ಕರ್ನಾಟಕ

karnataka

ETV Bharat / state

ಲೈವ್ ಮೂಲಕ ಯಕ್ಷರಸಿಕರು ಇರುವಲ್ಲಿಯೇ ಪ್ರದರ್ಶನಗೊಳ್ಳುತ್ತಿದೆ ತಾಳಮದ್ದಳೆ ಸಪ್ತಾಹ...!

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ವತಿಯಿಂದ ಲಾಕ್ ಡೌನ್​ನಿಂದ ಆಟ-ಕೂಟವಿಲ್ಲದೆ ನಿರಾಸೆಗೊಂಡಿರುವ ಯಕ್ಷಪ್ರಿಯರಿಗಾಗಿ ಯೂಟ್ಯೂಬ್ ಚ್ಯಾನಲ್​ನಲ್ಲಿ ಲೈವ್ ತಾಳಮದ್ದಳೆ ಸಪ್ತಾಹ ಆಯೋಜಿಸಲಾಗಿದೆ.

By

Published : May 28, 2020, 4:59 PM IST

ತಾಳಮದ್ದಳೆ
ತಾಳಮದ್ದಳೆ

ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ವತಿಯಿಂದ ಲಾಕ್ ಡೌನ್​ನಿಂದ ಆಟ-ಕೂಟವಿಲ್ಲದೆ ನಿರಾಸೆಗೊಂಡಿರುವ ಯಕ್ಷಪ್ರಿಯರಿಗಾಗಿ ಯೂಟ್ಯೂಬ್ ಚ್ಯಾನಲ್​ನಲ್ಲಿ ಲೈವ್ ತಾಳಮದ್ದಳೆ ಸಪ್ತಾಹ ಆಯೋಜಿಸಲಾಗಿದೆ.

ಮೇ 25 ರಿಂದ 31 ರವರೆಗೆ ದಿನವೂ ಅಪರಾಹ್ನ 3.45ರಿಂದ ಸಂಜೆ 6 ರವರೆಗೆ ಯೂಟ್ಯೂಬ್ ಲೈವ್ ಮೂಲಕ ಈ ತಾಳಮದ್ದಳೆಯನ್ನು ಆಯೋಜಿಸಲಾಗಿದೆ. ಈವರೆಗೆ ಮೂರು ತಾಳಮದ್ದಳೆಯನ್ನು ದೇಶ ವಿದೇಶಗಳಲ್ಲಿರುವ ಯಕ್ಷ ರಸಿಕರು ತಾವಿರುವಲ್ಲಿಯೇ ಕುಳಿತು ವೀಕ್ಷಿಸಿದ್ದರು. ತೆಂಕು 4, ಬಡಗು 3 ಹಾಗೂ ತುಳುವಿನ 1 ಸೇರಿ ಒಟ್ಟು ಏಳು ತಾಳಮದ್ದಳೆಗಳನ್ನು ಆಯೋಜಿಸಲಾಗಿದೆ. ಏಳು ದಿನಗಳಲ್ಲಿ 45-50 ಕಲಾವಿದರು ಈ ಕೂಟದಲ್ಲಿ ಭಾಗವಹಿಸಲಿದ್ದಾರೆ.

ತಾಳಮದ್ದಳೆ ಸಪ್ತಾಹ ಪ್ರದರ್ಶನ

ಈಗಾಗಲೇ ಅಂಗಧ ಸಂಧಾನ, ಕರ್ಣಾವಸಾನ, ತುಳುನಾಡ ಬಲಿಯೇಂದ್ರ ತಾಳಮದ್ದಳೆ ಯಶಸ್ವಿಯಾಗಿ ನೆರವೇರಿದ್ದು, ಇಂದು ಕರ್ಮ ಬಂಧನ ಪ್ರಸಂಗ ಪ್ರಸ್ತುತಿಗೊಳ್ಳಲಿದೆ. ಉಳಿದಂತೆ ಸುಧನ್ವಾರ್ಜುನ, ಉತ್ತರನ ಪೌರುಷ, ಗದಾಯುದ್ಧ ತಾಳಮದ್ದಳೆ 31ರವರೆಗೆ ಜರುಗಲಿದೆ. ಮೇ 25 ರಿಂದ ಮೂರು ದಿನಗಳಲ್ಲಿ ಸಂಜೆ ವೇಳೆ ನಡೆಯುವ ಈ ತಾಳಮದ್ದಳೆ ಲೈವ್ ಅನ್ನು ದಿನವೂ ಕನಿಷ್ಠ ಪಕ್ಷ 800-1000 ಮಂದಿ ದೇಶ ವಿದೇಶಗಳ ಯಕ್ಷ ರಸಿಕರು ವೀಕ್ಷಿಸಿದ್ದಾರೆ.

ಈ ಬಗ್ಗೆ ಯಕ್ಷಧ್ರುವ ಪಟ್ಲ ಫೌಂಡೇಶನ್​ನ ಅಧ್ಯಕ್ಷ ಪಟ್ಲ ಸತೀಶ್‌ ಶೆಟ್ಟಿ ಮಾತನಾಡಿ, ಯಾವುದೇ ಅಪ್ರತಿಮ ನೈಪುಣ್ಯತೆ ಹೊಂದಿದ ಕಲಾವಿದರಿದ್ದರೂ, ಅವರಿಗೆ ವೇದಿಕೆ ಇಲ್ಲದಿದ್ದಲ್ಲಿ ಅವರಲ್ಲಿರುವ ಕಲೆ ವ್ಯರ್ಥವಾಗುತ್ತದೆ. ಅಲ್ಲದೆ ಕೋವಿಡ್ ಸೋಂಕಿನ ಹಿನ್ನೆಲೆ ಯಕ್ಷಗಾನಕ್ಕೆ ಹಿಂದೆಂದೂ ಕಾಣದ ದೊಡ್ಡಮಟ್ಟದ ಹೊಡೆತ ಬಿದ್ದಿದೆ. ಪರಿಣಾಮ ಎರಡು ತಿಂಗಳಿನಿಂದ ಮುಂದಿನ ವರ್ಷದವರೆಗಿನ ಸಾಕಷ್ಟು ಆಟ-ಕೂಟಗಳು ರದ್ದುಗೊಂಡಿದೆ‌. ಯಕ್ಷಗಾನ ಸೀಮಿತ ವಲಯದ ಪ್ರೇಕ್ಷಕರನ್ನು ಆಕರ್ಷಿಸುವ ಕಲೆ. ಇದೀಗ ಸಾಕಷ್ಟು ತಿಂಗಳುಗಳ ಕಾಲ ಯಕ್ಷಗಾನ ಪ್ರದರ್ಶನ ಇಲ್ಲದಿದ್ದಲ್ಲಿ ಇರುವ ಪ್ರೇಕ್ಷಕರು ಮಾಯವಾಗುತ್ತಾರೆ. ಈ ಹಿನ್ನೆಲೆ ನಾವು ಯಕ್ಷಧ್ರುವ ಪಟ್ಲ ಫೌಂಡೇಶನ್ ವತಿಯಿಂದ ಈ ತಾಳಮದ್ದಳೆ ಸಪ್ತಾಹ ಆಯೋಜಿಸಿದ್ದೇವೆ. ಆದರೆ ಸರ್ಕಾರದ ಆದೇಶದಂತೆ ಆಯಾ ದಿನದ ಪ್ರಸಂಗದ ಅಗತ್ಯ ಕಲಾವಿದರು, ವಿಡಿಯೋ ಮಾಡುವವರು ಹೊರತು ಅನ್ಯರಿಗೆ ಕಾರ್ಯಕ್ರಮ ನಡೆಯುವಲ್ಲಿಗೆ ಪ್ರವೇಶವಿರದೆ, ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ABOUT THE AUTHOR

...view details