ದಾವಣಗೆರೆ:ಬಿಜೆಪಿ ಒಂದು ಕುಟುಂಬ. ಅರುಣ್ ಸಿಂಗ್ ನಮ್ಮ ಅಭಿಪ್ರಾಯ ಹೇಳುವಂತಹ ಅವಕಾಶ ನೀಡಿದರು. ಇದೊಂದು ವಿಶೇಷ ಪದ್ಧತಿ, ಯಾವ ಪಕ್ಷದಲ್ಲಿ ಕೂಡ ಇಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ದಾವಣಗೆರೆಯಲ್ಲಿ ಮಾತನಾಡಿದ ಅವರು, ಸಭೆಯಲ್ಲಿ ಕೇವಲ ನಾಯಕತ್ವದ ಬದಲಾವಣೆ ಬಗ್ಗೆ ಚರ್ಚೆ ಮಾತ್ರವಲ್ಲ, ಕೊರೊನಾ ಸಂಕಷ್ಟದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ಆಗಿದೆ ಎಂದರು.
ಸದ್ಯಕ್ಕೆ ಕೊರೊನಾ ಬಗ್ಗೆ ಮಾತ್ರ ಚರ್ಚೆ ಆಗಬೇಕು. ಈಗ ನಾಯಕತ್ವ ಬದಲಾವಣೆ ಮುಗಿದ ವಿಚಾರ. ಆ ವಿಚಾರ ಕೈ ಬಿಡಬೇಕು. ಮೇಲಾಗಿ ಜಲಸಂಪನ್ಮೂಲ ಇಲಾಖೆ ಟೆಂಡರ್ ಬಗ್ಗೆ ಸಿಎಂ ಹಾಗೂ ಆ ಇಲಾಖೆ ಕಾರ್ಯದರ್ಶಿ ಉತ್ತರ ನೀಡಿದ್ದಾರೆ. ಇದರ ಬಗ್ಗೆ ಚರ್ಚೆಯೇ ಬೇಡ ಎಂದು ಹೇಳಿದರು.
ಜಿ.ಪಂ ಹಾಗೂ ತಾ.ಪಂ ಚುನಾವಣೆ ವಿಚಾರದ ಬಗ್ಗೆ ಮಾತನಾಡಿದ ಅವರು, ಡಿಸೆಂಬರ್ ತನಕ ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆ ನಡೆಯಲ್ಲ. ಈಗ ಕೊರೊನಾ ಮೂರನೇ ಅಲೆ ಭೀತಿ ಇದೆ ಎಂದರು.
ಚುನಾವಣೆ ಬೇಡ ಎಂದು ಸರ್ಕಾರ ನಿರ್ಧಾರ ತೆಗೆದುಕೊಂಡಿದೆ. ಗ್ರಾಮ ಪಂಚಾಯತ್ ಮಟ್ಟದಲ್ಲಿ ಉತ್ತಮ ಕೆಲಸವಾಗುತ್ತಿದ್ದು, ಈ ಕೆಲಸಗಳಿಂದ ಗ್ರಾಮಾಂತರ ಪ್ರದೇಶಗಳಲ್ಲಿ ಕೊರೊನಾ ಕಟ್ಟಿಹಾಕಲು ಸಾಧ್ಯವಾಯಿತು. ಲಾಕ್ಡೌನ್ ವಿಸ್ತರಣೆ ಬಗ್ಗೆ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳುತ್ತೇವೆ. ಇಂದು ಸಿಎಂ ನೇತೃತ್ವದಲ್ಲಿ ಸಭೆ ನಡೆಯಲಿದೆ ಎಂದರು.