ಕರ್ನಾಟಕ

karnataka

ದಾವಣಗೆರೆಯಲ್ಲಿ ಮೂರು ದಿನಗಳ ದೋಸೆ ಹಬ್ಬ.. ಬೆಣ್ಣೆ ದೋಸೆಯ ಇತಿಹಾಸ ಬಲ್ಲಿರಾ?

By ETV Bharat Karnataka Team

Published : Dec 21, 2023, 9:56 PM IST

Updated : Dec 21, 2023, 10:14 PM IST

ಜಿಲ್ಲಾಡಳಿತದ ವತಿಯಿಂದ ದಾವಣಗೆರೆಯಲ್ಲಿ ಮೂರು ದಿನಗಳ ಕಾಲ ದೋಸೆ ಹಬ್ಬ ಹಮ್ಮಿಕೊಳ್ಳಲಾಗಿದೆ.

benne-dose-fest-at-davanagere
ಜಿಲ್ಲಾಡಳಿತದಿಂದ ಬೆಣ್ಣೆ ದೋಸೆ ಸಾಂಪ್ರದಾಯಿಕತೆ ಉಳಿಸಲು ದೋಸೋತ್ಸವ : ಬೆಣ್ಣೆ ದೋಸೆ ಇತಿಹಾಸ

ದಾವಣಗೆರೆ: ಬೆಣ್ಣೆದೋಸೆಗೆ ಹೆಸರಾಗಿರುವ ದಾವಣಗೆರೆಯಲ್ಲಿ ಜಿಲ್ಲಾಡಳಿತ ದೋಸೋತ್ಸವ ನಡೆಸಲು ತೀರ್ಮಾನಿಸಿದೆ. ದಾವಣಗೆರೆ ದೋಸೆಯನ್ನು ಬ್ರ್ಯಾಂಡಿಂಗ್ ಮಾಡಲು ಕ್ರಮ ಕೈಗೊಳ್ಳಲಾಗಿದ್ದು ಇದೇ ತಿಂಗಳ 23, 24 ಮತ್ತು 25ರಂದು ಬೆಣ್ಣೆದೋಸೆ ಹಬ್ಬವನ್ನು ಏರ್ಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಲಾಗಿತ್ತು.

ನಗರದ ಎಂಬಿಎ ಫೀಲ್ಡ್ ಹಾಗು ಗ್ಲಾಸ್‍ಹೌಸ್ ಮುಂಭಾಗ ದೋಸೆ ಹಬ್ಬ ಆಯೋಜಿಸಲಾಗುತ್ತಿದೆ. ಉತ್ಸವದಲ್ಲಿ ಸಾರ್ವಜನಿಕರು ಮೂರು ದಿನಗಳ ಕಾಲ ತಮಗಿಷ್ಟದ ದೋಸೆ ಸವಿಯಬಹುದು. ಉತ್ಸವವು ಬೆಳಿಗ್ಗೆ 8 ಗಂಟೆಯಿಂದ ಪ್ರಾರಂಭವಾಗಿ ರಾತ್ರಿವರೆಗೂ ನಡೆಯಲಿದೆ.

ಲಕ್ಷಾಂತರ ಜನ ಭಾಗಿಯಾಗುವ ಸಾಧ್ಯತೆ: ಮೂರು ದಿನಗಳ ಕಾಲ ನಡೆಯುವ ದೋಸೋತ್ಸವದಲ್ಲಿ 5 ಲಕ್ಷ ಜನರು ಭಾಗಿಯಾಗುವ ನಿರೀಕ್ಷೆ ಇದೆ. ನಗರದ ಹೋಟೆಲ್ ಮಾಲೀಕರು ಪಾಲ್ಗೊಳ್ಳಲಿದ್ದಾರೆ. ದಾವಣಗೆರೆ ದೋಸೆಯ ಸಾಂಪ್ರದಾಯಿಕತೆ ಉಳಿಸುವುದು ಮತ್ತು ಇಲ್ಲಿನ ಬೆಣ್ಣೆದೋಸೆಗೆ ಬ್ರ್ಯಾಂಡಿಂಗ್ ಕಲ್ಪಿಸುವುದು ಇದರ ಉದ್ದೇಶ. ಉತ್ಸವ ಮುಗಿದ ಬಳಿಕ ದೋಸೆ ಹೋಟೆಲ್‍ಗಳಿಗೆ ಮಾನದಂಡದನ್ವಯ ಮುಂದಿನ ದಿನಗಳಲ್ಲಿ ಅಧಿಕೃತ ಟ್ಯಾಗ್ ನೀಡಲಿದ್ದೇವೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಆಹಾರ ಸುರಕ್ಷತಾ ಕಾಯಿದೆ ನಿಯಮ ಪಾಲನೆ, ಗುಣಮಟ್ಟ, ಕಲಬೆರಕೆರಹಿತ ಆಹಾರದ ಮಾನದಂಡಗಳನ್ನು ಅಳವಡಿಸಿಕೊಳ್ಳುವವರಿಗೆ ಈ ಟ್ಯಾಗ್ ಸಿಗಲಿದೆ.

ಬೆಣ್ಣೆ ದೋಸೆ ಇತಿಹಾಸ:ದಾವಣಗೆರೆ ಬೆಣ್ಣೆ ದೋಸೆಗೆ ತನ್ನದೇ ಆದ ಇತಿಹಾಸವಿದೆ.‌ ಸ್ವಾತಂತ್ರ್ಯ ಪೂರ್ವದಲ್ಲಿ, 1928ರಲ್ಲಿ ಚೆನ್ನಮ್ಮ ಎಂಬ ಮಹಿಳೆ ದಾವಣಗೆರೆಗೆ ತಮ್ಮ ಮಕ್ಕಳೊಂದಿಗೆ ವಲಸೆ ಬಂದರು. ಬಳಿಕ ಚೆನ್ನಮ್ಮ ಅವರು ನಗರದ ವಸಂತ ಚಿತ್ರಮಂದಿರದ ಕೂಗಳತೆ ದೂರದಲ್ಲಿದ್ದ ಸವಲಗಿ ನಾಟಕ ಥಿಯೇಟರ್ ಎದುರಿಗೆ ಪುಟ್ಟ ಹೋಟೆಲ್ ಒಂದನ್ನು ಆರಂಭಿಸಿದರು. ಇಲ್ಲಿ ಚೆನ್ನಮ್ಮ ರುಚಿ ರುಚಿಯಾದ ದೋಸೆಯನ್ನು ಗ್ರಾಹಕರಿಗೆ ನೀಡಲು ಆರಂಭಿಸಿದರು. ಚೆನ್ನಮ್ಮ ತೆರೆದ ಹೋಟೆಲ್ ಮುಂದೆ ಇಡೀ ದಾವಣಗೆರೆಯಲ್ಲೇ ಪ್ರಸಿದ್ಧಿ ಪಡೆಯಿತು.

ಚೆನ್ನಮ್ಮ ಮೊದಲು ರಾಗಿ ಹಿಟ್ಟಿನಿಂದ ದೋಸೆ ಮಾಡುತ್ತಿದ್ದರು. 1938ರಲ್ಲಿ ಮಕ್ಕಳೊಂದಿಗೆ ಸೇರಿ ಉದ್ದಿನ ಬೇಳೆ, ಮಂಡಕ್ಕಿ, ಅಕ್ಕಿಹಿಟ್ಟು, ಅಲ್ಲದೆ ಬೆಣ್ಣೆಯೊಂದಿಗೆ ದೋಸೆ ಮಾಡಲು ಆರಂಭಿಸಿದರು. ಬೆಣ್ಣೆ ದೋಸೆ ಸ್ಥಳೀಯವಾಗಿ ಹೆಚ್ಚು ಜನಪ್ರಿಯವಾಯಿತು. ಹಂತಹಂತವಾಗಿ ಚೆನ್ನಮ್ಮ ತೆರೆದಿದ್ದ ಈ ಹೋಟೆಲ್‌ ಅನ್ನು ಅವರ ಪುತ್ರರಾದ ಮಹದೇವಪ್ಪ ಹಾಗು ಶಾಂತಪ್ಪ ಮುಂದುವರೆಸಿಕೊಂಡು ಬಂದರು.

ಶಾಂತಪ್ಪ 1994ರಲ್ಲಿ 'ಶಾಂತಪ್ಪ ಬೆಣ್ಣೆ ದೋಸೆ ಹೋಟೆಲ್'ನ್ನು ತೆರೆದರು. ಇದು ದಾವಣಗೆರೆಯ ಅತ್ಯಂತ ಹಳೆಯ ಬೆಣ್ಣೆ ದೋಸೆ ಹೋಟೆಲ್ ಆಗಿದೆ. ಅಂದು ನಗರದ ಗಡಿಯಾರ ಗೋಪುರದ ಹತ್ತಿರ ಶಾಂತಪ್ಪ ಬೆಣ್ಣೆ ದೋಸೆ ಹೋಟೆಲ್ ಆರಂಭಿಸಿದ ಅಂಗಡಿಯನ್ನು ಪ್ರಸ್ತುತ ಅವರ ಪುತ್ರ‌ ಗಣೇಶ್ ನಡೆಸುತ್ತಿದ್ದಾರೆ. ಚೆನ್ನಮ್ಮರ ಮತ್ತೋರ್ವ ಪುತ್ರ ಮಹದೇವಪ್ಪ ನಗರದ ವಸಂತ ಚಿತ್ರಮಂದಿರ ಬಳಿ ಹೋಟೆಲ್​ ತೆರೆದಿದ್ದರು. ಈಗ ಆ ಹೋಟೆಲ್​ ಇಲ್ಲ. ಅಂದಿನಿಂದ ಇಲ್ಲಿಯತನಕ ಬೆಣ್ಣೆ ದೋಸೆ ಹಂತಹಂತವಾಗಿ ಜನಪ್ರಿಯತೆ ಪಡೆಯಿತು. ಇದೀಗ ದಾವಣಗೆರೆ ನಗರದಲ್ಲಿ ನೂರಾರು ಬೆಣ್ಣೆ ದೋಸೆ ಹೋಟೆಲ್ ಆರಂಭವಾಗಿದ್ದು, ಈ ಎಲ್ಲಾ ಹೋಟೆಲ್​ ಗಳಿಗೆ ದಾವಣಗೆರೆ ಸುತ್ತಮುತ್ತಲಿನ ಗ್ರಾಮಗಳಿಂದ ಬೆಣ್ಣೆ ಸರಬರಾಜಾಗುತ್ತದೆ.

ಇದನ್ನೂ ಓದಿ:ದಾವಣಗೆರೆ ಬೆಣ್ಣೆ ದೋಸೆ ಸವಿದ ರಮ್ಯಾ.. ಪದ್ಮಾವತಿ​ ನೋಡಲು ಮುಗಿಬಿದ್ದ ಫ್ಯಾನ್ಸ್​, ಟ್ರಾಫಿಕ್​ ಜಾಮ್​

Last Updated : Dec 21, 2023, 10:14 PM IST

ABOUT THE AUTHOR

...view details