ದಾವಣಗೆರೆ: ಚನ್ನಗಿರಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕಾಡಾನೆಗಳು ಜಮೀನುಗಳಿಗೆ ಲಗ್ಗೆ ಇಟ್ಟು ಬೆಳೆ ನಾಶ ಮಾಡುತ್ತಿದ್ದು, ರೈತರು ಕಂಗಾಲಾಗಿದ್ದಾರೆ.
ಶಾಂತಿಸಾಗರ ಅರಣ್ಯವಲಯ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ಸಾರಥಿ, ಜೋಳದಾಳ್, ಮಾದೇನಹಳ್ಳಿ, ಗಾಣದಕಟ್ಟೆ ಸೇರಿದಂತೆ ಅಕ್ಕಪಕ್ಕದ ಭಾಗಗಳಲ್ಲಿ ಆನೆಗಳ ದಾಳಿಯಿಂದ ನೂರಾರು ಅಡಿಕೆ ಮರಗಳು ಧರೆಗುರುಳಿವೆ. ಅಡಿಕೆ, ತೆಂಗು, ಬಾಳೆ, ಮೆಕ್ಕೆಜೋಳ ಬೆಳೆಗಳೂ ನೆಲಸಮವಾಗಿವೆ.
ಕಾಡಾನೆಗಳು ಜಮೀನುಗಳಿಗೆ ನುಗ್ಗಿ ಬೆಳೆ ನಾಶ ಮಾಡುತ್ತಿವೆ ಸಂಜೆ ಆಗುತ್ತಲೇ ಹೊಲ ಗದ್ದೆಗಳಿಗೆ ನುಗ್ಗಿ ಆನೆಗಳು ಬೆಳೆ ಹಾನಿ ಮಾಡುತ್ತಿವೆ. ಅರಣ್ಯ ಇಲಾಖೆಗೆ ಆನೆಗಳ ನಿಯಂತ್ರಣ ಮಾಡುವಂತೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ ಎಂದು ರೈತರು ಆರೋಪಿಸಿದ್ದಾರೆ.
ಇನ್ನು ಕಾಡನಂಚಿನಲ್ಲಿರುವ ಹೊಲ, ಗದ್ದೆಗಳಿಗೆ ಹೋಗುವುದಕ್ಕೆ ರೈತರು ಭಯಪಡುವಂತ ವಾತಾವರಣ ನಿರ್ಮಾಣ ಆಗಿದೆ. ಆದಷ್ಟು ಬೇಗ ಅಧಿಕಾರಿಗಳು ಅರಣ್ಯ ವ್ಯಾಪ್ತಿಯಲ್ಲಿ ಬರುವ ಜಮೀನುಗಳ ಸಮೀಪದಲ್ಲಿ ಕಂದಕ ನಿರ್ಮಿಸುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.