ಕರ್ನಾಟಕ

karnataka

ETV Bharat / state

ಶಾಸಕ ಎಂಪಿ ರೇಣುಕಾಚಾರ್ಯ ತಾಕತ್ ಇರುವ ಹೊನ್ನಾಳಿ ಹುಲಿ: ಸಿಎಂ ಬೊಮ್ಮಾಯಿ - ETV Bharat kannada News

ಹೊನ್ನಾಳಿ ಪಟ್ಟಣದಲ್ಲಿ 1933 ಕೋಟಿ ಅಭಿವೃದ್ಧಿ ಕಾಮಗಾರಿಗಳಿಗೆ ಸಿಎಂ ಬಸವರಾಜ್​ ಬೊಮ್ಮಾಯಿ ಇಂದು ಚಾಲನೆ ನೀಡಿದರು.

Chief Minister Basavaraj Bommai
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ

By

Published : Mar 17, 2023, 9:05 PM IST

ಹೊನ್ನಾಳಿ ನ್ಯಾಮತಿ ತಾಲೂಕಿನ ಚಿತ್ರಣವನ್ನು ಬದಲಿಸಿದ್ದು ಶಾಸಕ ಎಂಪಿ ರೇಣುಕಾಚಾರ್ಯ :ಸಿಎಂ ಬೊಮ್ಮಾಯಿ

ದಾವಣಗೆರೆ:ಶಾಸಕ ಎಂಪಿ ರೇಣುಕಾಚಾರ್ಯ ಅವರ ಶ್ರಮದ ಪ್ರಯತ್ನದಿಂದ 1933 ಕೋಟಿ ಕಾಮಗಾರಿಗೆ ಚಾಲನೆ ನೀಡಿದ್ದೇನೆ. ಹೊನ್ನಾಳಿ ತಾಲೂಕಿನಲ್ಲಿ ಸುವರ್ಣ ಅಕ್ಷರದಲ್ಲಿ ಬರೆದಿಡುವ ದಿನವಾಗಿದ್ದು, ಇದೊಂದು ದಾಖಲೆ, ಇಂತಹ ದಾಖಲೆ ಮಾಡುವುದಕ್ಕೆ ತಾಕತ್​ ಇರುವುದು ಹೊನ್ನಾಳಿ ಹುಲಿಗೆ ಮಾತ್ರ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಎಂಪಿ ರೇಣುಕಾಚಾರ್ಯ ಅವರನ್ನು ಹಾಡಿಹೊಗಳಿದರು.

ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದಲ್ಲಿ ಇಂದು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಬಳಿಕ ಮಾತನಾಡಿದ ಸಿಎಂ ಬೊಮ್ಮಾಯಿ, ಹೊನ್ನಾಳಿ ನ್ಯಾಮತಿ ತಾಲೂಕಿನ ಚಿತ್ರಣವನ್ನು ಬದಲಿಸಿದ್ದು ನಮ್ಮ ಹೊನ್ನಾಳಿ ಹುಲಿ, ಇಂಥಾ ಅಭಿವೃದ್ಧಿ ಕೇಂದ್ರದಲ್ಲಿ ಮೋದಿ ಹಾಗೂ ರಾಜ್ಯ ಸರ್ಕಾರ ಡಬಲ್ ಇಂಜಿನ್ ಸರ್ಕಾರದಿಂದ ಮಾತ್ರ ಸಾಧ್ಯ. ಪ್ರವಾಹ ಬಂದು ಮನೆ ಹಾನಿಯಾಗಿ ಬಿದ್ದಿದ್ದ ಮನೆಗಳಿಗೆ ಕೇಂದ್ರದಿಂದ 1 ಲಕ್ಷ ಮತ್ತು ರಾಜ್ಯದಿಂದ 4 ಲಕ್ಷ ಒಟ್ಟು 5 ಲಕ್ಷ ರೂ ನೀಡಿದೆವು. ಅನೇಕ ಅಭಿವೃದ್ಧಿ ಯೋಜನೆ ನೀಡಲು ಡಬಲ್ ಇಂಜಿನ್ ಸರ್ಕಾರದಿಂದ ಮಾತ್ರ ಸಾಧ್ಯವಾಯಿತು ಎಂದು ಹೇಳಿದರು.

ರೈತರಿಗೆ ಲೈಫ್ ಇನ್ಸುರೆನ್ಸ್ ಕೊಟ್ಟು, ರೈತರ ಸಹಜ ಸಾವು ಅದರೂ ಎರಡು ಲಕ್ಷ ಕೊಡುವ ಸಹಾಯ ಮಾಡಿದ್ದೇವೆ. ನಮ್ಮ ಸರ್ಕಾರದ ಅವಧಿಯಲ್ಲಿ ರೈತರ ಬೆಳೆ ಹಾನಿಯಾಯಿತು. ಆ ವೇಳೆ ಕೂಡ ಡಬಲ್ ಇಂಜಿನ್ ಸರ್ಕಾರ ರೈತರ ಕೈ ಹಿಡಿತು. ನಾಲ್ಕು ಲಕ್ಷ ರೈತರಿಗೆ 300 ಕೋಟಿ ವೆಚ್ಚದಲ್ಲಿ ಬೆಳೆ ಪರಿಹಾರ ಕೊಟ್ಟಿದ್ದೇವೆ. ನಿಜವಾದ ಸಾಮಾಜಿಕ ನ್ಯಾಯ ಕೊಟ್ಟಿದ್ದು ಯಡಿಯೂರಪ್ಪ ಅವರು, ಭಾಗ್ಯಲಕ್ಷ್ಮಿ ಯೋಜನೆ, ಕನಕ ದಾಸರ ಜನ್ಮಸ್ಥಳ ಅಭಿವೃದ್ಧಿ, ಸೇವಲಾಲ್ ಜಯಂತಿ, ತಾಂಡಾಗಳ ಅಭಿವೃದ್ಧಿ ಮಾಡಿಸಿದರು ಎಂದು ಸಿಎಂ ಬೊಮ್ಮಾಯಿ ಮಾಜಿ ಸಿಎಂ ಅವರ ಗುಣಗಾನ ಮಾಡಿದರು.

ಜೇನಿನಗೂಡಿಗೆ ಕೈ ಹಾಕಬೇಡಿ ಬೊಮ್ಮಾಯಿ:ಮೀಸಲಾತಿ ಹೆಚ್ಚಳ ಮಾಡುವ ವಿಚಾರವಾಗಿ ಸಾಕಷ್ಟು ಜನ ಜೇನಿನಗೂಡಿಗೆ ಕೈ ಹಾಕಬೇಡಿ ಬೊಮ್ಮಾಯಿ ಎಂದಿದ್ದರು. ಇದಕ್ಕೆ ನಾನು ಉತ್ತರ ಕೊಟ್ಟಿದ್ದೆ, ಅ ಜೀನಿನ ಗೂಡಿಗೆ ಕೈ ಹಾಕುತ್ತೇನೆ ಜೇನು ಹುಳಗಳು ನನ್ನ ಕೈಗೆ ಕಚ್ಚಿದರೂ ಪರವಾಗಿಲ್ಲ. ಆದರೆ, ಯಾರಿಗೆ ಧ್ವನಿ ಇಲ್ಲವೋ, ನೆಲ ಇಲ್ಲವೋ ಆ ಜನಾಂಗಕ್ಕೆ ಜೇನುತುಪ್ಪ ಕೊಡುತ್ತೇನೆ ಎಂದವನು ನಾನು. ಹೇಳಿದಂತೆ ಮೀಸಲಾತಿ ಹೆಚ್ಚಳ ಮಾಡಿದ್ದೇನೆ. ಸಿಹಿಯಾದ ಜೇನನ್ನು ಶೋಷಿತ ಜನರಿಗೆ ನೀಡಿದ್ದೇನೆ ಎಂದರು. ನರೇಂದ್ರ ಮೋದಿಯವರು ಕೆಂಪುಕೋಟೆಯಲ್ಲಿ ನಿಂತು ಪ್ರತಿಯೊಬ್ಬರಿಗೂ ಕುಡಿಯುವ ನೀರನ್ನು ಮನೆ ಮನೆಗೆ ಕೊಡುತ್ತೇನೆ ಎಂದು, ಹೇಳಿದಂತೆ ಮನೆಮನೆಗೆ ಕುಡಿಯುವ ‌ನೀರನ್ನು ನೀಡಿದ್ದಾರೆ ಎಂದು ಇದೇ ವೇಳೆ ಸಿಎಂ ನೆನಪು ಮಾಡಿಕೊಟ್ಟರು.

ಎಂಪಿ ರೇಣುಕಾಚಾರ್ಯ ಶಾಸಕರಾಗುವುದು ಸತ್ಯ : ಇದೇ ವೇಳೆ ಮಾತನಾಡಿದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಶಾಸಕ ಎಂಪಿ ರೇಣುಕಾಚಾರ್ಯನಿಗೆ ಟಿಕೆಟ್ ಖಚಿತ ಎಂಬಂತ ಮಾತುಗಳನ್ನಾಡಿದರು. ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯನೋ, ಅಷ್ಟೇ ಸತ್ಯ ಎಂಪಿ ರೇಣುಕಾಚಾರ್ಯ ಕೂಡ ಶಾಸಕರಾಗುವುದೂ ಸತ್ಯ ಎಂದರು. ಎಂಪಿ ರೇಣುಕಾಚಾರ್ಯ ಹೊನ್ನಾಳಿ ತಾಲೂಕಿಗೆ ಸಾಕಷ್ಟು ಹಣ ತಂದು ಅಭಿವೃದ್ಧಿ ಮಾಡಿದ್ದಾರೆ. ಅವರನ್ನು 25 ಸಾವಿರಕ್ಕಿಂತ ಹೆಚ್ಚು ಮತಗಳ ಅಂತರದಿಂದ ಆರಿಸಿ ಕಳಿಸಿ ಎಂದು ಮತದಾರರಿಗೆ ಮನವಿ ಮಾಡಿದರು.

ಇದನ್ನೂ ಓದಿ :ಸಿದ್ದರಾಮಯ್ಯ ಹುಟ್ಟುಹಬ್ಬ ಆಚರಿಸಿಕೊಂಡಂತೆ ನಾವು ಸಮಾವೇಶ ಮಾಡುವುದಿಲ್ಲ: ಕಟೀಲ್ ವ್ಯಂಗ್ಯ

ABOUT THE AUTHOR

...view details