರ, ಅದ್ರೇ ಈ ಭಾಗದಲ್ಲಿ ನೀರಿನ ಸಮಸ್ಯೆ ಇದೆ ಎಂದರೆ ನಂಬಲಸಾಧ್ಯ.

ಹೌದು, ವಿಚಿತ್ರ ಎನಿಸಿದರೂ ಇದು ಸತ್ಯ. ಹರಿಹರ ತಾಲೂಕಿನ ಮಲೇಬೆನ್ನೂರು ಪಟ್ಟಣದಲ್ಲಿ ನೀರಿನ ಸಮಸ್ಯೆಯಿಂದ ನಡೆಯಬೇಕಿದ್ದ ಶುಭಕಾರ್ಯವೊಂದು ಮುರಿದುಬಿದ್ದಿದೆ. ನೀರಿಲ್ಲದ ಊರಿಗೆ ತಮ್ಮ ಮಗಳನ್ನು ಕೊಡುವುದಿಲ್ಲ ಅಂತ ಹುಡುಗಿ ಕಡೆಯವರು ಸಂಬಂಧವನ್ನೇ ತಿರಸ್ಕರಿಸಿದ್ದಾರೆ.

ಮಲೇಬೆನ್ನೂರು ಪಟ್ಟಣದ 2ನೇ ವಾರ್ಡ್​ನಲ್ಲಿ ನೀರಿನ ಸಮಸ್ಯೆ ಕಾಡುತ್ತಿದೆ. ಬೇಸಿಗೆ ಆರಂಭದಲ್ಲೇ ಈ ಸಮಸ್ಯೆ ಎದುರಾಗಿದ್ದು, ಕುಡಿಯಲು ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ. ಈ ಸಮಸ್ಯೆ ನಡುವೆ ಗ್ರಾಮದ ಹಾಲೇಶ್ ಎಂಬುವರ ಸಂಬಂಧಿಗೆ ಹರಿಹರ ತಾಲೂಕಿನ ಬಾನುಹಳ್ಳಿ ಗ್ರಾಮದ ಯುವತಿ ಜೊತೆ ವಿವಾಹ ನಡೆಸಲು ನಿರ್ಧರಿಸಿದ್ದರು.

ನೀರಿಲ್ಲದ ಊರಿಗೆ ಹುಡುಗಿ ಕೊಡಲ್ಲ ಎಂದು ವಾಪಸಾದ ಕುಟುಂಬಸ್ಥರು

ಅದರಂತೆ ಹುಡುಗನ ಮನೆ ನೋಡಲೆಂದು ಹುಡುಗಿ ಕಡೆಯವರು ಆಗಮಿಸಿದ್ದಾರೆ. ಮೊದಲು ಗ್ರಾಮದ ಬೀರಲಿಂಗೇಶ್ವರ ದೇವಾಲಯಕ್ಕೆ ಭೇಟಿ ನೀಡಿ ದರ್ಶನ ಪಡೆದು ಅಲ್ಲಿಂದ ಹೊರಟಿದ್ದಾರೆ. ಆದರೆ ರಸ್ತೆಯಲ್ಲಿ ಕುಡಿಯುವ ನೀರಿಗಾಗಿ ಮಹಿಳೆಯರ ನಡುವೆ ನಡೆಯುತ್ತಿದ್ದ ಜಗಳ ಕಂಡು ಸಂಬಂಧಿಕರು ಈ ಸಂಬಂಧವೇ ಬೇಡ ಎಂದು ಕಡ್ಡಿ ತುಂಡಾದಂಗೆ ಹೇಳಿ ತಮ್ಮೂರಿಗೆ ವಾಪಸ್​ ತೆರಳಿದ್ದಾರೆ.

15 ದಿನಗಳ ಬಳಿಕ ಕುಡಿಯುವ ನೀರು ಪೂರೈಕೆಯಾಗಿದ್ದರಿಂದ ಸ್ಥಳದಲ್ಲಿ ಮಹಿಳೆಯರು ನೀರು ಹಿಡಿಯಲು ಜಗಳಕ್ಕೆ ನಿಂತಿದ್ದರು. ಇದೇ ಸಮಯಕ್ಕೆ ಸರಿಯಾಗಿ ಬಂದ ಹುಡುಗಿ ಕಡೆಯವರು ಮಹಿಳೆಯರ ಜಗಳ ಕಂಡು ಹುಡುಗಿ ಕೊಡುವುದಿಲ್ಲ. ನೀರಿಲ್ಲದ ಊರಿಗೆ ಹುಡುಗಿ ಕೊಡುವುದು ಹೇಗೆ ಅಂತ ಅಲ್ಲಿಂದ ತಮ್ಮ ಊರಿನ ಹಾದಿ ಹಿಡಿದಿದ್ದಾರೆ.

ಇದನ್ನೂ ಓದಿ:ದಾವಣಗೆರೆ: ಕೋಡಿ ಬಿದ್ದ ಸೂಳೆಕೆರೆ.. ಸೇತುವೆ ಜಲಾವೃತ

ABOUT THE AUTHOR

...view details