ಕರ್ನಾಟಕ

karnataka

By

Published : Jan 2, 2023, 7:45 PM IST

ETV Bharat / state

ವನ್ಯಜೀವಿಗಳು ಪತ್ತೆ ಪ್ರಕರಣ: ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

ದಾವಣಗೆರೆ ಫಾರ್ಮ್ ಹೌಸ್​​ನಲ್ಲಿ ವನ್ಯಜೀವಿಗಳು ಪತ್ತೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಜಿ ಸಚಿವರ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ಮುಂದೂಡಿದೆ.

anticipatory-bail-application-hearing-adjourned-in-wildlife-detection-case
ವನ್ಯಜೀವಿಗಳು ಪತ್ತೆ ಪ್ರಕರಣ

ದಾವಣಗೆರೆ:ನಗರದ ಮಾಜಿ ಸಚಿವರ ಫಾರ್ಮ್ ಹೌಸ್​​ನಲ್ಲಿ ವನ್ಯಜೀವಿಗಳು ಪತ್ತೆ ಪ್ರಕರಣ ಸಂಬಂಧ ನಿರೀಕ್ಷಣಾ ಜಾಮೀನು ಆದೇಶಕ್ಕೆ ಜನವರಿ 5ರಂದು ದಿನಾಂಕ ನಿಗದಿಪಡಿಸಿ ನ್ಯಾಯಾಲಯ ವಿಚಾರಣೆ ಮುಂದೂಡಿದೆ. ಎ4 ಆರೋಪಿಯಾಗಿರುವ ಜಾಗದ ಮಾಲೀಕರಾದ ಮಾಜಿ ಸಚಿವರ ಮೇಲೆ ಪ್ರಕರಣ ದಾಖಲಾದ ಬೆನ್ನಲ್ಲೇ ಅವರು ನಿರೀಕ್ಷಣಾ ಜಾಮೀನಿಗಾಗಿ ನ್ಯಾಯಾಲಯದ ಮೊರೆ ಹೋಗಿದ್ದರು.

ಈ ಬಗ್ಗೆ ಸೋಮವಾರ ಅರ್ಜಿ ವಿಚಾರಣೆ ನಡೆಸಿದ ದಾವಣಗೆರೆಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಜನವರಿ 5ಕ್ಕೆ ವಿಚಾರಣೆ ಮುಂದೂಡಿದೆ. ಮಾಜಿ ಸಚಿವರ ಪರ ವಾದ ಮಂಡಿಸಿದ ಹಿರಿಯ ವಕೀಲ ಪ್ರಕಾಶ್ ಪಾಟೀಲ್, 'ಒಂದೇ ಪ್ರಕರಣಕ್ಕೆ ಎರಡು ಕಡೆ ಪ್ರಕರಣ ದಾಖಲಿಸಲಾಗಿದ್ದು, ಇದರಲ್ಲಿ ತಾಂತ್ರಿಕ ದೋಷವಾಗಿದೆ. ಬೆಂಗಳೂರಿನ ಸಿಸಿಬಿ ಅಧಿಕಾರಿಗಳಿಂದ ಒಂದು ಪ್ರಕರಣ ಹಾಗೂ ದಾವಣಗೆರೆ ಅರಣ್ಯ ಇಲಾಖೆಯಿಂದ ಇನ್ನೊಂದು ಪ್ರಕರಣ ಸೇರಿ ಒಟ್ಟು ಎರಡು ಕೇಸ್ ದಾಖಲಿಸಲಾಗಿದೆ.

ಮೇಲಾಗಿ ನನ್ನ ಕಕ್ಷಿದಾರರು ಪ್ರತಿಷ್ಠಿತ ವ್ಯಕ್ತಿಗಳು, ಸಮಾಜದಲ್ಲಿ ಹೆಸರಿರುವ ವ್ಯಕ್ತಿಗೆ ಜಾಮೀನು ನೀಡಬೇಕು' ಎಂದು ವಾದ ಮಂಡಿಸಿದರು. ಆದರೆ, ಸರ್ಕಾರಿ ಅಭಿಯೋಜಕರು ಇದಕ್ಕೆ ಪ್ರತಿವಾದ ಮಂಡಿಸಿ, ಇದು ವನ್ಯ ಜೀವಿಗಳ ಪ್ರಕರಣವಾದ ಕಾರಣ ಮಾಜಿ ಸಚಿವರಿಗೆ ಜಾಮೀನು ನೀಡದಂತೆ ಆಗ್ರಹಿಸಿದರು. ವಾದ, ಪ್ರತಿವಾದ ಆಲಿಸಿದ ಕೋರ್ಟ್​ ವಿಚಾರಣೆಯನ್ನು ಮುಂದೂಡಿತು.

ಪ್ರಕರಣದ ಹಿನ್ನೆಲೆ:ಡಿಸೆಂಬರ್​ 21ರಂದು ಮಾಜಿ ಸಚಿವರ ಒಡೆತನದ ಮಿಲ್ ಹಿಂಭಾಗದ ಫಾರ್ಮ್ ಹೌಸ್‌ನಲ್ಲಿ 11 ಕೃಷ್ಣಮೃಗ, 7 ಜಿಂಕೆಗಳು, 7 ಕಾಡುಹಂದಿ, 3 ಮುಂಗುಸಿ ಹಾಗೂ 2 ನರಿಗಳು ಪತ್ತೆಯಾಗಿದ್ದವು. ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿ ಈ ಎಲ್ಲ ವನ್ಯಜೀವಿಗಳನ್ನು ಸ್ಥಳೀಯ ಅರಣ್ಯ ಇಲಾಖೆಗೆ ಹಸ್ತಾಂತರಿಸಿದ್ದರು. ವನ್ಯಜೀವಿಗಳನ್ನು ಆನಗೋಡಿನ ಕಿರುಪ್ರಾಣಿ ಸಂಗ್ರಹಾಲಯಕ್ಕೆ ಸ್ಥಳಾಂತರಿಸಲಾಗಿದೆ.

ಬೆಂಗಳೂರು ಸಿಸಿಬಿ ಹಾಗೂ ದಾವಣಗೆರೆ ಅರಣ್ಯ ಇಲಾಖೆ ಜಂಟಿ‌ ಕಾರ್ಯಾಚರಣೆ ನಡೆಸಿ ಪ್ರಕರಣ ದಾಖಲಿಸಿದ್ದರು. ಇದರಲ್ಲಿ ಎ1 ಅರೋಪಿ ಸಂಪಣ್ಣ, ಎ2 ಆರೋಪಿ ಕರಿಬಸವಯ್ಯ, ಎ3 ಆರೋಪಿ ಸೆಂಥಿಲ್ ಹಾಗೂ ಮಿಲ್​ ಜಾಗದ ಮಾಲೀಕರಾದ ಮಾಜಿ ಸಚಿವರೊಬ್ಬರು ಎ4 ಆರೋಪಿಯಾಗಿದ್ದಾರೆ. ಈ ಹಿಂದೆ ಡಿ.31ರಂದು ಪ್ರಕರಣಕ್ಕೆ ಸಂಬಂಧಿಸಿದಂತೆ ದಾವಣಗೆರೆಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಆರೋಪಿಗಳಾದ ಕರಿಬಸವಯ್ಯ, ಸಂಪಣ್ಣ, ಸೆಂಥಿಲ್​ಗೆ ನೋಟಿಸ್ ನೀಡುವಂತೆ ಸೂಚನೆ ನೀಡಿತ್ತು.

ಈ ಪ್ರಕರಣದಲ್ಲಿ ನಾಲ್ಕನೇ ಆರೋಪಿಯಾಗಿರುವ ಮಾಜಿ‌ ಸಚಿವರು ವಕೀಲರ ಮೂಲಕ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆಯನ್ನು ಕೋರ್ಟ್​ ಜನವರಿ 2ಕ್ಕೆ ಮುಂದೂಡಿತ್ತು. ಮಾಜಿ ಸಚಿವರ ಪರ ನ್ಯಾಯವಾದಿ ಪ್ರಕಾಶ ಪಾಟೀಲ್ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು.

ಇದನ್ನೂ ಓದಿ: ವನ್ಯಜೀವಿಗಳು ಪತ್ತೆ ಪ್ರಕರಣ: ಆರೋಪಿಗಳಿಗೆ ನೋಟಿಸ್ ನೀಡುವಂತೆ ಕೋರ್ಟ್​ ಸೂಚನೆ

ABOUT THE AUTHOR

...view details