ದಾವಣಗೆರೆ: ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ರೈತರು ಸಂಕಷ್ಟಕ್ಕೊಳಗಾಗಿದ್ದಾರೆ. ಮಳೆಯಿಂದಾಗಿ ರೈತರ ಭತ್ತದ ಗದ್ದೆಗಳು ಜಲಾವೃತವಾಗಿದೆ. ಇನ್ನು ಭತ್ತದ ಗದ್ದೆಗಳಲ್ಲಿ ನೀರು ತುಂಬಿಕೊಂಡಿರುವುದರಿಂದ ಗದ್ದೆಯಲ್ಲಿ ತೆಪ್ಪದ ಮೂಲಕ ಮೀನು ಹಿಡಿಯಲು ಸ್ಥಳೀಯರು ಮುಂದಾಗಿದ್ದಾರೆ.
ಇಲ್ಲಿನ ಮುದಹದಡಿಯ ರೈತರು ತಮ್ಮ ಗದ್ದೆಗಳಲ್ಲಿ ಬೆಳೆದಿದ್ದ ಬೆಳೆ ನೀರು ಪಾಲಾಗಿದೆ. ಗ್ರಾಮದ ಗದ್ದೆಗಳು ಹತ್ತಿರದ ದೇವರಬೆಳಕೆರೆ ಪಿಕಪ್ ಡ್ಯಾಂ ನ ಹಿನ್ನೀರಿಗೆ ಅಂಟಿಕೊಂಡಿರುವುದರಿಂದ, ಡ್ಯಾಂನ ಹಿನ್ನೀರು ಗದ್ದೆಗಳಿಗೆ ನುಗ್ಗಿ ಬೆಳೆಗಳು ನಾಶವಾಗಿದೆ. ಒಟ್ಟು 60 ಎಕರೆ ಭತ್ತದ ಗದ್ದೆ ಮತ್ತು ಅಡಕೆ ತೋಟಗಳಿಗೆ ಡ್ಯಾಂನ ಹಿನ್ನೀರು ನುಗ್ಗಿದ್ದು, ಫಸಲು ನೆಲಕಚ್ಚಿವೆ. ಈ ಬಗ್ಗೆ ಸಾಕಷ್ಟು ಬಾರಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ರೈತರು ಹೇಳಿದ್ದಾರೆ.