ಕರ್ನಾಟಕ

karnataka

ETV Bharat / state

ದರೋಡೆಗೆ ಹೊಂಚು ಹಾಕಿದ್ದವರ ಹೆಡೆಮುರಿ ಕಟ್ಟಿದ ಜಗಳೂರು ಪೊಲೀಸರು.. ನಿಧಿಗಾಗಿ ಶೋಧ ಮಾಡ್ತಿದ್ದ 6 ಜನರ ಬಂಧನ

ಪುರಾತನ ದೇವಾಲಯಗಳಲ್ಲಿ ನಿಧಿಗಾಗಿ ಶೋಧ ಮಾಡುತ್ತಿದ್ದ 06 ಜನರನ್ನು ಜಗಳೂರು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

By

Published : Jul 23, 2023, 8:54 PM IST

ದರೋಡೆಗೆ ಹೊಂಚು ಹಾಕಿದ್ದವರ ಹೆಡೆಮುರಿ ಕಟ್ಟಿದ ಜಗಳೂರು ಪೊಲೀಸರು
ದರೋಡೆಗೆ ಹೊಂಚು ಹಾಕಿದ್ದವರ ಹೆಡೆಮುರಿ ಕಟ್ಟಿದ ಜಗಳೂರು ಪೊಲೀಸರು

ದಾವಣಗೆರೆ :ದರೋಡೆಗೆ ಹೊಂಚು ಹಾಕಿದ್ದವರನ್ನು ಜಗಳೂರು ಪೊಲೀಸರು ಹೆಡೆಮುರಿ ಕಟ್ಟಿದ್ದು, ಬಂಧಿತ 6 ಜನರು ಕೂಡ ಪುರಾತನ ದೇವಾಲಯಗಳಲ್ಲಿ ನಿಧಿಗಾಗಿ ಶೋಧ ಮಾಡ್ತಿದ್ದವರೆಂದು ಜಿಲ್ಲಾ ಪೊಲೀಸ್​ ಇಲಾಖೆಯಿಂದ ಪ್ರಕಟಣೆ ಹೊರಡಿಸಲಾಗಿದೆ.

ಇನ್ನು ಬಂಧಿತರನ್ನು ಕಲ್ಲೇಶಿ. ಪಿ (48), ದಿವಾನ್‌ ಸಾಬ್‌ ಜಾವೀದ್, ಮಲ್ಲಿಕಾರ್ಜುನ ಮಲ್ಲೇಶಿ (30), ಹನುಮಂತ ಸೋಪಾನಿಪವಾರ್(33) ಅಮೀರ್ ಖಾನ್‌ ಪಠಾಣ್ (30), ಮುರ್ತಾಜಾಸಾಬ್ ಗೋಲಂದಾಜ್ (38), ಇಳಕಲ್ ಎಂದು ಪೊಲೀಸರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ. ಇನ್ನು ಬಂಧಿತರಲ್ಲಿ ಓರ್ವ ದಾವಣಗೆರೆ ನಿವಾಸಿಯಾಗಿದ್ದು, ಮತ್ತೋರ್ವ ಜಗಳೂರು. ಹಾಗೆಯೇ ಉಳಿದ ನಾಲ್ಕು ಜನ ಮೂಲತಃ ಹುಬ್ಬಳ್ಳಿಯವರೆಂದು ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ. ‌

ಆರೋಪಿಗಳನ್ನು ಬಂಧಿಸಿದ್ದೇ ರೋಚಕ : ಜುಲೈ 22ರ (ಶನಿವಾರ) ರಾತ್ರಿ ಜಗಳೂರು ಪೊಲೀಸ್‌ ಠಾಣೆಯ ವ್ಯಾಪ್ತಿಯ ಪೊಲೀಸ್​​ ಸಿಬ್ಬಂದಿ ಗಸ್ತು ತಿರುಗುವ ವೇಳೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಲಿಂಗಣ್ಣಹಳ್ಳಿ ರಸ್ತೆಯಲ್ಲಿ ತಡರಾತ್ರಿ ಆರೋಪಿಗಳನ್ನು ಬಂಧಿಸಲಾಗಿದೆ. ಈ ಲಿಂಗಣ್ಣಹಳ್ಳಿ ರಸ್ತೆಯ ಬದಿಯಲ್ಲಿ ಅನುಮಾನಾಸ್ಪದವಾಗಿ ನಿಂತಿದ್ದ ಕಾರಿನ ಬಳಿ ಇಬ್ಬರು ವ್ಯಕ್ತಿಗಳಿದ್ದನ್ನು ಗಮನಿಸಿದ ಪೊಲೀಸರು ಅನುಮಾನಗೊಂಡು ಆ ಕಾರಿನ ಬಳಿ ತೆರಳಿದ್ದಾರೆ.

ಕಾರಿನ ಬಳಿ ನಿಂತಿದ್ದ ಇಬ್ಬರು ಪೊಲೀಸ್ ಜೀಪ್ ನೋಡಿ ಓಡಿಹೋದ್ರೆ, ಇನ್ನು ಅದೇ ಕಾರಿನಲ್ಲಿ ಮೂರ್ನಾಲ್ಕು ಜನ್ರಿದ್ದನ್ನು ಗಮನಿಸಿ ಪೊಲೀಸರು ಖದೀಮರನ್ನು ಹಿಡಿದಿಟ್ಟುಕೊಂಡಿದ್ರು. ತಪ್ಪಿಸಿಕೊಳ್ಳಲು ಯತ್ನಿಸಿದವರನ್ನು ಬೆನ್ನುಹತ್ತಿ ಹಿಡಿದ ಜಗಳೂರು ಪೊಲೀಸರು, ವಿಚಾರಣೆ ನಡೆಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಬಂಧಿತರನ್ನು ವಿಚಾರಣೆ ನಡೆಸಿದಾಗ ದರೋಡೆ ಮಾಡಲು ಹೊಂಚು ಹಾಕಿರುವಂತೆ ಮೇಲ್ನೋಟಕ್ಕೆ ಕಂಡುಬಂದಿದೆ. ಇಲ್ಲಿಗೆ ಸುಮ್ಮನಾಗದ ಪೊಲೀಸರು ಠಾಣೆಗೆ ಕರೆತಂದು ಪಿಎಸ್‌ಐ ಸಾಗರ್ ಅವರು ಕೊಟ್ಟ ದೂರಿನ ಹಿನ್ನೆಲೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಬಂಧಿತರು ನಿಧಿಗಾಗಿ ಶೋಧ ಮಾಡಿದವರು : ಹೆಚ್ಚುವರಿ ಪೊಲೀಸ್-ಅಧೀಕ್ಷಕರಾದ ಶ್ರೀ ಆರ್ ಬಿ ಬಸರಗಿ ಅವರ ನೇತೃತ್ವದಲ್ಲಿ ತನಿಖೆ ಕೈಗೊಂಡಿದ್ದ ಬೆನ್ನಲ್ಲೇ ಆರೋಪಿತರು ದರೋಡೆ ಹಾಗೂ ಪುರಾತನ ದೇವಸ್ಥಾನಗಳನ್ನು ಪತ್ತೆಮಾಡಿ ನಿಧಿಗಾಗಿ ಶೋಧ, ದರೋಡೆ ಮಾಡಲು ಬಂದಿರುವುದು ತಿಳಿದು ಬಂದಿದೆ.

ಜುಲೈ 21 ರಿಂದ ಜುಲೈ 22ರ ಮಧ್ಯರಾತ್ರಿ ಅವಧಿಯಲ್ಲಿ ಜಗಳೂರು ತಾಲೂಕಿನ ಬಿದರಕೆರೆ- ಸಂತೆ ಮುದ್ದಾಪುರ ಗ್ರಾಮಗಳ ಮದ್ಯದಲ್ಲಿ ಬರುವ ಬೇಡಿ ಆಂಜನೇಯಸ್ವಾಮಿ ಗುಡಿಯ ಮುಂಭಾಗದಲ್ಲಿರುವ ಬಸವಣ್ಣ ದೇವಸ್ಥಾನದಲ್ಲಿ ಬಸವಣ್ಣ ಮೂರ್ತಿಯನ್ನು ಹಾನಿ ಮಾಡಿದ್ದಾರೆ. ಇದು ನಿಧಿಗಾಗಿ ಶೋಧ ಮಾಡಿರುವುದು ತಿಳಿದು ಬಂದಿದೆ. ಈ ಸಂಬಂಧ ಜಗಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ಬಂಧಿತರಿಂದ ಬಿಳಿ ಬಣ್ಣದ ಸ್ವಿಫ್ಟ್​ ಡಿಸೈರ್ ಕಾರ್, ಒಂದು ಕಬ್ಬಿಣದ ಸುತ್ತಿಗೆ, ಒಂದು ಜೊತೆ ಹ್ಯಾಂಡ್‌ ಗ್ಲೋಸ್​, ಒಂದು ಕಟ್ಟಿಂಗ್ ಪ್ಲೇಯರ್, ಎರಡು ಕಬ್ಬಿಣದ ಪ್ಲಾಟ್‌ ಸೆಲ್‌ಗಳು, ಒಂದು ಸುರ್‌ಸು‌ರ್ ಬತ್ತಿ/ಕ್ರಾಕರ್, ಮಾಸಲು ಬಣ್ಣದ ಪ್ಲಾಸ್ಟಿಕ್ ಹಗ್ಗ, ಒಂದು ಗುಟಕಾ ಕಂಪನಿಯ ಖಾಲಿಬ್ಯಾಗ್, 02 ಪಾಕೆಟ್ ಖಾರದ ಪುಡಿ, 03 ಮೊಬೈಲ್‌ಗಳು, 2000/- ರೂ ನಗದು, ಟಾರ್ಚ್, ಚಾಕುವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿ ಭರತೇಶ್ ಎಂಬುವವನು ಭಾಗಿಯಾಗಿದ್ದು, ಆತನ ಬಂಧನಕ್ಕಾಗಿ ಪತ್ತೆ ಕಾರ್ಯ ಮುಂದುವರೆದಿದೆ.

ಇದನ್ನೂ ಓದಿ :ಬೆಂಗಳೂರಲ್ಲಿ ಪೊಲೀಸರ ಸೋಗಿನಲ್ಲಿ ಮನೆಗೆ ನುಗ್ಗಿ ದರೋಡೆ: ಮೈಮೇಲಿದ್ದ ಚಿನ್ನ, ಫೋನ್ ಪೇಯಿಂದ ಹಣ ಎಗರಿಸಿ ಎಸ್ಕೇಪ್

ABOUT THE AUTHOR

...view details