ಕರ್ನಾಟಕ

karnataka

By

Published : Sep 19, 2022, 7:21 PM IST

ETV Bharat / state

ಶಾಲಾ ಮಕ್ಕಳ ಕೈಯಲ್ಲಿದ್ದ ರಕ್ಷಾಬಂಧನ ಬಿಚ್ಚಿಸಿದ ವಿಚಾರ: ಸುಖಾಂತ್ಯ ಕಂಡ ಪ್ರಕರಣ

ಪಾಪೆಮಜಲು ಸರ್ಕಾರಿ ಪ್ರಾಥಮಿಕ ಶಾಲೆ ಮಕ್ಕಳ ಕೈಯಲ್ಲಿದ್ದ ರಕ್ಷಾಬಂಧನವನ್ನು ಬಿಚ್ಚುವಂತೆ ಮುಖ್ಯೋಪಾಧ್ಯಾಯರು ವಿದ್ಯಾರ್ಥಿಗಳಿಗೆ ಸೂಚಿಸಿದ್ದರು. ಇದಕ್ಕೆ ಪೋಷಕರು, ಸಂಘಟನೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಮತ್ತೆ ಮಕ್ಕಳ ಕೈಗೆ ರಕ್ಷಾಬಂಧನವನ್ನು ಕಟ್ಟುವ ಮೂಲಕ ಪ್ರಕರಣ ಇತ್ಯರ್ಥಗೊಂಡಿದೆ.

Rakshabandan on the hands of the school children
ಶಾಲಾ ಮಕ್ಕಳ ಕೈಯಲ್ಲಿದ್ದ ರಕ್ಷಾಬಂಧನ ಬಿಚ್ಚಿಸಿದ ವಿಚಾರ

ಪುತ್ತೂರು:ಮಕ್ಕಳ ಕೈಯಲ್ಲಿದ್ದ ರಕ್ಷಾಬಂಧನವನ್ನು ಶಾಲೆಯಲ್ಲಿ ಬಿಚ್ಚುವಂತೆ ಹೇಳಿದ ಘಟನೆ ಪಾಪೆಮಜಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಮಕ್ಕಳ ಪೋಷಕರು, ಸಂಘಟನೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದರು. ಸೋಮವಾರ ಮಕ್ಕಳ ಪೋಷಕರು ಶಾಲಾ ಮುಖ್ಯೋಪಾಧ್ಯಾಯರ ಜೊತೆ ಮಾತುಕತೆ ನಡೆಸಿ, ಮತ್ತೆ ಮಕ್ಕಳ ಕೈಗೆ ರಕ್ಷಾಬಂಧನವನ್ನು ಕಟ್ಟಿಸಿದ್ದಾರೆ. ಈ ಮೂಲಕ ಪ್ರಕರಣವು ಸುಖಾಂತ್ಯ ಕಂಡಿದೆ.

ಪಾಪೆಮಜಲು ಸರ್ಕಾರಿ ಪ್ರಾಥಮಿಕ ಶಾಲೆ ಮಕ್ಕಳ ಕೈಯಲ್ಲಿದ್ದ ರಕ್ಷಾಬಂಧನವನ್ನು ಬಿಚ್ಚುವಂತೆ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕರು ಹೇಳಿದ್ದರು. ಈ ಬಗ್ಗೆ ಅರಿತ ಮಕ್ಕಳ ಪೋಷಕರು ಶಾಲೆಗೆ ಬಂದು ಮುಖ್ಯೋಪಾಧ್ಯಾಯರಾದ ತೆರೇಜ್ ಎಂ ಸಿಕ್ವೇರಾ ಮತ್ತು ಶಿಕ್ಷಕರ ಜೊತೆ ಮಾತುಕತೆ ನಡೆಸಿದರು.

ಶಾಲಾ ಮಕ್ಕಳ ಕೈಯಲ್ಲಿದ್ದ ರಕ್ಷಾಬಂಧನ ಬಿಚ್ಚಿಸಿದ ವಿಚಾರ

ಮುಖ್ಯೋಪಾಧ್ಯಾಯರು ಹೇಳಿದ್ದೇನು?: ಈ ವೇಳೆ ಶಾಲಾ ಮುಖ್ಯೋಪಾಧ್ಯಾಯರು ಮಾತನಾಡಿ, ಮಕ್ಕಳ ಆರೋಗ್ಯದ ದೃಷ್ಟಿಯಿಂದ ಅದನ್ನು ಬಿಚ್ಚುವಂತೆ ಹೇಳಲಾಗಿತ್ತು. ಬೇರೆ ಯಾವ ಉದ್ದೇಶದಿಂದ ಅಲ್ಲ. ಮಕ್ಕಳ ಕೈಯಲ್ಲಿದ್ದ ರಕ್ಷಾಬಂಧನವು ತುಂಬಾ ಕಪ್ಪಾಗಿತ್ತು. ಈ ಹಿನ್ನೆಲೆ ಮಕ್ಕಳ ಆರೋಗ್ಯ ಕಾಳಜಿಯಿಂದಾಗಿ ಅದನ್ನು ಬಿಚ್ಚಿಡುವಂತೆ ಹೇಳಲಾಗಿತ್ತು ಎಂದರು.

ಪೋಷಕರ ಅಭಿಪ್ರಾಯವೇನು?: ಈ ವೇಳೆ ಮಾತನಾಡಿದ ಮಕ್ಕಳ ಪೋಷಕರು, ರಕ್ಷಾಬಂಧನವನ್ನು ರಕ್ಷಣೆಯ ಸಂಕೇತವಾಗಿ ಕಟ್ಟಲಾಗುವುದೇ ಹೊರತು, ಬೇರೆ ವಿಚಾರದಿಂದಲ್ಲ. ಅದೇ ರೀತಿ ಈ ವರ್ಷ ಕಟ್ಟಿದ ರಕ್ಷಾಬಂಧನವನ್ನು ಮುಂದಿನ ವರ್ಷದಲ್ಲಿಯೇ ಬಿಚ್ಚುವುದಲ್ಲದೆ, ಮಧ್ಯೆ ಎಲ್ಲಿಯೂ ಬಿಚ್ಚಲಾಗುವುದಿಲ್ಲ ಎಂದು ರಕ್ಷಾಬಂಧನದ ಬಗೆಗಿನ ಮಹತ್ವವನ್ನು ತಿಳಿಸಿದರು.

ಗೊಂದಲಕ್ಕೆ ತೆರೆ: ನಂತರ ಪೋಷಕರ ಬಳಿಯಲ್ಲಿದ್ದ ರಕ್ಷಾಬಂಧನವನ್ನು ಶಾಲಾ ಮುಖ್ಯೋಪಾಧ್ಯಾಯರು ತೆಗೆದುಕೊಂಡು ಮಕ್ಕಳಿಗೆ ಕಟ್ಟಿದರು. ಈ ಮೂಲಕ ಶಾಲೆಯಲ್ಲಿ ರಕ್ಷಾಬಂಧನವನ್ನು ಬಿಚ್ಚಿಸಿದ ಗೊಂದಲದ ವಿಚಾರಕ್ಕೆ ತೆರೆ ಎಳೆಯಲಾಯಿತು. ಹಾಗೆಯೇ ಈ ವಿಚಾರವನ್ನು ಇಲ್ಲಿಯೇ ಬಿಡುವುದಾಗಿ ಪೋಷಕರು ತಿಳಿಸಿದರು.

ಇದನ್ನೂ ಓದಿ:ಮಂಗಳೂರು: ಮದರಸಾ ಶಿಕ್ಷಕನಿಂದ ಬಾಲಕನಿಗೆ ಹಲ್ಲೆ

ಪಾಪೆಮಜಲು ಶಾಲಾ ಮುಖ್ಯೋಪಾಧ್ಯಾಯರಾದ ತೆರೇಜ್ ಎಂ ಸಿಕ್ವೇರಾ ರವರು ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಭಾಜನರಾಗಿದ್ದರು. ಅವರ ಪ್ರಶಸ್ತಿ ವಿತರಣಾ ವಿಚಾರದಲ್ಲಿಯೂ ಸಾಕಷ್ಟು ಗೊಂದಲ ಸೃಷ್ಟಿಯಾಗಿತ್ತು. ಈ ಸಂದರ್ಭದಲ್ಲಿ ಹಿಂದೂ ಸಂಘಟನೆಯ ರಾಜೇಶ್ ಪೆರಿಗೇರಿ, ವಿಶಾಕ್ ರೈ, ನಾರಾಯಣ್ ಚಾಕೋಟೆ, ಬಾಲಕೃಷ್ಣ ಕಾವು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ABOUT THE AUTHOR

...view details