ಕರ್ನಾಟಕ

karnataka

ಚುನಾವಣೆಯಲ್ಲಿ ಸ್ಪರ್ಧಿಸದಿರುವುದಕ್ಕೆ ಉಪ್ಪಿ ಕೊಟ್ಟ ಕಾರಣ ಏನು ಗೊತ್ತಾ?

By

Published : Apr 10, 2019, 5:44 PM IST

ನಾನು ಚುನಾವಣೆಗೆ ಸ್ಪರ್ಧಿಸಿದರೆ ರಾಜ್ಯದ 27 ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ ಉತ್ತಮ ಪ್ರಜಾಕೀಯ ಪಕ್ಷದ ಪರ ಯಾರು ಪ್ರಚಾರ ನಡೆಸುತ್ತಾರೆ? ಹಾಗಾಗಿ ನಾನು ಈ ಬಾರಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿಲ್ಲ ಎಂದು ನಟ ಉಪೇಂದ್ರ ತಿಳಿಸಿದ್ದಾರೆ.

ನಟ ಉಪೇಂದ್ರ

ದಾವಣಗೆರೆ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನಟ ಉಪೇಂದ್ರ ಯಾಕೆ ಸ್ಪರ್ಧಿಸಿಲ್ಲ ಗೊತ್ತಾ? ಈ ಪ್ರಶ್ನೆಗೆ ಸ್ವತಃ ಸೂಪರ್ ಸ್ಟಾರ್ ದಾವಣಗೆರೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಉತ್ತರ ಕೊಟ್ಟಿದ್ದಾರೆ.

ಬೆಣ್ಣೆನಗರಿಯಲ್ಲಿ ಮಾತನಾಡಿದ ಉಪೇಂದ್ರ, ನಾನು ಚುನಾವಣೆಗೆ ಸ್ಪರ್ಧಿಸಿದರೆ ರಾಜ್ಯದ 27 ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ ಉತ್ತಮ ಪ್ರಜಾಕೀಯ ಪಕ್ಷದ ಪರ ಯಾರು ಪ್ರಚಾರ ನಡೆಸುತ್ತಾರೆ. ನಾನೇ ಎಲ್ಲಾ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಬೇಕು. ಈ ಹಿನ್ನೆಲೆಯಲ್ಲಿ ಚುನಾವಣಾ ಅಖಾಡಕ್ಕೆ ಧುಮುಕಿಲ್ಲ ಎಂದು ಹೇಳುವ ಮೂಲಕ ಚುನಾವಣೆಗೆ ಸ್ಪರ್ಧಿಸದಿರುವ ಕುರಿತ ಗುಟ್ಟು ಬಹಿರಂಗಪಡಿಸಿದರು.

ಸಿನಿಮಾ‌ ಕಲಾವಿದರು ಪ್ರಚಾರಕ್ಕೆ ಬಂದು ಹೇಳಿದರೆ ಬದಲಾವಣೆ ಆಗದು. ನಮ್ಮ ಸ್ವಂತಿಕೆ ಏನೂ ಇರುವುದಿಲ್ಲ. ಉಪೇಂದ್ರ ಎಲ್ಲಿ ಸ್ಪರ್ಧಿಸುತ್ತಾರೆ, ಪ್ರಿಯಾಂಕಾ ಎಲ್ಲಿ ಸ್ಪರ್ಧಿಸುತ್ತಾರೆ ಎಂಬುದು ಮುಖ್ಯವಲ್ಲ, ಬದಲಾವಣೆ ಆಗಬೇಕು. ಜನಸಾಮಾನ್ಯರ ಕಷ್ಟಕ್ಕೆ ಸ್ಪಂದಿಸುವವರು ಆಯ್ಕೆಯಾಗಬೇಕು. ಕೆಲಸ ಮಾಡುವವರು ಆರಿಸಿ ಬರಬೇಕು ಎಂಬ ಅಪೇಕ್ಷೆ ನಮ್ಮದು. ಇದೆಲ್ಲಾ ಆದಷ್ಟು ಬೇಗ ಆಗದು ಎಂಬುದು ಗೊತ್ತಿದೆ. ಆದರೂ ಬದಲಾವಣೆಗೆ ಸಾಕಷ್ಟು ಸಮಯಾವಕಾಶ ಬೇಕು. ನಮ್ಮಿಂದಾಗದು ಎಂದರೆ ಆಗದು. ಪ್ರಯತ್ನಪಟ್ಟರೆ ಎಲ್ಲವೂ ಸುಲಭವಾಗುತ್ತದೆ ಎಂದು ಉಪೇಂದ್ರ ಹೇಳಿದರು.

ನಟ ಉಪೇಂದ್ರ

ಬಳ್ಳಾರಿಯಲ್ಲಿ ಮಾತ್ರ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿ ಕಣಕ್ಕಿಳಿಸಿಲ್ಲ. ಮಂಡ್ಯದಲ್ಲಿ ನಾವು ಅಭ್ಯರ್ಥಿ ಕಣಕ್ಕಿಳಿಸಿದ್ದೇವೆ. ಅಲ್ಲಿ ಬೇರೆಯವರ ಬಗ್ಗೆ ತಲೆಕೆಡಿಸಿಕೊಂಡಿಲ್ಲ.‌ ನಮ್ಮ ಪಕ್ಷದ ಅಭ್ಯರ್ಥಿಗಳೇ ನಮಗೆ ಮುಖ್ಯ. ಹಾಗಾಗಿ ನಾನು ಅಖಾಡಕ್ಕೆ ಧುಮುಕಿಲ್ಲ. ಹೋದ ಕಡೆಗಳಲ್ಲಿ ಪಕ್ಷದ ಬಗ್ಗೆ ಒಳ್ಳೆಯ ಮಾತುಗಳು ಕೇಳಿ ಬರುತ್ತಿದ್ದು, ಇದು ಖುಷಿ ತಂದಿದೆ ಎಂದರು.

ನಮ್ಮ ಅಭ್ಯರ್ಥಿಗಳು ರೋಡ್ ಶೋ, ರ‍್ಯಾಲಿ, ಸಭೆ ಸಮಾರಂಭಗಳನ್ನು ನಡೆಸುವುದಿಲ್ಲ. ನಮ್ಮದೇನಿದ್ದರೂ ಕೇವಲ 30 ರಿಂದ 40 ಸಾವಿರ ಮಾತ್ರ ಚುನಾವಣೆಗೆ ಖರ್ಚು. ಚುನಾವಣಾ ಆಯೋಗ 70 ಲಕ್ಷ ರುಪಾಯಿಗೆ ವೆಚ್ಚ ನಿಗದಿಪಡಿಸಿದ್ದರೂ 70 ಕೋಟಿ ರೂಪಾಯಿವರೆಗೂ ಖರ್ಚು ಮಾಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ.‌ ಜನಸಾಮಾನ್ಯರಿಗೆ ತೊಂದರೆ ಆಗದ ಹಾಗೆ ಚುನಾವಣೆ ನಡೆಸಬೇಕೆಂಬ ಉದ್ದೇಶ ನಮ್ಮದು. ಈ ದಾರಿಯಲ್ಲಿ ನಾವು ಸಾಗುತ್ತಿದ್ದೇವೆ ಎಂದು ತಿಳಿಸಿದರು.

ಯಾವುದೇ ಫಂಡ್ ನೀಡಿಲ್ಲ:

ಉತ್ತಮ ಪ್ರಜಾಕೀಯ ಪಕ್ಷದ ಯಾವ ಅಭ್ಯರ್ಥಿಗಳಿಗೆ ಪಕ್ಷವು ಫಂಡ್ ನೀಡಿಲ್ಲ. ಎಲ್ಲಾ ಖರ್ಚನ್ನು ಅವರೇ ಭರಿಸುತ್ತಾರೆ.‌ ಪಾಂಪ್ಲೆಟ್, ಮಾಧ್ಯಮ, ಸೋಶಿಯಲ್ ಮೀಡಿಯಾ ಮೂಲಕ ಪ್ರಚಾರ ನಡೆಸುತ್ತಿದ್ದೇವೆ. ಹಣ ಖರ್ಚು ಮಾಡಿ ಚುನಾವಣೆ ಎದುರಿಸುವುದಕ್ಕೆ ನಮ್ಮ ವಿರೋಧವಿದೆ. ಗೆದ್ದ ಬಳಿಕ ಅಭ್ಯರ್ಥಿಗಳು ಸುಲಭವಾಗಿ ಜನರ ಕೈಗೆ ಸಿಗಬೇಕು. ಅವರ ಕೆಲಸ ಮಾಡಿಕೊಡುವ ನಾಯಕರು ಬೇಕು. ದಾವಣಗೆರೆಯಿಂದ ಬಿ. ಎ. ಗಣೇಶ್ ಕಣಕ್ಕಿಳಿದಿದ್ದು, ಅಭ್ಯರ್ಥಿಯ ಪ್ರಚಾರಕ್ಕೆ ನಾನೇ ಬಂದಿದ್ದೇನೆ. ಎಲ್ಲಾ ಕಡೆಗಳಲ್ಲಿಯೂ ನಾನೇ ಹೋಗಿ ಕ್ಯಾಂಪೇನ್ ಮಾಡುತ್ತೇನೆ ಎಂದು ಹೇಳಿದರು.

ಮಾಧ್ಯಮಗೋಷ್ಠಿಯಲ್ಲಿ ಉಪ್ಪಿ ಅಭಿಮಾನಿಗಳ ದಂಡು...!

ಉಪೇಂದ್ರ ಪತ್ರಿಕಾಗೋಷ್ಠಿಗೆ ಆಗಮಿಸುತ್ತಿದ್ದಂತೆ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ್ದರು.‌ ಈ ವೇಳೆ ಉಪ್ಪಿ ಜೊತೆ ಸೆಲ್ಫಿ ತೆಗೆದುಕೊಳ್ಳಲು ನಾ ಮುಂದು ತಾ ಮುಂದು ಅಂತಾ ಮುಗಿಬಿದ್ದರು.‌

For All Latest Updates

TAGGED:

ABOUT THE AUTHOR

...view details