ದಾವಣಗೆರೆ: ವರದಕ್ಷಿಣೆ ತರುವಂತೆ ಕಿರುಕುಳ ನೀಡಿ ಪತಿಯೇ ಪತ್ನಿಯನ್ನು ಕೊಂದ ಆರೋಪ ಕೇಳಿ ಬಂದಿದೆ. ಈ ಘಟನೆ ಹದಡಿ ರಸ್ತೆಯ ವಿದ್ಯುತ್ ನಗರ ಮಟ್ಟಿಯಲ್ಲಿ ನಡೆದಿದೆ.
ದಾವಣಗೆರೆ: ವರದಕ್ಷಿಣೆಗಾಗಿ ಹೆಂಡತಿಯನ್ನೇ ಕೊಂದ ಪಾಪಿ ಪತಿ
ದಾವಣಗೆರೆಯ ಹದಡಿ ರಸ್ತೆಯ ವಿದ್ಯುತ್ ನಗರ ಮಟ್ಟಿಯಲ್ಲಿ ವರದಕ್ಷಿಣೆಗಾಗಿ ಕೊಲೆ ನಡೆದಿದೆ. ಪತಿಯೊಬ್ಬ ಪತ್ನಿಯನ್ನು ಮನಬಂದಂತೆ ಥಳಿಸಿ ಬಳಿಕ ನೇಣು ಬಿಗಿದು ಕೊಲೆ ಮಾಡಿದ್ದಾನೆ.
ಫುಟ್ಪಾತ್ ವ್ಯಾಪಾರಿ ರವಿ ನಾಯ್ಕ ಎಂಬಾತನೇ ಹೆಂಡತಿಯನ್ನ ಕೊಂದ ಆರೋಪಕ್ಕೆ ಗುರಿಯಾಗಿರುವವರು. ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ದಿದಿಗಿ ತಾಂಡಾದ ರಂಜಿತಾ ಬಾಯಿ ಹಾಗೂ ರವಿ ನಾಯ್ಕನ ವಿವಾಹ ಕಳೆದ ಆರು ವರ್ಷಗಳ ಹಿಂದೆ ನಡೆದಿತ್ತು. ಆಗಿಂದಾಗಲೂ ವರದಕ್ಷಿಣೆ ತರುವಂತೆ ಪತ್ನಿಗೆ ಕಿರುಕುಳ ನೀಡುತ್ತಿದ್ದನಂತೆ. ವಿದ್ಯುತ್ ನಗರ ಮಟ್ಟಿಯಲ್ಲಿ ವಾಸವಿದ್ದ ರವಿ ನಾಯ್ಕ ಹಾಗೂ ರಂಜಿತಾ ನಡುವೆ ಲಾಕ್ಡೌನ್ ಆದ ಬಳಿಕ ಗಲಾಟೆ ಹೆಚ್ಚಾಗಿ ನಡೆದಿದೆ. ಹಲವು ಬಾರಿ ರಾಜಿ ಪಂಚಾಯಿತಿಯೂ ನಡೆದಿತ್ತು.
ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದ ಈತ ಹೆಂಡತಿಯನ್ನು ಮನಬಂದಂತೆ ಥಳಿಸಿ ನೇಣು ಬಿಗಿದು ಕೊಲೆ ಮಾಡಿದ್ದಾನೆ ಎಂದು ಮೃತಳ ಪೋಷಕರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.