ಬಂಟ್ವಾಳ :ಮಂಗಳೂರಿನ ವಿಮಾನ ನಿಲ್ದಾಣದ ಸರ್ವಾಂಗೀಣ ಅಭಿವೃದ್ಧಿಗೆ ಪ್ರಧಾನಿ ಮೋದಿ ಹಾಗೂ ನಾಗರಿಕ ವಿಮಾನಯಾನ ಸಚಿವಾಲಯ ತಲುಪುವಂತೆ ಮಾಡಲು ಸೆ.15ರ ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಟ್ವಿಟ್ಟರ್ ಅಭಿಯಾನವೊಂದನ್ನು ನಡೆಸಲಾಗುತ್ತದೆ. ಈ ಕುರಿತು ಈಗಾಗಲೇ ಸಮಾನ ಮನಸ್ಕರ ತಂಡವೊಂದು ವಾಟ್ಸಾಪ್ ಗುಂಪೊಂದನ್ನು ರಚಿಸಿದೆ. ಫ್ಲೈಫ್ರಂಐಎಕ್ಸ್ಇ ಎಂದು ಹ್ಯಾಶ್ ಟ್ಯಾಗ್ನೊಂದಿಗೆ ಆಂಗ್ಲ ಪದದಲ್ಲಿ ಬರೆದು, ವಿಮಾನ ನಿಲ್ದಾಣಕ್ಕೆ ಹೆಚ್ಚು ವಿಮಾನ ಬರುವಂತಾಗುವ ಅಗತ್ಯಗಳು ಮತ್ತು ಮೂಲ ಸೌಕರ್ಯಗಳ ಅಭಿವೃದ್ಧಿಯನ್ನು ವಿವರಿಸಿ ಟ್ವೀಟ್ ಮಾಡಬೇಕು ಎಂದು ತಿಳಿಸಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ, ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ನಾಗರಿಕ ವಿಮಾನಯಾನ ಸಚಿವರಿಗೆ ಟ್ವೀಟ್ ಮಾಡಬೇಕಾಗುತ್ತದೆ ಎಂದು ಹೇಳಿದೆ. ಮಂಗಳೂರು, ಬಂಟ್ವಾಳ, ಪುತ್ತೂರು ಸಹಿತ ಹಲವು ಪ್ರದೇಶಗಳ ಯುವಕರು ಈ ಗುಂಪಿನಲ್ಲಿದ್ದಾರೆ. ಪುತ್ತೂರಿನ 18ರ ಹರೆಯದ ಯುವಕ ಶ್ರೀಕರ ಇದರ ರೂವಾರಿಗಳಲ್ಲೊಬ್ಬರು. ಇವರಂತೆ ಬೇರೆ ಬೇರೆ ಭಾಗಗಳ ಯುವಕರು, ಹಿರಿಯರು ಟ್ವೀಟ್ನ ಅಗತ್ಯಗಳು ಹಾಗೂ ಮಂಗಳೂರು ವಿಮಾನ ನಿಲ್ದಾಣದಿಂದ ಜನಸಾಮಾನ್ಯರಿಗೂ ಒದಗಬಹುದಾದ ಲಾಭಗಳನ್ನು ಪಾಯಿಂಟ್ ಮಾಡಿಕೊಂಡಿದ್ದಾರೆ. ಎಲ್ಲವನ್ನೂ ಸೆ.15ರಂದು ಬೆಳಗ್ಗಿನಿಂದ ಸಂಜೆವರೆಗೆ ಸತತ ಟ್ವೀಟ್ ಮಾಡುವುದರ ಮೂಲಕ ಟ್ವಿಟ್ಟರ್ನಲ್ಲಿ ಜನಪ್ರಿಯಗೊಳಿಸಿ, ಪ್ರಧಾನಿಯನ್ನು ತಲುಪುವುದು ಇವರ ಉದ್ದೇಶ.