ದಾವಣಗೆರೆ: ಅದು ಕರ್ನಾಟಕದ ಕಾಟನ್ ಮ್ಯಾಂಚೆಸ್ಟರ್ ಎಂದು ಪ್ರಸಿದ್ಧಿ ಪಡೆದಿರುವ ನಗರ. ಜೊತೆಗೆ ಬೆಣ್ಣೆನಗರಿ ಎಂಬ ಬಿರುದು ಪಡೆದಿರುವ ದಾವಣಗೆರೆಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಬೃಹದಾಕಾರವಾಗಿ ಬೆಳೆದು ನಿಂತಿವೆ. ವೈದ್ಯಕೀಯ ಶಿಕ್ಷಣ ಸೇರಿದಂತೆ ಉನ್ನತ ಶಿಕ್ಷಗಳು ಹೆಚ್ಚಾಗಿವೆ. ಖಾಸಗಿ ಶಾಲೆಗಳು ಒಂದಕ್ಕಿಂತ ಒಂದು ನಾ ಮುಂದು ತಾ ಮುಂದು ಎಂಬಂತೆ ಹಲವು ಸೌಲಭ್ಯಗಳೊಂದಿಗೆ ವಿದ್ಯಾರ್ಥಿಗಳನ್ನು ಸೆಳೆಯುತ್ತಿವೆ. ಆದರೆ ಈ ನಗರದಲ್ಲಿ ಸರ್ಕಾರಿ ಶಾಲೆಯೊಂದು ಯಾವುದೇ ಸೌಲಭ್ಯಗಳಿಲ್ಲದೆ ಸೊರಗಿದೆ.
ಬಡ ಮಕ್ಕಳ ಭವಿಷ್ಯಕ್ಕೆ ಬೀಳದಿರಲಿ ಕೊಡಲಿ ಪೆಟ್ಟು.. ಹೌದು, ಎಸ್ಪಿಎಸ್ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮೂಲಭೂತ ಸೌಕರ್ಯ ಕೊರತೆಯಿಂದ ವಿದ್ಯಾರ್ಥಿಗಳು ಹಲವು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಇದು ಶಾಲೆಯೋ ಪಾಳುಬಿದ್ದಿರುವ ಜಾಗವೋ ಎಂಬಂತೆ ಭಾಸವಾಗುತ್ತಿದೆ. ಶಾಲೆಗಳ ಅಭಿವೃದ್ಧಿಗೆ ಸರ್ಕಾರ ಖರ್ಚು ಮಾಡುವ ಹಣ ಎಲ್ಲಿ ಹೋಗುತ್ತೆ ಎಂಬ ಅನುಮಾನ ಕಾಡುತ್ತಿದೆ.
ಜಿಲ್ಲಾ ಕೇಂದ್ರದಲ್ಲಿದ್ದರೂ ಇದೆಂಥ ಅವ್ಯವಸ್ಥೆ.. ಗ್ರಾಮೀಣ ಭಾಗದಲ್ಲಿರುವ ಬಹತೇಕ ಸರ್ಕಾರಿ ಶಾಲೆಗಳು ಸುಸ್ಥಿತಿಯಲ್ಲಿವೆ. ಆದ್ರೆ ಜಿಲ್ಲಾ ಕೇಂದ್ರದಲ್ಲಿರುವ ಎಸ್ಪಿಎಸ್ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಪರಿಸ್ಥಿತಿ ಹೀಗಿದ್ದರೆ ಬಡ ಮಕ್ಕಳ ಭವಿಷ್ಯಕ್ಕೆ ಕೊಡಲಿ ಪೆಟ್ಟು ಬಿದ್ದಂಗೆ ಆಗಲಿದೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಈ ಶಾಲೆಯತ್ತ ಕಣ್ತೆರೆದು ನೋಡಬೇಕಿದೆ.
ಶಾಲೆಯ ದುಸ್ಥಿತಿ, ಮಕ್ಕಳಿಗೆ ಆತಂಕದ ಸ್ಥಿತಿ.. ಶಾಲೆಯ ಕೊಠಡಿಗಳ ಛಾವಣಿ ಬೀಳುವ ಹಂತ ತಲುಪಿದ್ದು, ಗೋಡೆಗಳು ಬಿರುಕು ಬಿಟ್ಟಿವೆ, ಅಡುಗೆ ಮನೆ ಕುಸಿದು ಬಿದ್ದಿದೆ. ಶೌಚಾಲಯ ದುಸ್ಥಿತಿಗೆ ತಲುಪಿದೆ. ಇದರಿಂದ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿಂದೆ ಇದೇ ಶಾಲೆಯಲ್ಲಿ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು. ಪ್ರಸ್ತುತ ಈ ಸಂಖ್ಯೆ 86ಕ್ಕೆ ಇಳಿಕೆಯಾಗಿದೆ ಎನ್ನುತ್ತಾರೆ ಪೋಷಕ ಲಿಂಗರಾಜ್.