ಕರ್ನಾಟಕ

karnataka

ಅಧಿವೇಶನದಲ್ಲಿ ರಾಜ್ಯ ಸರ್ಕಾರದ ಸೊಕ್ಕು ಮುರಿಯುವ ಕೆಲಸ ಮಾಡುತ್ತೇವೆ: ಬಿ.ವೈ.ವಿಜಯೇಂದ್ರ

By ETV Bharat Karnataka Team

Published : Nov 30, 2023, 2:17 PM IST

BJP President Vijayendra slams congress govt: ಕಾಂತರಾಜ್ ವರದಿ ವಿಚಾರದಲ್ಲಿ ಸರ್ಕಾರ ಹೇಗೆ ನಡೆದುಕೊಳ್ಳುತ್ತಿದೆ ಎಂದು ಎಲ್ಲರಿಗೂ ಕಾಣುತ್ತಿದೆ. ಈ ಎಲ್ಲಾ ವಿಚಾರಗಳನ್ನು ಮುಂದಿಟ್ಟುಕೊಂಡು ಅಧಿವೇಶನದಲ್ಲಿ ಸರ್ಕಾರವನ್ನು ಕಟ್ಟಿ ಹಾಕುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

Vijayendra
ವಿಜಯೇಂದ್ರ

ಸವಳಂಗ ಗ್ರಾಮದಲ್ಲಿ ಮಾತನಾಡಿದ ಬಿ.ವೈ ವಿಜಯೇಂದ್ರ

ದಾವಣಗೆರೆ:ರಾಜ್ಯ ಕಾಂಗ್ರೆಸ್​ ಸರ್ಕಾರ ರೈತರು ಮತ್ತು ಬಡವರ ವಿರೋಧಿಯಾಗಿದೆ. ಈ ಎಲ್ಲಾ ವಿಚಾರಗಳನ್ನು ಅಧಿವೇಶನದಲ್ಲಿ ಮುಂದಿಟ್ಟು ಸರ್ಕಾರದ ಸೊಕ್ಕು ಮುರಿಯುವ ಕೆಲಸ ಮಾಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.

ಜಿಲ್ಲೆಯ ನ್ಯಾಮತಿ ತಾಲೂಕಿನ ಸವಳಂಗ ಗ್ರಾಮಕ್ಕೆ ಇಂದು ಆಗಮಿಸಿದ ವಿಜಯೇಂದ್ರ ಅವರಿಗೆ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ನೇತೃತ್ವದಲ್ಲಿ ಭರ್ಜರಿ ಸ್ವಾಗತ ಕೋರಲಾಯಿತು.‌ ಬೃಹತ್ ಆಕಾರದ ಹೂವಿನ ಹಾರ ಹಾಕಿ, ಘೋಷಣೆಗಳನ್ನು ಕೂಗಲಾಯಿತು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ವಿಜಯೇಂದ್ರ, ರಾಜ್ಯದಲ್ಲಿ ಭೀಕರ ಬರಗಾಲವಿದೆ. ಕಬ್ಬಿನ ಬೆಳೆಗಾರರ ಕೂಗಿಗೆ ಈ ಸರ್ಕಾರ ಕಿವಿ ಕೊಡ್ತಿಲ್ಲ, ಅದೇ ರೀತಿ ಉತ್ತರ ಕರ್ನಾಟಕದ‌ ಅಭಿವೃದ್ಧಿಯನ್ನು ಮರೆತಿದೆ. ಶಾಸಕರಿಗೆ ಬಿಡುಗಡೆ ಆಗಬೇಕಾಗಿದ್ದ ಅನುದಾನ ಕೂಡ ಬಿಡುಗಡೆಯಾಗಿಲ್ಲ, ಇಲ್ಲಿಯತನಕ ಒಂದು ರೂಪಾಯಿ ಅನುದಾನವನ್ನು ಬಿಡುಗಡೆ ಮಾಡಿಲ್ಲ. ಮೇಲ್ನೋಟಕ್ಕೆ ಇದು ರೈತ ವಿರೋಧಿ, ಬಡವರ ವಿರೋಧಿ ಸರ್ಕಾರ ಎಂದು ಗೊತ್ತಾಗುತ್ತಿದೆ ಎಂದರು.

ಕಾಲಿಗೆ ಚಕ್ರ ಕಟ್ಟಿಕೊಂಡು ತಂದೆಯಂತೆ ಪ್ರವಾಸ ಮಾಡುವೆ: ರಾಜ್ಯಾಧ್ಯಕ್ಷನಾಗಿ ಹಲವು ಜಿಲ್ಲೆಗಳಲ್ಲಿ ಪ್ರವಾಸ ಮಾಡುತ್ತಿದ್ದೇನೆ. ಒಂದು ದಿನ ಕೂಡ ಮನೆಯಲ್ಲಿ ಕುಳಿತುಕೊಳ್ಳದೇ ರಾಜ್ಯದ ಪ್ರವಾಸ ಮಾಡು ಎಂದು ನಮ್ಮ ತಂದೆ ಕಿವಿಮಾತು ಹೇಳಿದ್ದಾರೆ. ಮೋದಿಯವರು ಮತ್ತೊಮ್ಮೆ ಪಿಎಂ ಆಗಬೇಕಿದೆ, ಅವರ ಕೈಯನ್ನು ಬಲಪಡಿಸಬೇಕೆಂದು ಪ್ರಜ್ಞಾವಂತರು ಯೋಚಿಸುತ್ತಿದ್ದಾರೆ‌. ಮುಂದಿನ ದಿನಗಳಲ್ಲಿ ದಾವಣಗೆರೆ ಪ್ರವಾಸ ಮಾಡಲಿದ್ದೇನೆ ಎಂದು ತಿಳಿಸಿದರು.

ನಮ್ಮ ಮುಂದಿನ ಗುರಿ 28 ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದು. ಬಿಎಸ್​ವೈ ರೀತಿ ಕಾಲಿಗೆ ಚಕ್ರ ಕಟ್ಟಿಕೊಂಡು ರಾಜ್ಯ ಪ್ರವಾಸ ಮಾಡಿ ಎಲ್ಲಾ ಸಮುದಾಯಗಳನ್ನು ಒಟ್ಟಿಗೆ ಕರೆದುಕೊಂಡು ಹೋಗುತ್ತೇನೆ, ನೀವೆಲ್ಲಾ ನನಗೆ ಬೆಂಬಲ ಕೊಡಬೇಕಿದೆ ಎಂದು ಮನವಿ ಮಾಡಿದರು.

ಸವಳಂಗ ಗ್ರಾಮದಲ್ಲಿ ಮಾತನಾಡಿದ ರೇಣುಕಾಚಾರ್ಯ

ರೇಣುಕಾಚಾರ್ಯ ವಾಗ್ದಾಳಿ:ಇದೇ ವೇಳೆ ಮಾತನಾಡಿದ ಎಂ.ಪಿ.ರೇಣುಕಾಚಾರ್ಯ, ಪುಲ್ವಾಮಾ ಘಟನೆ ಮತ್ತು ನರೇಂದ್ರ ಮೋದಿ ಆಡಳಿತವನ್ನು ಬ್ರಿಟಿಷರಿಗೆ ಹೋಲಿಕೆ ಮಾಡುವ ಶಾಸಕ ಬಾಲಕೃಷ್ಣಗೆ ನಾಚಿಕೆ ಆಗಬೇಕು, ಕೂಡಲೇ ಅವರು ರಾಜ್ಯದ ಜನರ ಬಳಿ ಕ್ಷಮೆ ಕೇಳಬೇಕು ಎಂದು ವಾಗ್ದಾಳಿ ನಡೆಸಿದರು.

ಕೆಲವರು ಕಾಂಗ್ರೆಸ್​ನಲ್ಲಿ ಸಿಎಂ ಕುರ್ಚಿ ಖಾಲಿ ಇಲ್ಲ ಅಂತಾರೆ, ಇನ್ನೂ ಕೆಲ ಶಾಸಕರು ಇಂತವರೇ ಸಿಎಂ ಆಗಬೇಕೆಂದು ಹೇಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಗೊಂದಲದ ಗೂಡಾಗಿದೆ, ಈ ಸರ್ಕಾರ ಸ್ವಯಂ ಅಪರಾಧದಿಂದ ಪತನವಾಗುತ್ತದೆ, ಆಡಳಿತ ವೈಫಲ್ಯದಿಂದ ಕಾಂಗ್ರೆಸ್ ಶಾಸಕರೇ ರಾಜೀನಾಮೆ ನೀಡುತ್ತಾರೆ, ಬಿಜೆಪಿ ಆಪರೇಷನ್ ಮಾಡಲ್ಲ, ಕಾಂಗ್ರೆಸ್ ಶಾಸಕರೇ ಬೇಸತ್ತು ರಾಜೀನಾಮೆ ನೀಡುತ್ತಾರೆ ಎಂದರು.

ಇದನ್ನೂ ಓದಿ:ಕಾಂಗ್ರೆಸ್​ನಿಂದ ಬಂದ ಅವರು ಬಿಜೆಪಿಯಿಂದ ಎರಡು ಬಾರಿ ಮಂತ್ರಿ ಆಗಿದ್ದರು: ಸೋಮಣ್ಣಗೆ ರೇಣುಕಾಚಾರ್ಯ ಟಾಂಗ್​

ಶಕ್ತಿ ಯೋಜನೆಗೆ ಸರಿಯಾದ ಬಸ್ ಇಲ್ಲ ಎಂದು ಮಹಿಳೆಯರು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ, ಅನ್ನಭಾಗ್ಯ ಯೋಜನೆಯಲ್ಲಿ ಕೊಡುವ ಐದು ಕೆಜಿ ಅಕ್ಕಿ ಕೇಂದ್ರ ಸರ್ಕಾರದ್ದು, ಇವರಿಂದ ಕೇವಲ 170 ರೂ. ಮಾತ್ರ ಜನರಿಗೆ ಸಿಗುತ್ತಿದೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ನಾವೆಲ್ಲಾ ಒಗ್ಗಟ್ಟಾಗಿದ್ದೇವೆ, ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡುತ್ತೇವೆ, ಯುವ ನಾಯಕ ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿರುವುದು ಕಾಂಗ್ರೆಸ್​ಗೆ ನಡುಕ ಹುಟ್ಟಿದೆ. ವಿಜಯೇಂದ್ರ ಹಾಗೂ ಆರ್.ಅಶೋಕ್ ನೇತೃತ್ವದಲ್ಲಿ ಬಿಜೆಪಿ ಸಂಘಟನೆ ಮಾಡಿ, 28 ಕ್ಷೇತ್ರದಲ್ಲೂ ಗೆಲ್ಲುತ್ತೇವೆ ಎಂದು ಭವಿಷ್ಯ ನುಡಿದರು.

ABOUT THE AUTHOR

...view details