ಕರ್ನಾಟಕ

karnataka

ETV Bharat / state

ದಾವಣಗೆರೆ: ಕಾಂಗ್ರೆಸ್​ ವಿರುದ್ಧ ಬಂಡಾಯ ಎದ್ದ ಮಾಜಿ ಡಿಸಿಎಂ ಪುತ್ರಿಯರು.. - ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು

ಮಾಜಿ ಡಿಸಿಎಂ ಎಂ.ಪಿ. ಪ್ರಕಾಶ್‌ ಪುತ್ರಿ, ಎಂ.ಪಿ ಲತಾ ಹರಪನಹಳ್ಳಿ ಕ್ಷೇತ್ರದಿಂದ ಮಂಗಳವಾರ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.

former-dcm-daughters-rebelled-against-congress-in-harpanahalli
ದಾವಣಗೆರೆ: ಕಾಂಗ್ರೆಸ್​ ವಿರುದ್ಧ ಬಂಡಾಯ ಎದ್ದ ಮಾಜಿ ಡಿಸಿಎಂ ಪುತ್ರಿಯರು..

By

Published : Apr 18, 2023, 9:32 PM IST

ದಾವಣಗೆರೆ:ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ಕೈ ತಪ್ಪಿರುವುದಕ್ಕೆ ತೀವ್ರ ಅಸಮಾಧಾನಗೊಂಡಿರುವ ಮಾಜಿ ಉಪಮುಖ್ಯಮಂತ್ರಿ ದಿವಂಗತ ಎಂ.ಪಿ.ಪ್ರಕಾಶ್‌ ಅವರ ಇಬ್ಬರು ಪುತ್ರಿಯರು ಬಂಡಾಯದ ಕಹಳೆ ಮೊಳಗಿಸಿದ್ದಾರೆ. ಮೂರನೇ ಮಗಳು ಎಂ.ಪಿ.ವೀಣಾ ಹಾಗೂ ಹಿರಿಯ ಮಗಳು ಎಂ.ಪಿ.ಲತಾ ಪಕ್ಷೇತರ ಅಭ್ಯರ್ಥಿಗಳಾಗಿ ಇಂದು ನಾಮಪತ್ರ ಸಲ್ಲಿಸಿದ್ದಾರೆ.

ಹರಪನಹಳ್ಳಿಯ ಕಾಂಗ್ರೆಸ್​ ಟಿಕೆಟ್ ಅ​ನ್ನು ಕೊಟ್ರೇಶ್​ಗೆ ನೀಡಲಾಗಿದೆ. ಟಿಕೆಟ್​ ಕೈ ತಪ್ಪಿದ್ದಕ್ಕೆ ಅಕ್ಕ -ತಂಗಿಯರಿಬ್ಬರೂ ಬಂಡಾಯ ಎದ್ದಿದ್ದು ಕಾಂಗ್ರೆಸ್​ ಅಭ್ಯರ್ಥಿಗೆ ತಲೆನೋವಾಗಿ ಪರಿಣಮಿಸಿದೆ. ಎಂ.ಪಿ ವೀಣಾ ಸೋಮವಾರ ಪಕ್ಷೇತರ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿದ್ದಾರೆ. ಇಂದು ಎಂ.ಪಿ.ಲತಾ ಸಾವಿರಾರು ಬೆಂಬಲಿಗರೊಂದಿಗೆ ಕೋಟೆ ಆಂಜನೇಯ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಹರಪನಹಳ್ಳಿ ಪಟ್ಟಣದಲ್ಲಿ ಅದ್ದೂರಿ ಮೆರವಣಿಗೆ ನಡೆಸಿ ನಾಮಪತ್ರ ಸಲ್ಲಿಸಿದರು.

ಪಕ್ಷೇತರ ಅಭ್ಯರ್ಥಿ ಎಂ.ಪಿ.ಲತಾ ಮಾತನಾಡಿ, ಕಾಂಗ್ರೆಸ್​ನಿಂದ ಟಿಕೆಟ್​ ಸಿಗುತ್ತದೆ ಎಂಬ ನಂಬಿಕೆ ಇತ್ತು. ಆದರೆ ಟಿಕೆಟ್​ ನೀಡಿಲ್ಲ. ನಾನು ಪಕ್ಷದ ವಿರುದ್ಧ ಬಂಡಾಯವಾಗಿ ಅಭ್ಯರ್ಥಿಯಾಗಿ ಸ್ಫರ್ಧಿಸುತ್ತಿಲ್ಲ. ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ, ಒಬ್ಬ ಮಹಿಳೆಯಾಗಿ ಪುರುಷರಿಗಿಂತ ಹೆಚ್ಚಾಗಿ ಪಕ್ಷಕ್ಕೆ ಕೆಲಸ ಮಾಡಿ ತೋರಿಸಿದ್ದೆ. ಎಂ.ಪಿ ಪ್ರಕಾಶ್​ ಮಗಳು ಮತ್ತು ಎಂ.ಪಿ ರವೀಂದ್ರ ಅಕ್ಕ ಎಂಬ ಹೆಸರಿತ್ತು. ಪಕ್ಷದ ಎಲ್ಲಾ ಕೆಲಸವನ್ನು ಮಾಡಿದ್ದೆ, ಆದರೂ ಪಕ್ಷ ನನನ್ನು ಗುರುತಿಸಿಲ್ಲ ಎಂಬುದಕ್ಕೆ ನೋವಾಗಿದೆ. ಕ್ಷೇತ್ರದಿಂದ ಇಬ್ಬರೂ ಮಹಿಳೆಯರು ಅರ್ಜಿ ಹಾಕಿದ್ದೆವು. ಆದರೆ ಒಬ್ಬರಿಗೂ ಟಿಕೆಟ್​ ನೀಡಿಲ್ಲ. ಇದರಿಂದ ಅವಮಾನವಾಗಿದೆ. ಹೀಗಾಗಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದೇನೆ ಎಂದು ತಿಳಿಸಿದರು.

ಈಟಿವಿ ಭಾರತದೊಂದಿಗೆ ಹರಪನಹಳ್ಳಿ ಕಾಂಗ್ರೆಸ್ ಅಭ್ಯರ್ಥಿ ಎನ್.ಕೊಟ್ರೇಶ್ ಮಾತನಾಡಿ, ಪಕ್ಷದ ಮುಖಂಡರು ಆಂತರಿಕ ಸರ್ವೇ ಮತ್ತು ಜನಾಭಿಪ್ರಾಯ ಸಂಗ್ರಹಿಸುವ ಮೂಲಕ ನನಗೆ ಟಿಕೆಟ್​ ನೀಡಿದ್ದಾರೆ. ಈಗಾಗಲೇ ಇತರೆ 13 ಜನ ಆಕಾಂಕ್ಷಿಗಳ ಮನವೊಲಿಸಲಾಗಿದೆ. ನಿನ್ನೆ ಮತ್ತು ಇಂದು ಇಬ್ಬರು ಸಹೋದರಿಯರು ನಾಮಪತ್ರ ಸಲ್ಲಿಸಿದ್ದಾರೆ. ಈ ಕುರಿತು ಹೈಕಮಾಂಡ್ ಅವರಿಬ್ಬರ ಮನವೊಲಿಸುವ ಕಾರ್ಯ ಮಾಡಲಿದೆ. ನಾನೂ ಸಹ ಅವರ ಮನವೊಲಿಸಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರೆಯುತ್ತೇನೆ ಎಂದರು.

ಈ ಕ್ಷೇತ್ರ ಕಾಂಗ್ರೆಸ್​ನ ಭದ್ರಕೋಟೆ. ನಾನು ಎರಡು ಬಾರಿ ಸೋತಿದ್ದೇನೆ. ಕಳೆದ ಬಾರಿ 38 ಸಾವಿರ ಮತಗಳನ್ನು ಪಡೆದುಕೊಂಡಿದ್ದೆ. ನನ್ನೊಂದಿಗೆ ಕಾರ್ಯಕರ್ತರಿದ್ದಾರೆ. ಈ ಬಾರಿ ಕ್ಷೇತ್ರದ ಜನರ ಮೇಲೆ ನನಗೆ ವಿಶ್ವಾಸವಿದೆ. ಎಂ.ಪಿ ಲತಾ ಮತ್ತು ಎಂ.ಪಿ ವೀಣಾ ಅವರನ್ನು ಈಗಾಗಲೇ ಭೇಟಿ ಮಾಡಿದ್ದೇನೆ. ನನಗೆ ನಂಬಿಕೆ ಇದೆ. ಇನ್ನು ಮೂರ್ನಾಲ್ಕು ದಿನಗಳಲ್ಲಿ ಎಲ್ಲವೂ ಸರಿಯಾಗಲಿದೆ. ಈ ಬಾರಿ 35 ಸಾವಿರ ಮತಗಳ ಅಂತರದಲ್ಲಿ ಗೆಲುವು ಸಾಧಿಸುತ್ತೇನೆ ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ:ಇಂದೇ ಶಿವಮೊಗ್ಗ, ಮಾನ್ವಿ ಅಭ್ಯರ್ಥಿಗಳ ಘೋಷಣೆ: ಬಿ.ಎಸ್.ಯಡಿಯೂರಪ್ಪ

ABOUT THE AUTHOR

...view details