ದಾವಣಗೆರೆ :ವಿಷಕಾರಿ ಹುಲ್ಲು ಸೇವಿಸಿ 34 ಕುರಿಗಳು ಮೃತಪಟ್ಟಿರುವ ಧಾರುಣ ಘಟನೆ ದಾವಣಗೆರೆ ತಾಲೂಕಿನ ಮಾಯಕೊಂಡ ಬಳಿಯ ಒಂಟಿಹಾಳ್ ಗ್ರಾಮದಲ್ಲಿ ನಡೆದಿದೆ. ಸಾವನ್ನಪ್ಪಿದ ಕುರಿಗಳು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಕುರಿದಾಸರಹಳ್ಳಿ ನಿವಾಸಿ ಡಿ. ಮಂಜಪ್ಪ ಎಂಬುವರಿಗೆ ಸೇರಿವೆ ಎಂದು ತಿಳಿದು ಬಂದಿದೆ. ಶನಿವಾರದ ದಿನದಂದು ಅಡಿಕೆ ತೋಟದಲ್ಲಿ ಹುಲ್ಲು ಮೇಯುವ ವೇಳೆ ವಿಚಿತ್ರ ಹುಲ್ಲು ತಿಂದು ಇದ್ದಕ್ಕಿದ್ದಂತೆ ಕುರಿಗಳು ಸಾವನ್ನಪ್ಪಿವೆ.
ವಿಷಕಾರಿ ಹುಲ್ಲು ತಿನ್ನುತ್ತಿದ್ದಂತೆ ಒಂದಾದ ಮೇಲೆ ಒಂದರಂತೆ ಸಾವನ್ನಪ್ಪಿದ ಕುರಿಗಳನ್ನು ಮಂಜಪ್ಪ ಉಳಿಸಿಕೊಳ್ಳಲು ಹರಸಾಹಸ ಪಟ್ರು ಕೂಡ ಕುರಿಗಳನ್ನು ಉಳಿಸಿಕೊಳ್ಳಲಾಗಲಿಲ್ಲ. ಇನ್ನೂ 50ಕ್ಕೂ ಹೆಚ್ಚು ಕುರಿಗಳು ಅಸ್ವಸ್ಥವಾಗಿದ್ದು, ಸಕಾಲಕ್ಕೆ ಪಶುವೈದ್ಯರಿಂದ ಚಿಕಿತ್ಸೆ ಕೊಡಿಸಿದ್ದರಿಂದ ಅವು ಪ್ರಾಣಾಪಾಯದಿಂದ ಪಾರಾಗಿವೆ.
34 ಕುರಿಗಳನ್ನು ಕಳೆದುಕೊಂಡ ಕುರಿಗಾಹಿ ಮಂಜಪ್ಪ ಪರಿಹಾರಕ್ಕಾಗಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಅಸ್ವಸ್ಥತೆಯಿಂದ ಕೂಡಿದ ಕುರಿಗಳಿಗೆ ಚಿಕಿತ್ಸೆ ಮುಂದುವರೆಸಬೇಕಾಗಿದೆ ಎಂದು ಪಶುವೈದ್ಯರು ಕುರಿಗಾಹಿ ಮಂಜಪ್ಪಗೆ ತಿಳಿಸಿದ್ದಾರೆ.