ಕರ್ನಾಟಕ

karnataka

By

Published : Feb 24, 2021, 7:37 PM IST

ETV Bharat / state

ವೈಜ್ಞಾನಿಕ ಗಣಿಗಾರಿಕೆಗೆ ಕೌಶಲ್ಯ ತರಬೇತಿ ವಿಶ್ವವಿದ್ಯಾಲಯ ಆರಂಭಿಸಲು ಚಿಂತನೆ: ಸಚಿವ ನಿರಾಣಿ

ಈಗ ಗಣಿಗಾರಿಕೆ ಮಾಡುವವರು ಕೌಶಲ್ಯ ರಹಿತರಾಗಿದ್ದಾರೆ. ಇವರು ಅವೈಜ್ಞಾನಿಕವಾಗಿ ಗಣಿಗಾರಿಕೆ ನಡೆಸುತ್ತಿದ್ದಾರೆ. ಅವರು ವೈಜ್ಞಾನಿಕವಾಗಿ ಗಣಿಗಾರಿಕೆ ನಡೆಸಿದರೆ ಈಗ ಮಾಡುವ ಗಣಿಗಾರಿಕೆಗಿಂತಲೂ ದುಪ್ಪಟ್ಟು ಮಾಡಬಹುದಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್​​ ನಿರಾಣಿ ಹೇಳಿದ್ದಾರೆ.

Murugesh R Nirani
ಮುರುಗೇಶ್ ಆರ್ ನಿರಾಣಿ

ಮಂಗಳೂರು: ಗಣಿಗಾರಿಕೆಯನ್ನು ವೈಜ್ಞಾನಿಕವಾಗಿ ನಡೆಸಲು ಕೌಶಲ್ಯ ತರಬೇತಿ ನೀಡುವ ವಿಶ್ವವಿದ್ಯಾಲಯ ಆರಂಭಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗ ಗಣಿಗಾರಿಕೆ ಮಾಡುವವರು ಕೌಶಲ್ಯ ರಹಿತರಾಗಿದ್ದಾರೆ. ಇವರು ಅವೈಜ್ಞಾನಿಕವಾಗಿ ಗಣಿಗಾರಿಕೆ ನಡೆಸುತ್ತಿದ್ದಾರೆ. ಅವರು ವೈಜ್ಞಾನಿಕವಾಗಿ ಗಣಿಗಾರಿಕೆ ನಡೆಸಿದರೆ ಈಗ ಮಾಡುವ ಗಣಿಗಾರಿಕೆಗಿಂತಲೂ ದುಪ್ಪಟ್ಟು ಮಾಡಬಹುದಾಗಿದೆ. ಅದಕ್ಕಾಗಿ ಅವರಿಗೆ ತರಬೇತಿ ನೀಡಲು ನಿರ್ಧರಿಸಲಾಗಿದೆ. ಈಗಾಗಲೇ ಈ ಪ್ರಸ್ತಾವನೆಗೆ ಮುಖ್ಯಮಂತ್ರಿಗಳು ಸಮ್ಮತಿ ಸೂಚಿಸಿದ್ದಾರೆ ಎಂದು ತಿಳಿಸಿದರು.

ಸಚಿವ ಮುರುಗೇಶ್ ನಿರಾಣಿ

ಚಿಕ್ಕಬಳ್ಳಾಪುರದಲ್ಲಿ‌ ನಡೆದ ದುರ್ಘಟನೆಯ ಬಗ್ಗೆ ಕಾಂಗ್ರೆಸ್ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ವಿರೋಧ ಪಕ್ಷದ ನಾಯಕರಿಗೆ ಬೇರೆ ಏನು ಕೆಲಸವಿದೆ. ಶಿವಮೊಗ್ಗದಲ್ಲಿ ದುರ್ಘಟನೆ ನಡೆದಾಗಲು ನಮ್ಮ ನಾಯಕರ ಮೇಲೆ ಆರೋಪ ಮಾಡಿದ್ದಾರೆ. ಯಾವ ಜಿಲ್ಲೆಯಲ್ಲಿ ಏನೇ ಆದರೂ ನಮ್ಮ ನಾಯಕರ ಮೇಲೆ ಆರೋಪ ಮಾಡುತ್ತಾರೆ. ಶಿವಮೊಗ್ಗ ಘಟನೆ ಬಳಿಕ ನಮ್ಮ ಸರ್ಕಾರ ಗಣಿಗಾರಿಕೆ ನಡೆಯುವಲ್ಲಿ ದಾಳಿ ಮಾಡುತ್ತಿದ್ದು, ಇದರಿಂದ ಹೆದರಿದ ಅವರು ಅದನ್ನು ಬೇರೆಡೆಗೆ ಕೊಂಡೊಯ್ಯಲು ಹೋದಾಗ ಈ ಘಟನೆ ನಡೆದಿದೆ ಎಂದರು.

ಕರಾವಳಿ ಜಿಲ್ಲೆಗಳಿಗೆ ಪ್ರತ್ಯೇಕ ಮರಳು ನೀತಿಯನ್ನು ಜಾರಿಗೊಳಿಸಲಾಗುವುದು. ಗಣಿಗಾರಿಕೆಗೆ ಸಂಬಂಧಿಸಿದ ಸಮಸ್ಯೆ ಪರಿಹರಿಸಲು ಮೈನ್ಸ್ ಅದಾಲತ್ ನಡೆಸಲಾಗುವುದು ಎಂದರು.

ಪಂಚಮಶಾಲಿಗಳನ್ನು 3ಬಿ ವರ್ಗಕ್ಕೆ ಸೇರಿಸಿದ್ದು ಯಡಿಯೂರಪ್ಪ ಸರ್ಕಾರ. ಬಳಿಕ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 2ಎ ನೀಡುವ ಪ್ರಸ್ತಾವನೆಯನ್ನು ತಿರಸ್ಕರಿಸಿ ಆ ಪ್ರಕ್ರಿಯೆ ಸ್ಥಗಿತಗೊಳಿಸಿದ್ದರು. ಇದೀಗ ಇಡೀ ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಶಿಕ್ಷಣ ಮತ್ತು ಔದ್ಯೋಗಿಕ ಮೀಸಲಾತಿ ನೀಡುವ ಅಗತ್ಯ ಇದೆ ಎಂದರು.

ABOUT THE AUTHOR

...view details