ಮಂಗಳೂರು: ಕಾನೂನು ಸುವ್ಯವಸ್ಥೆ ಪಾಲನೆ, ಅಪರಾಧ ಪತ್ತೆಹಚ್ಚಲು, ಗುಪ್ತ ಮಾಹಿತಿ ಸಂಗ್ರಹ ಹಾಗೂ ಸ್ಥಳೀಯರೊಡನೆ ಉತ್ತಮ ಒಡನಾಟ ಇಟ್ಟುಕೊಳ್ಳುವ ದೃಷ್ಟಿಯಿಂದ ನಗರ ಕಮಿಷನರೇಟ್ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುವ ಅನ್ಯ ಜಿಲ್ಲೆಯ ಪೊಲೀಸರಿಗೆ ತುಳು ಭಾಷೆಯನ್ನು ಕಲಿಸುವ ಉದ್ದೇಶದಿಂದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.
ಮಂಗಳೂರು ನಗರ ಪೊಲೀಸರಿಗೆ ತುಳು ಶಿಕ್ಷಣ ರಾಜ್ಯ ತುಳು ಸಾಹಿತ್ಯ ಅಕಾಡೆಮಿಯ ಸಹಯೋಗದೊಂದಿಗೆ ಒಂದು ತಿಂಗಳ ತುಳು ಭಾಷಾ ಕಾರ್ಯಾಗಾರವನ್ನು ಇಂದಿನಿಂದ ಹಮ್ಮಿಕೊಳ್ಳಲಾಗಿದೆ. ಮಂಗಳೂರು ಪೊಲೀಸ್ ಆಯುಕ್ತರ ಕಚೇರಿ ಸಭಾಂಗಣದಲ್ಲಿಯೇ ತುಳು ತರಗತಿ ನಡೆಯಲಿದೆ. ಇಂದಿನಿಂದ 50 ಮಂದಿ ಪೊಲೀಸ್ ಸಿಬ್ಬಂದಿ ತುಳುಭಾಷಾ ಕಾರ್ಯಾಗಾರದಲ್ಲಿ ಭಾಗವಹಿಸಿದ್ದಾರೆ. ಬೆಳಗ್ಗೆ 10 ರಿಂದ ಮಧ್ಯಾಹ್ನ 1ರವರೆಗೆ ತರಗತಿಗಳು ನಡೆಯಲಿವೆ. ದಿನಕ್ಕೆ ಮೂರು ಹಂತದಲ್ಲಿ ಕಲಿಕೆ ಇರಲಿದೆ. ಈ ಮೂಲಕ ಒಂದು ತಿಂಗಳಲ್ಲಿ ಸಿಬ್ಬಂದಿ ತುಳು ಭಾಷೆ ಕಲಿಯಲು ಶಕ್ತರಾಗುವಂತೆ ಮಾಡಲಾಗುತ್ತದೆ.
ಈ ಬಗ್ಗೆ ಮಂಗಳೂರು ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಮಾತನಾಡಿ, ಪೊಲೀಸ್ ಇಲಾಖೆ ಸಾರ್ವಜನಿಕರೊಂದಿಗೆ ಬಹಳ ಹತ್ತಿರವಾಗಿ ಬೆರೆಯಬೇಕಾಗುತ್ತದೆ. ಈ ಸಂದರ್ಭ ಸ್ಥಳೀಯ ಭಾಷೆಯಲ್ಲಿ ಸಂವಹನ ಮಾಡುವ ಅಗತ್ಯವಿದೆ. ಸ್ಥಳೀಯ ಭಾಷೆ ಸಂವಹನದಿಂದ ಸಮಸ್ಯೆಗಳು ಶೀಘ್ರ ಬಗೆಹರಿದಿರೋದನ್ನು ಕಾಣುತ್ತೇವೆ. ಪ್ರಾರಂಭದಲ್ಲಿ 50 ಜನರಿಗೆ ತುಳುಭಾಷಾ ತರಬೇತಿ ನೀಡಲಾಗುತ್ತದೆ. ಮುಂದಿನ ದಿನಗಳಲ್ಲಿ ಉಳಿದವರಿಗೂ ತರಬೇತಿ ನೀಡಲಾಗುತ್ತದೆ ಎಂದು ಹೇಳಿದರು.
ರಾಜ್ಯ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್ ಸಾರ್ ಮಾತನಾಡಿ, ಕರಾವಳಿಯಲ್ಲಿ ಇಲಾಖೆಯಲ್ಲಿ ಕೆಲಸ ಮಾಡುವವರಿಗೆ ಪ್ರಾದೇಶಿಕ ಭಾಷೆಯಾದ ತುಳು ಭಾಷೆ ಕಲಿಯೋದು ಭಾರಿ ಅವಶ್ಯಕತೆ ಇರುತ್ತದೆ. ಹೊರ ಜಿಲ್ಲೆಯ ಪೊಲೀಸ್ ಸಿಬ್ಬಂದಿಗೆ ತುಳುಭಾಷೆಯನ್ನು ಕಲಿಸುವ ಕೆಲಸವನ್ನು ಕರ್ನಾಟಕ ರಾಜ್ಯ ತುಳು ಸಾಹಿತ್ಯ ಅಕಾಡೆಮಿ ಮಾಡುತ್ತಿದೆ. ಇಲ್ಲಿ ಕಲಿತ ಪೊಲೀಸರಿಗೆ ಅಕಾಡೆಮಿ ವತಿಯಿಂದ ಸರ್ಟಿಫಿಕೇಟ್ ಅನ್ನೂ ನೀಡಲಾಗುತ್ತದೆ ಎಂದರು.