ಕರ್ನಾಟಕ

karnataka

By

Published : Feb 28, 2023, 6:35 PM IST

Updated : Feb 28, 2023, 9:21 PM IST

ETV Bharat / state

ದಾವಣಗೆರೆ: ಸ್ನೇಹಿತನ ಕೊಲೆಗೈದು ಪೊಲೀಸರಿಗೆ ಶರಣಾದ ಆರೋಪಿ​

ದಾವಣಗೆರೆ ನಗರದಲ್ಲಿ ವೈಯಕ್ತಿಕ ಕಾರಣಕ್ಕೆ ಸ್ನೇಹಿತರ ನಡುವೆ ಗಲಾಟೆ ನಡೆದು ಕೊಲೆಯಲ್ಲಿ ಅಂತ್ಯವಾಗಿದೆ.

davangere-accused-surrenders-to-police-after-murdering-friend
ಸ್ನೇಹಿತನನ್ನೆ ಕೊಲೆಮಾಡಿ ಪೊಲೀಸರಿಗೆ ಶರಣಾದ ಆರೋಪಿ​

ದಾವಣಗೆರೆ: ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಸ್ನೇಹಿತನನ್ನು ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ಕಬ್ಬೂರ ಬಸಪ್ಪ‌ ನಗರದಲ್ಲಿ ನಡೆದಿದೆ‌. ಪ್ರಶಾಂತ (29) ಕೊಲೆಯಾದ ವ್ಯಕ್ತಿ. ಆರೋಪಿ ರಾಕೇಶ್ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ​.

ಕಬ್ಬೂರ ಬಸಪ್ಪ ನಗರದ ಎಲವಟ್ಟಿ ರೈಸ್ ಮಿಲ್ ಬಳಿ ಪ್ರಶಾಂತ್ ಶವ ಪತ್ತೆ‌ಯಾಗಿದೆ. ಪ್ರಶಾಂತ್‌ಗೆ​ ಪತ್ನಿ ಹಾಗೂ ಒಂದು ವರ್ಷದ ಮಗು ಇದೆ. ಆರ್​ಎಂಸಿ ಪೊಲೀಸರು ಹಾಗೂ ಡಿವೈಎಸ್​ಪಿ ಮಲ್ಲೇಶ್ ದೊಡ್ಡಮನಿ ಘಟನಾ ಸ್ಥಳ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಕಳೆದ ರಾತ್ರಿ 8 ಗಂಟೆ ಸುಮಾರಿಗೆ ಪ್ರಶಾಂತ್​ ಮತ್ತು ರಾಕೇಶ್​ ಜೊತೆಯಾಗಿ ಹೋಗಿದ್ದಾರೆ. ತದನಂತರ ಪ್ರಶಾಂತ್​ ಮೊಬೈಲ್​ ಸ್ವಿಚ್​ ಆಫ್​ ಆಗಿದೆ. ಎಷ್ಟು ಹುಡುಕಿದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ಸ್ನೇಹಿತರ ಜೊತೆ ಹೋಗಿರಬಹುದು ಎಂದು ಕುಟುಂಬಸ್ಥರು ಊಹಿಸಿದ್ದರು. ಆದರೆ, ಸ್ನೇಹಿತ ರಾಕೇಶ್ ಆತನನ್ನು ಮಿಲ್​ ಬಳಿ ಕರೆದುಕೊಂಡು ಕೊಲೆ ಮಾಡಿದ್ದಾನೆ. ನಂತರ ಠಾಣೆಗೆ ಬಂದು ಕೃತ್ಯ ಒಪ್ಪಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

ರಾಕೇಶ್ ಹಾಗೂ ಪ್ರಶಾಂತ್ ಇಬ್ಬರೂ ಸ್ನೇಹಿತರು. ಯಾವಾಗಲೂ ಜೊತೆಯಲ್ಲೇ ಇದ್ದವರು. ಕೆಲ ತಿಂಗಳುಗಳಿಂದ ಇಬ್ಬರ ನಡುವೆ ವೈಯಕ್ತಿಕ ವಿಚಾರದ ಬಗ್ಗೆ ಗಲಾಟೆ ನಡೆದು ಇದೀಗ ಕೊಲೆಯಲ್ಲಿ ಅಂತ್ಯವಾಗಿದೆ. ವೈಯಕ್ತಿಕ ವಿಚಾರದ ಬಗ್ಗೆ ಈ ಹಿಂದೆ ಇಬ್ಬರ ನಡುವೆ ರಾಜಿ ಪಂಚಾಯಿತಿ ಕೂಡ ನಡೆದಿತ್ತು. ಇದರಿಂದ ಪ್ರಶಾಂತ್​ ಮನನೊಂದು ಅತ್ಮಹತ್ಯೆಗೂ ಯತ್ನಿಸಿದ್ದ ಎಂದು ಪೊಲೀಸ್​ ಮೂಲಗಳು ತಿಳಿಸಿವೆ. ರಾಕೇಶ್ ಒಬ್ಬನೇ ಅಲ್ಲ, ಆತನ ಜೊತೆಗಿದ್ದವರನ್ನೂ ಕೂಡ ಬಂಧಿಸಿ ಎಂದು ಪ್ರಶಾಂತ್ ಸಹೋದರ ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ:ಬಸವಕಲ್ಯಾಣದಲ್ಲಿ ಹರಿದ ನೆತ್ತರು.. ಕ್ಷುಲ್ಲಕ ಕಾರಣಕ್ಕೆ ಜಗಳ, ಯುವಕನ ಕೊಲೆ

Last Updated : Feb 28, 2023, 9:21 PM IST

ABOUT THE AUTHOR

...view details