ಮಂಗಳೂರು:ಕೊರೊನಾ ಸೋಂಕಿನಿಂದ ಮೃತಪಟ್ಟ ಮಹಿಳೆಯ ಅಂತ್ಯಸಂಸ್ಕಾರ ನಡೆಸದಂತೆ ಜನರು ಅಡ್ಡಿಪಡಿಸಿರೋದು ವಿಷಾದದ ಘಟನೆಯಾಗಿದ್ದು, ಇಡೀ ಜಿಲ್ಲೆಯೇ ತಲೆತಗ್ಗಿಸುವಂತಾಗಿದೆ. ಇದರಲ್ಲಿ ಶಾಸಕರೂ ಸೇರಿರೋದು ದುರಾದೃಷ್ಟಕರ ಸಂಗತಿ ಎಂದು ಶಾಸಕ ಯು.ಟಿ. ಖಾದರ್ ಅಸಮಾಧಾನ ವ್ಯಕ್ತಪಡಿಸಿದರು.
ಸೋಂಕಿತೆಯ ಅಂತ್ಯಸಂಸ್ಕಾರಕ್ಕೆ ಅಡ್ಡಿಪಡಿಸಿದ ಶಾಸಕರ ನಡೆ ದುರಾದೃಷ್ಟಕರ: ಖಾದರ್ ಅಸಮಾಧಾನ - u t khadar latest news
ಕೊರೊನಾ ಸೋಂಕಿನಿಂದ ಮೃತಪಟ್ಟ ಮಹಿಳೆಯ ಅಂತ್ಯಸಂಸ್ಕಾರ ನಡೆಸದಂತೆ ಜನರು ಅಡ್ಡಿಪಡಿಸಿರೋದು ದುರಾದೃಷ್ಟಕರ ಸಂಗತಿ ಎಂದು ಶಾಸಕ ಯು.ಟಿ. ಖಾದರ್ ಅಸಮಾಧಾನ ವ್ಯಕ್ತಪಡಿಸಿದರು.

ನಗರದ ಸರ್ಕ್ಯೂಟ್ ಹೌಸ್ನಲ್ಲಿ ಮಾತನಾಡಿದ ಅವರು, ಜನಸಾಮಾನ್ಯರಿಗೆ ಗೊಂದಲ ಇರೋದು ಸಹಜ. ಆದರೆ ಜನಪ್ರತಿನಿಧಿಗಳು, ಶಾಸಕರು ಜನರಿಗೆ ಮನವರಿಕೆ ಮಾಡಬೇಕಿತ್ತು. ಆದರೆ, ಅದರ ಬದಲು ಅವರೊಂದಿಗೇ ಸೇರಿ ಪ್ರತಿಭಟಿಸುವುದು ಎಷ್ಟು ನ್ಯಾಯ ಎಂದು ಅವರು ಪ್ರಶ್ನಿಸಿದರು.
ರೋಗವನ್ನು ಯಾರೂ ಕೇಳಿ, ಪಡೆದುಕೊಂಡು ಬಂದಿರೋದಿಲ್ಲ. ಅದರಲ್ಲೂ ಮೃತದೇಹವನ್ನು ಆ ರೀತಿಯಲ್ಲಿ ತಿರುಗಾಡಿಸಿರೋದು ಎಷ್ಟು ಸರಿ. ಈ ನಡುವೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರ ಕಾರ್ಯ ಮೆಚ್ಚುವಂತಹದ್ದು ಎಂದು ಹೇಳಿದರು. ಜಿಲ್ಲಾಡಳಿತ ಅಂತ್ಯಸಂಸ್ಕಾರಕ್ಕೆ ಸಮರ್ಪಕ ರೀತಿಯಲ್ಲಿ ಕಾರ್ಯ ಯೋಜನೆ ಮಾಡಬೇಕಿತ್ತು. ಅದು ಬಿಟ್ಟು ಒಂದು ಕಡೆಯಿಂದ ಇನ್ನೊಂದು ಕಡೆಗೆ ಮೃತದೇಹವನ್ನು ಕೊಂಡೊಯ್ದಿರೋದು ಸರಿಯಲ್ಲ. ಯಾವುದೇ ಪ್ಲಾನಿಂಗ್ ಇಲ್ಲದೇ ಮೃತದೇಹವನ್ನು ರಸ್ತೆ ಬದಿ ಇಟ್ಟು ಚರ್ಚೆ ಮಾಡಿರೋದು ದುರಾದೃಷ್ಟಕರ ಸಂಗತಿ ಎಂದು ಖೇದ ವ್ಯಕ್ತಪಡಿಸಿದರು.