ಮಂಗಳೂರು :ತುಳುಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಬೇಕು. ಅಧಿಕೃತ ರಾಜ್ಯ ಭಾಷೆಯಾಗಿ ಘೋಷಣೆ ಮಾಡಬೇಕೆಂಬ ಕೂಗು ಬಹಳಷ್ಟು ವರ್ಷಗಳಿಂದ ಕೇಳಿ ಬರುತ್ತಿದೆ. ಇದೀಗ 'ಪ್ರತ್ಯೇಕ ತುಳುರಾಜ್ಯ'ವಾಗಲಿ ಎಂಬ ಬೇಡಿಕೆ ಗರಿಗೆದರಿದ್ದು, ಇದಕ್ಕಾಗಿ ಟ್ವೀಟ್ ಅಭಿಯಾನ ನಡೆದಿದೆ.
ಕರ್ನಾಟಕ ರಾಜ್ಯ ರಚನೆಯಾಗಿ 64 ವರ್ಷಗಳು ಕಳೆದರೂ, ತುಳುಭಾಷೆಗೆ ಈವರೆಗೆ ಅಧಿಕೃತ ಸ್ಥಾನಮಾನ ದೊರಕಿಲ್ಲ. ಇಷ್ಟರವರೆಗೆ ರಾಜ್ಯವನ್ನು ಆಳಿರುವ ಸರ್ಕಾರಗಳ ನಿರ್ಲಕ್ಷ್ಯತನವನ್ನು ಖಂಡಿಸಿ ತುಳುಭಾಷೆಯನ್ನು ಮಾಡನಾಡುವ ಜನರಿರುವ ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಸೇರಿಸಿ ಪ್ರತ್ಯೇಕ ತುಳುನಾಡು ರಾಜ್ಯ ಸ್ಥಾಪನೆಗೆ ಹಕ್ಕೊತ್ತಾಯ ಕೇಳಿ ಬಂದಿದೆ.
ಈ ಹಿನ್ನೆಲೆ ತುಳುವಿಗೆ ಸ್ಥಾನಮಾನ ದೊರಕಬೇಕು, ತುಳು ರಾಜ್ಯ ಆಗಬೇಕು, ತುಳು ಭಾಷೆಯ ಮೇಲೆ ಕನ್ನಡ ಹೇರಿಕೆ ನಿಲ್ಲಬೇಕು ಎಂಬ ಉದ್ದೇಶದಿಂದ #StopKannadaImposition, #SaveTuluFirst, #TulunaduState ಎಂಬ ಹ್ಯಾಶ್ಟ್ಯಾಗ್ನೊಂದಿಗೆ 'ಟ್ವೀಟ್ ತುಳುನಾಡು ಕ್ಯಾಂಪೇನ್' ಎಂಬ ಹಕ್ಕೊತ್ತಾಯ ಕೇಳಿ ಬಂತು. ತುಳು ಭಾಷೆಯ ಉಳಿವಿಗಾಗಿ ಹೋರಾಡುವ ಎಲ್ಲಾ ತುಳು ಸಂಘಟನೆಗಳ ಬೆಂಬಲದೊಂದಿಗೆ ಭಾನುವಾರ ಬೆಳಗ್ಗೆ 6ರಿಂದ ಮಧ್ಯರಾತ್ರಿ 12ರವರೆಗೆ ಈ ಟ್ವೀಟ್ ಅಭಿಯಾನ ನಡೆಯಿತು.