ಮಂಗಳೂರು:ದೇಶದಲ್ಲಿ ತ್ರಿವಳಿ ತಲಾಖ್ ನಿಷೇಧವಿದ್ದರೂ ಆಗಾಗ ತಲಾಖ್ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಇದಕ್ಕೆ ಹೊಸ ನಿದರ್ಶನವೆಂಬಂತೆ ಮಂಗಳೂರಿನಲ್ಲಿ ಮದುವೆಯಾದ ಆರೇ ತಿಂಗಳಲ್ಲಿ ನಿರ್ದಯಿ ಪತಿಯೋರ್ವನು ಪತ್ನಿ ಮೇಲೆ ಹಲ್ಲೆ ನಡೆಸಿ ತಲಾಖ್ ಹೇಳಿ ದಾಂಪತ್ಯವನ್ನೇ ಮುರಿದ ಘಟನೆ ನಡೆದಿದೆ.
ನಗರದ ಮಂಗಳಾದೇವಿ ಸಮೀಪದ ಮಾರ್ನಮಿಕಟ್ಟೆ ನಿವಾಸಿ ಮಹಮ್ಮದ್ ಹುಸೇನ್ ಪತ್ನಿ ಶಬಾನಾ ಅವರನ್ನು ಹಿಂಸಿಸಿ ತಲಾಖ್ ನೀಡಿದ್ದಾರೆ ಎಂದು ಪತ್ನಿ ದೂರಿದ್ದಾರೆ. ಶಬಾನಾಗೆ ಮೊದಲ ಮದುವೆಯಲ್ಲಿ ಎರಡು ಮಕ್ಕಳಿದ್ದವು. ಮೊದಲ ಪತಿಯಿಂದ ಬೇರೆಯಾಗಿದ್ದ ಶಬಾನಾ ಆರು ತಿಂಗಳ ಹಿಂದಷ್ಟೇ ಹುಸೇನ್ ಎಂಬವರನ್ನು ವರಿಸಿದ್ದರು. ಎರಡು ತಿಂಗಳು ಚೆನ್ನಾಗಿಯೇ ಸಂಸಾರ ನಡೆದಿತ್ತು. ಬಳಿಕ ನಯವಾಗಿ ಮಾತನಾಡಿ ಸಾಲದಲ್ಲಿದ್ದೇನೆ ಎಂದು ಹುಸೇನ್ ಪತ್ನಿಯ ಚಿನ್ನಾಭರಣ ಸೇರಿ 10 ಲಕ್ಷ ರೂಪಾಯಿ ಪಡೆದು ಪತ್ನಿಯನ್ನು ತವರು ಮನೆಯಲ್ಲೇ ಬಿಟ್ಟಿದ್ದರಂತೆ.
ಅಷ್ಟೇ ಅಲ್ಲದೇ ಗರ್ಭಿಣಿಯಾಗಿದ್ದ ಆಕೆಗೆ ಬಲವಂತವಾಗಿ ಮಾತ್ರೆ ತಿನ್ನಿಸಿ ಗರ್ಭಪಾತ ಕೂಡ ಮಾಡಿಸಿದ್ದರಂತೆ. ಶಾಬಾನಾ ಹುಸೇನ್ ಮನೆಗೆ ಬಂದಿದ್ದ ವೇಳೆ ಮನಬಂದಂತೆ ಥಳಿಸಿ ಮೂರು ಬಾರಿ ತಲಾಖ್ ಹೇಳಿ ದಾಂಪತ್ಯ ಸಂಬಂಧಕ್ಕೆ ತಿಲಾಂಜಲಿ ಇಟ್ಟರಂತೆ. ತೀವ್ರ ಹಲ್ಲೆಯಿಂದ ಗಾಯಗೊಂಡಿದ್ದ ಶಬಾನಾ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೊದಲ ಪತ್ನಿಗೂ ತಲಾಖ್ ಹೇಳಿ ಸಂಬಂಧ ಕಡಿದುಕೊಂಡಿದ್ದ ಹುಸೇನ್ ಇದೀಗ ಎರಡನೇ ಪತ್ನಿಗೂ ತಲಾಖ್ ಹೇಳಿದ್ದಾರೆ. ಪರಿಣಾಮ ಸಂತ್ರಸ್ತೆ ಶಬಾನಾ ನ್ಯಾಯಕ್ಕಾಗಿ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಹುಸೇನ್ ವಿರುದ್ಧ ದೂರು ದಾಖಲಿಸಿದ್ದಾರೆ. ತನಗಾದ ಅನ್ಯಾಯ ಮತ್ತೊಬ್ಬ ಹೆಣ್ಣಿಗೆ ಆಗಬಾರದೆಂದು ಮಾಧ್ಯಮದ ಮುಂದೆ ಅಳಲು ತೋಡಿಕೊಂಡರು.