ಬೆಳ್ತಂಗಡಿ: ಬಂಡವಾಳ ಹೂಡಿಕೆ ಕಡಿಮೆ ಮಾಡಿ, ಹೆಚ್ಚು ಆದಾಯ ಗಳಿಸಿ, ಯಂತ್ರೋಪಕರಣ ಬಳಕೆಯಿಂದ ಕೃಷಿ ಆಕರ್ಷಣೆಯಾಗಲಿ ಎಂಬುದೇ ನನ್ನ ಆಶಯ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ತಿಳಿಸಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ. ಟ್ರಸ್ಟ್, ಕೃಷಿ ವಿಭಾಗ ಕೇಂದ್ರ ಕಚೇರಿ ಧರ್ಮಸ್ಥಳ ಇದರ ವತಿಯಿಂದ ಕ್ಷೇತ್ರದ ಭತ್ತದ ಗದ್ದೆಗಳಲ್ಲಿ ಯಾಂತ್ರೀಕೃತ ಹಾಗೂ ಸಾಂಪ್ರದಾಯಿಕ ಭತ್ತದ ಬೇಸಾಯ ವಿಧಾನಗಳನ್ನು ಅಳವಡಿಸಿ, ಅಧ್ಯಯನ ನಡೆಸಿ, ಅನುಷ್ಠಾನಗೊಳಿಸಿದ ಕ್ಷೇತ್ರದ ದೇವಳದ ಹಿಂಭಾಗದ ಗದ್ದೆಯಲ್ಲಿ ಭತ್ತದ ಕಟಾವು ಕಾರ್ಯವನ್ನು ಬುಧವಾರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ನಂತರ ಮಾತನಾಡಿದ ಅವರು, ಗ್ರಾಮೀಣ ಭಾಗ ವಿಕಾಸ ಆಗಿರುವುದರಿಂದ ಜನ ಜೀವನದಲ್ಲಿ ಬಹಳ ದೊಡ್ಡ ಬದಲಾವಣೆ ಆಗಿದೆ. ಕೃಷಿ ಕ್ಷೇತ್ರದಲ್ಲೂ ಯಂತ್ರೋಪಕರಣ ಬಳಕೆಯಿಂದ ರೈತರಿಗೆ ಲಾಭದಾಯಕವಿದೆ. ಆದರೆ, ವಿಶೇಷವಾಗಿ ಕೆಲವು ವಿದ್ಯಾವಂತರಾದ ಮಕ್ಕಳು ಸ್ವತಃ ಕೆಸರು ಮೆತ್ತಿಸಿಕೊಳ್ಳಲು ಇಷ್ಟಪಡುವುದಿಲ್ಲ. ಈ ಸಂದರ್ಭದಲ್ಲಿ ಕೃಷಿ ಅನುಭವಸ್ಥ ಕಾರ್ಮಿಕರನ್ನು ಅವಲಂಬಿಸಬೇಕಾಗಿದೆ ಎಂದ ಅವರು, ಈಗ ಯಾಂತ್ರೀಕರಣ ಕೃಷಿ ಪದ್ಧತಿ ಬಹಳ ಒಳ್ಳೆಯ ಪರಿವರ್ತನೆ ಆಗಲಿದೆ ಎಂದು ತಿಳಿಸಿದರು.