ಕರ್ನಾಟಕ

karnataka

By

Published : Mar 2, 2023, 3:24 PM IST

ETV Bharat / state

ದಾವಣಗೆರೆ: ಗ್ಯಾಸ್ ಗೀಸರ್ ಸ್ಫೋಟ, ಪತ್ರಕರ್ತ ಸಾವು

ಸ್ನಾನ ಮಾಡಲು ಗ್ಯಾಸ್ ಗೀಸರ್ ಆನ್ ಮಾಡಿದಾಗ ನಡೆದ ದುರಂತ - ಸ್ಫೋಟದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಪತ್ರಕರ್ತ - ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಮಣಿಪಾಲ ಆಸ್ಪತ್ರೆಗೆ ದಾಖಲು - ಚಿಕಿತ್ಸೆ ಫಲಿಸದೆ ಸಾವು.

davangere-gas-geyser-explosion-journalist-death
ದಾವಣಗೆರೆ: ಗ್ಯಾಸ್ ಗೀಸರ್ ಸ್ಫೋಟ, ಪತ್ರಕರ್ತ ಸಾವು

ದಾವಣಗೆರೆ: ಗ್ಯಾಸ್ ಗೀಸರ್​ ಸ್ಫೋಟಗೊಂಡು ಗಂಭೀರವಾಗಿ ಗಾಯಗೊಂಡಿದ್ದ ಪತ್ರಕರ್ತ ರಾಘವೇಂದ್ರ (42) ಗುರುವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ವಿದ್ಯಾನಗರದ ಅವರ ನಿವಾಸದಲ್ಲಿ ಕಳೆದ ಶನಿವಾರ ಈ ದುರ್ಘಟನೆ ನಡೆದಿತ್ತು. ಗೀಸರ್​ ಸ್ಫೋಟಗೊಂಡು ಗಂಭೀರವಾಗಿ ಗಾಯಗೊಂಡಿದ್ದ ರಾಘವೇಂದ್ರ ಅವರನ್ನು ಚಿಕಿತ್ಸೆಗಾಗಿ ದಾವಣಗೆರೆ ನಗರದ ಎಸ್ಎಸ್ ಹೈಟೆಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.

ಗುರವಾರ ಬೆಳಗ್ಗೆ ಚಿಕಿತ್ಸೆ ಫಲಿಸದೆ ರಾಘವೇಂದ್ರ ಅವರು ಮೃತಪಟ್ಟಿದ್ದಾರೆ. ಹರಿಹರದ ವಿದ್ಯಾನಗರ ನಿವಾಸಿಯಾದ ರಾಘವೇಂದ್ರ ಅವರು ಆರಂಭದಲ್ಲಿ ಪತ್ರಿಕಾ ಏಜೆಂಟ್ ಆಗಿ ಬಳಿಕ ರಾಜ್ಯಮಟ್ಟದ ಪತ್ರಿಕೆಯಲ್ಲಿ ಅರೆಕಾಲಿಕ ವರದಿಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಒಂದು ದಶಕಕ್ಕೂ ಹೆಚ್ಚು ಕಾಲ ಪತ್ರಕರ್ತರಾಗಿ ಕೆಲಸ ಮಾಡಿದ ರಾಘವೇಂದ್ರ ಅವರು ಇತ್ತೀಚೆಗೆ ಪಾಲುದಾರಿಕೆಯಲ್ಲಿ ಹೋಟೆಲ್ ಆರಂಭಿಸಿ ಜೀವನ ಸಾಗಿಸುತ್ತಿದ್ದರು. ಅವರ ಅಗಲಿಗೆಕೆ ಇಡೀ ಕುಟುಂಬಸ್ಥರು, ಸ್ನೇಹಿತರು ಕಂಬನಿ ಮಿಡಿದಿದ್ದಾರೆ. ಇಂದು ಹರಿಹರದಲ್ಲಿರುವ ನಿವಾಸಕ್ಕೆ ಅವರ ಪಾರ್ಥಿವ ಶರೀರವನ್ನು ತರಲಾಗುತ್ತಿದ್ದು, ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬಳಿಕ ಅಂತಿಮ ಸಂಸ್ಕಾರ ಮಾಡಲಾಗುವುದೆಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ.

ಫಾರ್ಮಾ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟ:ಆನೇಕಲ್ ತಾಲೂಕಿನ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿನ ಕಾರ್ಖಾನೆಯೊಂದರಲ್ಲಿ ಬಾಯ್ಲರ್ ಸ್ಫೋಟಗೊಂಡು ಮೂವರು ಕಾರ್ಮಿಕರ ಸ್ಥಿತಿ ಗಂಭೀರವಾದ ಘಟನೆ ಬುಧವಾರ ನಡೆದಿತ್ತು. 'ಬಾಲ್ ಫಾರ್ಮಾ' ಕೆಮಿಕಲ್ ಕಾರ್ಖಾನೆಯ ಎರಡನೇ ಸೆಕ್ಟರ್​ನಲ್ಲಿ ಬಾಯ್ಲರ್ ಒತ್ತಡ ಹೆಚ್ಚಾದಾಗ ಒತ್ತಡ ಡಿಸ್ಚಾರ್ಜ್ ಮಾಡಬೇಕಾಗಿತ್ತು. ಆದರೆ, ಪ್ರೆಸರ್ ಡಿಸ್ಚಾರ್ಜ್ ಮಾಡದ ಕಾರಣ ಏಕಾಏಕಿ ಪ್ರೆಸರ್ ಹೆಚ್ಚಾಗಿ ಬಾಯ್ಲರ್ ಸಿಡಿದಿದೆ ಎಂಬ ಮಾಹಿತಿ ತಿಳಿದುಬಂದಿತ್ತು.

ಕಾರ್ಮಿಕರಾಗಿದ್ದ ಪ್ರದೀಪ್, ಮುರುಗನ್ ಮತ್ತು ಕಿರಣ್ ಬಿ.ಸಿ ಕೆಮಿಕಲ್ ಸಿಡಿತದಿಂದ ಸುಟ್ಟ ಗಾಯಗಳಾಗಿ ಕೂಡಲೇ ಅವರನ್ನು ಬೆಂಗಳೂರಿನ‌ ವಿಕ್ಟೋರಿಯಾ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದ್ದು, ಸಾವು ಬದುಕಿನ‌ ನಡುವೆ ಹೋರಾಟ ನಡೆಸುತ್ತಿದ್ದಾರೆ. ಸ್ಥಳಕ್ಕೆ ಹೆಬ್ಬಗೋಡಿ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ದೌಡಾಯಿಸಿದ್ದು, ಪರಿಶೀಲನೆ‌ ನಡೆಸಿ ತನಿಖೆ‌ ಮುಂದುವರೆಸಿದ್ದಾರೆ.

ಕಾಡಾನೆ ದಾಳಿಗೆ ರೈತ ಬಲಿ: ದನ ಮೇಯಿಸಲು ಕಾಡಿಗೆ ಹೋಗಿದ್ದ ರೈತನ ಮೇಲೆ ಕಾಡಾನೆ ದಾಳಿ ಮಾಡಿದ ಪರಿಣಾಮ ರೈತ ಮೃತಪಟ್ಟಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಸೊಳ್ಳೆಪುರ ದೊಡ್ಡಿ ಗ್ರಾಮದ ಬಳಿ ಸಂಭವಿಸಿದೆ. ಸೊಳ್ಳೆಪುರ ದೊಡ್ಡಿ ನಿವಾಸಿ ಅಲಗಪ್ಪ (50) ಮೃತ ರೈತ. ನಿತ್ಯ ದನಗಳನ್ನು ಮೇಯಿಸಲು ಕಾಡಿಗೆ ಅಲಗಪ್ಪ ಹೋಗುತ್ತಿದ್ದರು. ಮೂರು ದಿನದ ಹಿಂದೆ ಅವರು ಎಂದಿನಂತೆ ದನ ಮೇಯಿಸಲು ಹೋಗಿದ್ದರು. ಆದರೆ ತಾನು ಸಾಕಿದ್ದ ಹಸು ತಪ್ಪಿಸಿಕೊಂಡಿದ್ದರಿಂದ ಕಾಡಿನಲ್ಲಿ ಹುಡುಕಲು ಹೋಗಿದ್ದವರು, ಮನೆಗೆ ವಾಪಸ್ ಬಂದಿರಲಿಲ್ಲ. ಎರಡು ದಿನಗಳಿಂದ ಕುಟುಂಬದವರು ಹುಡುಕಾಟ ನಡೆಸಿದರೂ ಅಲಗಪ್ಪ ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ಬುಧವಾರ ಕಾಡಿನಲ್ಲಿ ಹಾರೋಹಳ್ಳಿ ಬೀಟ್ ಗುಲ್ಲೆಟ್ಟಿ ಕಾವಲ್ ಬಳಿ ರೈತನ ಮೃತದೇಹ ಅರಣ್ಯ ಇಲಾಖೆ ಸಿಬ್ಬಂದಿಗೆ ಪತ್ತೆಯಾಗಿತ್ತು. ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಮಗಳ ಮೇಲೆ ಅತ್ಯಾಚಾರ ನಡೆಸಿದ ವ್ಯಕ್ತಿಗೆ 25 ವರ್ಷಗಳ ಜೈಲು ಶಿಕ್ಷೆ..!

ABOUT THE AUTHOR

...view details